ಬೆಂಗಳೂರು: ಕೊರೊನಾ ವೈರಸ್ ಹಾವಳಿಯಿಂದ ಮುಂದೂಡಲ್ಪಟ್ಟಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2022ರ ಫೆಬ್ರವರಿಯಲ್ಲಿ ಆಯೋಜಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಬೊಮ್ಮಾಯಿ, ಫೆಬ್ರವರಿ 9, 10 ಮತ್ತು 11ಕ್ಕೆ ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ವಿಧಾನಸೌಧದ ಆವರಣದಲ್ಲಿ ಬಸವೇಶ್ವರ ಪ್ರತಿಮೆಯನ್ನು ಸ್ಥಾಪಿಸುವ ಕುರಿತಂತೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಚ್ಚದ ಬಗ್ಗೆ ತೀರ್ಮಾನಿಸಲಿದ್ದಾರೆ. ಅಶ್ವಾರೂಢ ಬಸವೇಶ್ವರ ಪ್ರತಿಮೆ ಬದಲು ವಚನ ಬರೆಯುವ ಭಂಗಿ ಸೇರಿ ಇತರ ಭಂಗಿಗಳಲ್ಲಿನ ಪ್ರತಿಮೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
![Cabinet decided to installing of Basaveshwara Statue, Cabinet decided to installing of Basaveshwara Statue in Vidhanasoudha, Basavaraj bommai press meet, minister Basavaraj bommai press meet, ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಸಂಪುಟ ಸಭೆ ನಿರ್ಧಾರ, ವಿಧಾನಸೌಧದಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಸಂಪುಟ ಸಭೆ ನಿರ್ಧಾರ, ಕಾನೂನು ಸಚಿವ ಬೊಮ್ಮಾಯಿ ಸುದ್ದಿಗೋಷ್ಠಿ, ಕಾನೂನು ಸಚಿವ ಬೊಮ್ಮಾಯಿ ಸುದ್ದಿ,](https://etvbharatimages.akamaized.net/etvbharat/prod-images/12465180_bbrr.jpg)
ಕೋವಿಡ್ ಮೂರನೇ ಅಲೆ ಹಿನ್ನೆಲೆ ರಾಜ್ಯದಲ್ಲಿ ಆಕ್ಸಿಜನ್ ಘಟಕ ಆರಂಭಿಸಲು ವಿಶೇಷ ಪ್ರೋತ್ಸಾಹ ನೀಡಲು ಒಪ್ಪಿಗೆ ನೀಡಲಾಗಿದೆ. ಸದ್ಯ ರಾಜ್ಯದಲ್ಲಿ 6 ಆಕ್ಸಿಜನ್ ಘಟಕ ಇದ್ದು, ಇದನ್ನು ಇನ್ನೂ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಘಟಕ ಸ್ಥಾಪಿಸುವವರಿಗೆ ಶೇ 25ರಷ್ಟು ಬಂಡವಾಳ ಸಬ್ಸಿಡಿ, ವಿದ್ಯುತ್ ಸುಂಕದಿಂದ ಮೂರು ವರ್ಷಗಳಿಗೆ ಪೂರ್ಣ ವಿನಾಯಿತಿ, ಸ್ಟಾಂಪ್ ಡ್ಯೂಟಿಯಿಂದ ಸಂಪೂರ್ಣ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.
ಸಂಪುಟದ ಪ್ರಮುಖ ತೀರ್ಮಾನಗಳೇನು?:
- ಕೃಷಿ ಇಲಾಖೆಯಿಂದ ರಾಜ್ಯದಲ್ಲಿ 2021-22 ನೇ ಸಾಲಿನ ಬೆಳೆ ಸಮೀಕ್ಷೆ ಯೋಜನೆ ಜಾರಿಗೆ ಅನುಮೋದನೆ. ಆಪ್ ಮೂಲಕ ರೈತರೇ ಬೆಳೆ ಸಮೀಕ್ಷೆ ಮಾಡಲಿದ್ದಾರೆ. ಈ ಸಂಬಂಧ 48 ಕೋಟಿ ರೂ.ಗೆ ಅನುಮೋದನೆ
- ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಮೊದಲ ಹಂತದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಗೋ ಶಾಲೆ ತೆರೆಯಲು 15 ಕೋಟಿ ರೂ. ಮೊತ್ತಕ್ಕೆ ಸಂಪುಟ ಅನುಮತಿ. ಬಳಿಕ ಹಣ ಬಿಡುಗಡೆ ಮಾಡಲು ತೀರ್ಮಾನ
- ಜೆಒಸಿ ಕೋರ್ಸ್ಗಳನ್ನು ಪಿಯುಸಿ ತತ್ಸಮಾನ ಎಂದು ಪರಿಗಣಿಸಲು ತೀರ್ಮಾನ
- ಜೀವಾವಧಿ ಶಿಕ್ಷೆಗೆ ಒಳಗಾಗಿರುವ 135 ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸಂಪುಟ ಶಿಫಾರಸು
- ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿ ಬಿಲ್ 2021ನ್ನು ಅಧಿವೇಶನದಲ್ಲಿ ಮಂಡಿಸಲು ತೀರ್ಮಾನ
- ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ನಿರ್ವಹಣೆಗೆ ಹೋಟೆಲ್ ಆಪರೇಟರನ್ನು ಆಯ್ಕೆ ಮಾಡಲು ಹಾಗೂ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಲಿಮಿಟೆಡ್ಗೆ ಉಸ್ತುವಾರಿ ನೋಡಿಕೊಳ್ಳಲು ಒಪ್ಪಿಗೆ
- ಬೆಳಗಾವಿ ಮತ್ತು ಮಂಗಳೂರಿನಲ್ಲಿ ಒಟ್ಟು 31.66 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ
- 10 ನಗರ ಪಾಲಿಕೆಗಳಲ್ಲಿನ ಇಂದಿರಾ ಕ್ಯಾಂಟೀನ್ ಗಳಿಗೆ ಪೂರೈಸಿದ ಆಹಾರ ಸಹಾಯಧನ ಮೊತ್ತದಲ್ಲಿ ಸರ್ಕಾರದ ಪಾಲು ಪಾವತಿಗೆ ಒಪ್ಪಿಗೆ
- ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಗಾಂಧಿ ಪಾರ್ಕ್ ಮುಂಭಾಗ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಅಸ್ತು
- ಬಳ್ಳಾರಿ ಜಿಲ್ಲೆ ಸಿರುಗುಪ್ಪ ನಗರಕ್ಕೆ ಕುಡಿವ ನೀರು ಪೂರೈಕೆಗಾಗಿ 45.46 ಕೋಟಿ ರೂ. ವೆಚ್ಚದಲ್ಲಿ 2,500 ದಶಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಗಾರ ನಿರ್ಮಾಣ, ತುಂಗಭದ್ರಾ ಕೆಳಮಟ್ಟದ ಬಾಗೇವಾಡಿ ವಿತರಣಾ ಕಾಲುವೆಯಿಂದ ಈ ಜಲಾಗಾರಕ್ಕೆ ನೀರು ಒದಗಿಸಲು ಆಡಳಿತಾತ್ಮಕ ಅನುಮೋದನೆ. ಈ ಪೈಕಿ 28 ಕೋಟಿ ರೂ. ಭೂ ಸ್ವಾಧೀನಕ್ಕೆ ವೆಚ್ಚವಾಗಲಿದೆ.
- ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ, ರಾಹುತನ ಕೆರೆ ಹಾಗೂ ಇತರ 18 ಕೆರೆಗಳನ್ನು ಭರ್ತಿ ಮಾಡುವ 206 ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿಗೆ ಅನುನೋದನೆ
- ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದೇವಿಘಾಟ್ ಸಮೀಪದ ತುಂಗಭದ್ರಾ ನದಿಯಿಂದ ಮುಕ್ಕುಂಪಿ ಹಾಗೂ ಇತರ ಐದು ಕೆರೆಗಳನ್ನು ತುಂಬುವ 93 ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿಗೆ ಅನುಮೋದನೆ
- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ 1,100 ಹೆಕ್ಟೇರ್ ಪ್ರದೇಶಕ್ಕೆ ನೀರುಣ್ಣಿಸಲು ಉದ್ದೇಶಿತ 240 ಕೋಟಿ ರೂ ವೆಚ್ಚದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣದ ವಿಸ್ತೃತ ಯೋಜನಾ ವರದಿಗೆ ದೃಢೀಕರಣ.