ಬೆಂಗಳೂರು: ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಕೋವಿಡ್- 19 ಪರಿಹಾರ ಕಾರ್ಯಗಳನ್ನು ಬೆಂಬಲಿಸಿ 30 ಐಸಿಯು ವೆಂಟಿಲೇಟರ್ಗಳನ್ನು ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ಗೆ (ಕೆಎಸ್ಎಂಎಸ್ಸಿಎಲ್)ಒದಗಿಸಿದೆ. ಇದಲ್ಲದೆ, ಕೋವಿಡ್ ವಿರುದ್ಧದ ಹೋರಾಟವನ್ನು ಬಲಪಡಿಸಲು ಫ್ಲಿಪ್ಕಾರ್ಟ್ 250 ಐಸಿಯು ಮಲ್ಟಿಪಾರಾ ಮಾನಿಟರ್ಗಳನ್ನು ರಾಜ್ಯಕ್ಕೆ ನೀಡುತ್ತಿದೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಫ್ಲಿಪ್ ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ನೇತೃತ್ವದ ನಿಯೋಗ ಭೇಟಿ ನೀಡಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಡಾ.ಎನ್.ಎನ್. ಅಶ್ವತ್ ನಾರಾಯಣ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ ಫ್ಲಿಪ್ ಕಾರ್ಟ್ ಮತ್ತು ವಾಲ್ ಮಾರ್ಟ್ ಸಂಸ್ಥೆಯ ವತಿಯಿಂದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಕೋವಿಡ್ ನಿರ್ವಹಣೆಗೆ ಜೀವ ರಕ್ಷಕ ವೈದ್ಯಕೀಯ ಉಪಕರಣಗಳನ್ನು ಸಿಎಂ ಅವರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಕೊರೊನಾ ಎರಡನೇ ಅಲೆ ವಿರುದ್ಧ ರಾಜ್ಯ ಸರ್ಕಾರವು ಎಲ್ಲಾ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ವ್ಯವಸ್ಥಿತವಾಗಿ ಕೈಗೊಂಡಿದೆ. ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಸಂಘ-ಸಂಸ್ಥಗಳು ಕೈಜೋಡಿಸುತ್ತಿರುವುದು ಶ್ಲಾಘನೀಯವಾಗಿದ್ದು, ಫ್ಲಿಪ್ ಕಾರ್ಟ್ ನೀಡಿದ 30 ಐಸಿಯು ವೆಂಟಿಲೇಟರ್ಗಳು ಮತ್ತು 250 ಐಸಿಯು ಮಲ್ಟಿಪಾರಾ ಮಾನಿಟರ್ಗಳ ಕೊಡುಗೆ ಪ್ರಶಂಸನೀಯವಾಗಿದೆ ಎಂದರು.
ಫ್ಲಿಪ್ ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ನಡೆಯುತ್ತಿರುವ ಈ ಹೋರಾಟದಲ್ಲಿ ಕೋವಿಡ್ ಪರಿಹಾರ ಕ್ರಮಗಳ ಕಡೆಗೆ ಸಂಪನ್ಮೂಲಗಳು ಲಭ್ಯವಾಗುವಂತೆ ಮಾಡಲು ಫ್ಲಿಪ್ ಕಾರ್ಟ್ ಸಣ್ಣ ಕೊಡುಗೆ ನೀಡಿದೆ. ನಾವು ನೀಡಿದ ಐಸಿಯು ವೆಂಟಿಲೇಟರ್ಗಳು ಮತ್ತು ಮಲ್ಟಿಪಾರಾ ಮಾನಿಟರ್ಗಳು ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ವೈದ್ಯಕೀಯ ವ್ಯವಸ್ಥೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.
ರಿನ್ಯೂ ಪವರ್ ಸಂಸ್ಥೆಯಿಂದ 1.1 ಕೋಟಿ ಮೊತ್ತದ ವೈದ್ಯಕೀಯ ಪರಿಕರ ದೇಣಿಗೆ: ರಿನ್ಯೂ ಪವರ್ ಸಂಸ್ಥೆಯ ವತಿಯಿಂದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಕೋವಿಡ್ ನಿರ್ವಹಣೆಗೆ 1.1 ಕೋಟಿ ರೂ.ಗಳ ಮೊತ್ತದ ಜೀವ ರಕ್ಷಕ ವೈದ್ಯಕೀಯ ಉಪಕರಣಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು. ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ರಿನ್ಯೂ ಪವರ್ ಸಂಸ್ಥೆಯ ಅಧ್ಯಕ್ಷ ರಾಮಸುಂದರಮ್,ಉಪಾಧ್ಯಕ್ಷ ಕೆ.ಎಸ್.ವಿಶ್ವನಾಥ್ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಆರೋಗ್ಯ ಸಚಿವ ಸುಧಾಕರ್ ಸಮ್ಮುಖದಲ್ಲಿ ಸರ್ಕಾರಕ್ಕೆ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರ ಮಾಡಿದರು.
ಇದನ್ನೂ ಓದಿ: ಭಾವನಾತ್ಮಕ ಮೌಲ್ಯಗಳಿರುವ ಗಡಿ ಗ್ರಾಮಗಳ ಹೆಸರು ಬದಲಾವಣೆ ಬೇಡ: ಕೇರಳ ಸಿಎಂಗೆ ಬಿಎಸ್ವೈ ಪತ್ರ