ಬೆಂಗಳೂರು: ರಾಜ್ಯದ ರೈತರಿಗೆ ಬಿಜೆಪಿ ಸರ್ಕಾರ ದ್ರೋಹ ಎಸಗುವ ಕೆಲಸ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಪಕ್ಷ, ಅನ್ನದಾತರ ಮೇಲೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಿದ ರಾಜ್ಯ ಬಿಜೆಪಿ ಸರ್ಕಾರದಿಂದ ರೈತರ ಮೇಲೆ ಗದಾಪ್ರಹಾರ ಆಗಿದೆ. ಸಹಕಾರ ಸಂಘಗಳಿಂದ ಪಡೆದ ಸಾಲ ವಸೂಲಾತಿಗೆ ರೈತರ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಹಿಂಪಡೆಯುವ ಮೂಲಕ ರೈತರಿಗೆ ದೊಡ್ಡ ದ್ರೋಹ ಬಗೆಯುತ್ತಿದೆ ಎಂದು ಹೇಳಿದೆ.
ಹಳೆಯ ಪತ್ರ:
ರಾಜ್ಯ ಸರ್ಕಾರ 2019ರ ಡಿಸೆಂಬರ್ 27ರಂದು ಹೊಸ ಆದೇಶ ಹೊರಡಿಸಿ, ರೈತರ ಸುಸ್ತಿ ಸಾಲ ವಸೂಲಾತಿಗೆ ಆದೇಶ ನೀಡಿತ್ತು. ರೈತರ ಸುಸ್ತಿ ಸಾಲ ವಸೂಲಿ ಮಾಡಲು ಸಹಕಾರ ಬ್ಯಾಂಕ್ಗಳಿಗೆ ಆದೇಶ ನೀಡಿದ ಸರ್ಕಾರ ಆದೇಶಾನುಸಾರ ಬ್ಯಾಂಕ್ ನವರು ರೈತರ ಸಾಲ ವಸೂಲಿ, ಆಸ್ತಿ ಜಪ್ತಿ, ವಾಹನ ಜಪ್ತಿ ಮಾಡಬಹುದು ಎಂಬ ಸೂಚನೆ ನೀಡಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿ ಕಂಗಾಲಾಗಿದ್ದ ರೈತ ಸರ್ಕಾರದ ಆದೇಶದಿಂದ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.