ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿಗೆ ಮತ್ತೊಬ್ಬ ಬಾಲಕನ ಪ್ರಾಣಕ್ಕೆ ಕುತ್ತು ಉಂಟಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
ಎರಡು ದಿನದ ಹಿಂದೆಯಷ್ಟೇ ವಿದ್ಯುತ್ ತಂತಿ ತಗುಲಿ ಬಾಲಕ ವಿಕ್ರಮ್ ಎಂಬಾತ ಮೃತಪಟ್ಟಿದ್ದ. ನಿನ್ನೆ ಸಂಜೆ ಮಹಾಲಕ್ಷ್ಮಿ ಲೇಔಟ್ನ ನಾಗಲಿಂಗೇಶ್ವರ ದೇವಸ್ಥಾನದ ಬಳಿ 9 ವರ್ಷದ ಬಾಲಕ ಸಾಯಿಚರಣ್ ಬೇರೆ ಬಾಲಕರೊಂದಿಗೆ ಆಟ ಆಡುವಾಗ ಫುಟ್ಪಾತ್ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯ ಮೇಲೆ ಕಾಲಿಟ್ಟಿದ್ದರಿಂದ ಕೂಡಲೇ ವಿದ್ಯುತ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಾಲಕ ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಸಾಯಿಚರಣ್ ತಂದೆ ಬಸವರಾಜ್ ಟ್ಯಾಕ್ಸಿ ಓಡಿಸಿ ಜೀವನ ಮಾಡುತ್ತಿದ್ದಾರೆ. ಬಾಲಕನ ಮೇಲೆ ವಿದ್ಯುತ್ ಪ್ರವಹಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.