ಬೆಂಗಳೂರು : ವಿಶ್ವಕಂಡ ಮಹಾನ್ ಇಂಜಿನಿಯರ್ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ತತ್ವ, ಸಿದ್ದಾಂತ, ಆದರ್ಶ ಹಾಗೂ ತಂತ್ರಜ್ಞಾನವನ್ನು ಎಲ್ಲಾ ಇಂಜಿನಿಯರ್ಗಳು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಕರೆ ನೀಡಿದರು.
ಇಂಜಿನಿಯರ್ಗಳ ದಿನಾಚರಣೆ ಪ್ರಯುಕ್ತ ಕೆ.ಆರ್. ವೃತ್ತದ ಬಳಿಯ ಸರ್.ಎಂ. ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಅಪರಿಮಿತವಾದುದು. ಮೈಸೂರಿನ ಕೆ.ಆರ್. ಸಾಗರ, ಹಿರಿಯೂರಿನ ವಾಣಿವಿಲಾಸ ಸಾಗರ ಸೇರಿದಂತೆ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿದ್ದಾರೆ. ಕುಡಿಯುವ ನೀರಿಗಾಗಿ ವಿಜಯಪುರ ಸೇರಿದಂತೆ ಅನೇಕ ಕೆರೆಗಳನ್ನು ನಿರ್ಮಿಸಿದ್ದಾರೆ. ಅವರು ಅಂದು ನಿರ್ಮಿಸಿದ ಅಣೆಕಟ್ಟು, ಕೆರೆಗಳು ಇಂದಿಗೂ ಸುಭದ್ರವಾಗಿದ್ದು, ನೀರಾವರಿ ಹಾಗೂ ಕುಡಿಯುವ ನೀರಿನ ಮೂಲಕ್ಕೆ ಆಧಾರವಾಗಿವೆ. ಅಂತಹ ಪರಿಣಿತ ತಂತ್ರಜ್ಞಾನ ಹಾಗೂ ಪೂರಕ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಶಾಶ್ವತವಾಗಿರುವಂತಹ ಕಾಮಗಾರಿಗಳನ್ನು ಕೈಗೊಂಡು ಅಜರಾಮರವಾಗಿ ವಿಶ್ವವಿಖ್ಯಾತರಾಗಿದ್ದಾರೆ ಎಂದರು.
ಇಂದಿನ ಇಂಜಿನಿಯರ್ಗಳು ವಿಶ್ವೇಶ್ವರಯ್ಯನವರಂತಹ ತಂತ್ರಜ್ಞಾನದ ಪರಿಣಿತಿ ಪಡೆಯಬೇಕು. ಇಂಜಿನಿಯರ್ಗಳು ತಮ್ಮ ಉದ್ಯೋಗವನ್ನು ಕೇವಲ ಸರ್ಕಾರಿ ಸೇವೆ ಎಂದು ಭಾವಿಸದೆ, ದೇಶದ ಅಭಿವೃದ್ಧಿಗಾಗಿ, ಉನ್ನತಿಗಾಗಿ ಶ್ರಮಿಸಬೇಕು ಎಂದು ಹೇಳಿದರು.
ನೂತನ ಆವಿಷ್ಕಾರ, ಮೂಲಭೂತಸೌಕರ್ಯಗಳ ಅಭಿವೃದ್ಧಿ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ದಾಪುಗಾಲಿಡಲು ಹೆಮ್ಮೆಯ ಇಂಜಿನಿಯರ್ಗಳ ಕೊಡುಗೆ ಅಪರಾ ಎಂದ ಡಿಸಿಎಂ, ಇಂಜಿನಿಯರ್ಗಳಿಗೆ ಶುಭಾಶಯ ಕೋರಿದರು.