ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ ವಿಚಾರವಾಗಿ ಡಿಸಿಎಂ ಪರಮೇಶ್ವರ್ ರಾಜ್ಯದ ಭದ್ರತೆ ನಮ್ಮ ಪ್ರಥಮ ಆದ್ಯತೆ. ಪ್ರಪಂಚದಾದ್ಯಂತ ಭಯೋತ್ಪಾದಕ ಚಟುವಟಿಕೆಗಳು ನಡೀತಿರುತ್ತವೆ. ಇದನ್ನೆಲ್ಲಾ ನಾವು ಪ್ರತಿನಿತ್ಯ ಗಮನಿಸುತ್ತೇವೆ. ಇದಕ್ಕಾಗಿ ಪ್ರತ್ಯೇಕ ತಂಡವೇ ಇದೆ, ಅಲ್ಲದೆ ದೇಶದ ವಿವಿಧೆಡೆಯಿಂದಲೂ ಗುಪ್ತಚರ ವರದಿಗಳು ಬರುತ್ತವೆ. ರಾಜ್ಯದ ಭದ್ರತೆಯನ್ನು ನಾವು ಗಂಭೀರವಾಗಿ ತಗೆದುಕೊಂಡು ಪರಿಶೀಲಿಸುತ್ತೇವೆ ಎಂದರು.
ಸ್ಥಳೀಯ ಸಂಸ್ಥೆಗಳ ಫಲಿತಾಂಶ ಬಗ್ಗೆ ಮಾತನಾಡಿದ ಡಿಸಿಎಂ, ಕಾಂಗ್ರೆಸ್ 132 ವರ್ಷಗಳ ಇತಿಹಾಸ ಇರುವ ಪಕ್ಷ. ಸೋಲು-ಗೆಲುವು ಎಲ್ಲವನ್ನೂ ನಾವು ಕಂಡಿದ್ದೀವಿ. ಕಾಂಗ್ರೆಸ್ ಮತ್ತೆ ಬೌನ್ಸ್ ಬ್ಯಾಕ್ ಮಾಡಲಿದೆ. ಜನರ ಮೇಲೆ ಲೋಕಸಭಾ ಚುನಾವಣೆ ಫಲಿತಾಂಶ ಪ್ರಭಾವ ಬೀರಿದೆ. ಈ ಪ್ರಭಾವ ಹೋಗಲು ಸ್ವಲ್ಪ ಸಮಯ ಬೇಕು. ಬಿಜೆಪಿ ಸರ್ಕಾರದ ಆಡಳಿತದ ಬಂಡವಾಳ ಇನ್ನು ಕೆಲವು ತಿಂಗಳಲ್ಲಿ ಗೊತ್ತಾಗಲಿದೆ. ಮನಮೋಹನ್ ಸಿಂಗ್ ಕೂಡಾ 10 ವರ್ಷ ಅಧಿಕಾರ ನಡೆಸಿದ್ರು. ಜನಕ್ಕೆ ಬದಲಾವಣೆ ಬೇಕಿತ್ತು. ಭವಿಷ್ಯದಲ್ಲಿ ಮತ್ತೆ ಬದಲಾವಣೆ ಆಗಲಿದೆ ಎಂದು ಪರಂ ಭವಿಷ್ಯ ನುಡಿದರು.
ರಮೇಶ್ ಕುಮಾರ್ ಪತ್ರದ ಬಗ್ಗೆ ಡಿಸಿಎಂ ಪರಮೇಶ್ವರ್ ಮಾತನಾಡಿ, ರಮೇಶ್ ಕುಮಾರ್ ಅತ್ಯಂತ ಹಿರಿಯ ಶಾಸಕರು. ಅವರೀಗ ನಮ್ಮ ಸಭಾಧ್ಯಕ್ಷರಾಗಿದ್ದಾರೆ. ಅವರ ಅನುಭವದ ಆಧಾರದ ಮೇಲೆ ಯಾವುದು ಸರಿಯಿಲ್ಲ ಅನ್ಸುತ್ತೊ ಅದನ್ನು ಸರಿಯಿಲ್ಲ ಅಂತ ಹೇಳುವ ಪ್ರವೃತ್ತಿ ಅವರದ್ದು. ಅವರು ಹೇಳಿದ್ದನ್ನು ನಾವು ಸ್ವೀಕಾರ ಮಾಡ್ತೇವೆ. ಮುಖ್ಯಮಂತ್ರಿಯವರು ಕೂಡ ಸ್ವೀಕಾರ ಮಾಡ್ತಾರೆ. ನಾನು ಡಿಸಿಎಂ ಆಗಿ ಸಿಎಂ ಪರವಾಗಿ ಹೇಳ್ತೇನೆ. ಸರ್ಕಾರದಲ್ಲಿ ನನಗೂ ಕೂಡ ಜವಾಬ್ದಾರಿ ಇದೆ. ಅವರ ಸಲಹೆ ಸೂಚನೆ ಸ್ವೀಕರಿಸಿ ಪರಿಣಾಮಕಾರಿಯಾಗಿ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.