ಬೆಂಗಳೂರು: ಬಾಂಗ್ಲಾ ಯುವತಿಯ ಮೇಲೆ ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣದ ಸಂಬಂಧ ಯುವತಿಯಿಂದ ಇಂದು 164 ಸ್ಟೇಟ್ಮೆಂಟ್ ದಾಖಲಿಸಿಕೊಳ್ಳಲು ಸಿದ್ಧತೆ ನಡೆದಿದೆ.
164 ಹೇಳಿಕೆಗಾಗಿ ಯುವತಿಯನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ವೈದ್ಯಕೀಯ ಪರೀಕ್ಷೆ ಮಾಡಿಸಿದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಯುವತಿ ಕೋರ್ಟ್ಗೆ ತನ್ನ ಹೇಳಿಕೆ ನೀಡಲಿದ್ದಾಳೆ.
ಯುವತಿ ಮತ್ತು ಅತ್ಯಾಚಾರ ಪ್ರಕರಣದ ಸಂಪೂರ್ಣ ಮಾಹಿತಿ:
ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಬಾರ್ ಡ್ಯಾನ್ಸರ್ ಆಗಿದ್ದು, ಎರಡು ವರ್ಷಗಳ ಹಿಂದೆ ಭಾರತಕ್ಕೆ ಬಂದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದಳು ಎನ್ನಲಾಗಿದೆ. ಬಾಂಗ್ಲಾ ಮೂಲದ ಯುವತಿಯನ್ನು ಕೇರಳದಿಂದ ನಗರಕ್ಕೆ ಪೊಲೀಸರ ತಂಡ ಈಗಾಗಲೇ ಕರೆ ತಂದಿದ್ದು, ಮತ್ತೊಂದು ತಂಡ ಈಕೆಯ ಹಿನ್ನೆಲೆ ಬಗ್ಗೆ ಪತ್ತೆ ಹಚ್ಚಿದೆ.
ಎರಡು ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಸಂತ್ರಸ್ತೆ ಹೈದರಾಬಾದ್ಗೆ ಬಂದು ಮಸಾಜ್ ಪಾರ್ಲರ್ ನಡೆಸುತ್ತಿದ್ದಳು. ಇದಕ್ಕೂ ಮುನ್ನ ದುಬೈನಲ್ಲಿ ಬಾರ್ ಒಂದರಲ್ಲಿ ಡ್ಯಾನ್ಸರ್ ಆಗಿದ್ದಳು. ಹಣಕಾಸಿನ ಗಲಾಟೆಯಲ್ಲಿ ವೇಶ್ಯಾವಾಟಿಕೆ ಕೇಸ್ನಲ್ಲಿ ಓರ್ವನನ್ನು ಅರೆಸ್ಟ್ ಮಾಡಿಸಿದ್ದಳು. ನಂತರ ಬೆಂಗಳೂರಿಗೆ ಬಂದು ದಂಧೆ ನಡೆಸುತ್ತಿದ್ದಳು. ಇತ್ತೀಚೆಗೆ ಕೇರಳದ ಕಲ್ಲಿಕೋಟೆಯಲ್ಲಿ ಸ್ಪಾ ತೆರೆದು ದಂಧೆ ಮುಂದುವರೆಸಿದ್ದಳು ಎನ್ನಲಾಗಿದೆ.
ಆರೋಪಿಗಳನ್ನು ಭಾರತಕ್ಕೆ ಕರೆಯಿಸಿದ್ದ ಸಂತ್ರಸ್ತೆ:
ಬಂಧಿತ ಆರೋಪಿಗಳನ್ನು ಸಂತ್ರಸ್ತ ಯುವತಿಯೇ ಭಾರತಕ್ಕೆ ಕರೆಸಿಕೊಂಡಿದ್ದಳು. ತನ್ನ ದಂಧೆಗೆ ಸಹಕಾರ ಮತ್ತು ಸಹಾಯ ಮಾಡಲು ಕರೆಸಿಕೊಂಡ ಬಳಿಕ ಆರೋಪಿಗಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ನಗರದಲ್ಲಿಯೇ ನೆಲೆಸಲು ಆಶ್ರಯ ಕಲ್ಪಿಸಿದ್ದಳು. ನಂತರ ಹೊಸ ಹೊಸ ಯುವತಿಯರನ್ನು ಕರೆಸುವಂತೆ ಹೇಳುತ್ತಿದ್ದಳಂತೆ.
ಆರೋಪಿಗಳು ಕೇರಳದಲ್ಲಿ ದಂಧೆ ಶುರು ಮಾಡಿದ ಬಳಿಕ ಬೆಂಗಳೂರಿನಲ್ಲಿ ಇದ್ದ ಮೂವರು ಯುವತಿಯರನ್ನು ಕರೆದುಕೊಂಡು ಹೋಗಿದ್ದಳು. ಯುವತಿಯರನ್ನು ಕರೆದುಕೊಂಡು ಹೋಗಿದ್ದರಿಂದ ಆರೋಪಿಗಳು ಮುನಿಸಿಕೊಂಡಿದ್ದರು. ಅಲ್ಲದೆ ಹಣಕಾಸು ವ್ಯವಹಾರದಿಂದ ಬೇಸತ್ತಿದ್ದರು. ಮಾತುಕತೆ ನಡೆಸಬೇಕೆಂದು ಸಂತ್ರಸ್ತೆಯನ್ನು ನಗರಕ್ಕೆ ಕರೆಯಿಸಿಕೊಂಡಿದ್ದರಂತೆ.
ಮೇ 19ರಂದು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದಳು. ರಾಮಮೂರ್ತಿ ನಗರದ ಮನೆಯಲ್ಲಿ ಇದೇ ವಿಚಾರಕ್ಕೆ ಮಾತುಕತೆ ಇಟ್ಟುಕೊಂಡಿದ್ದರು. ಮೊದಲು ಮದ್ಯದ ಪಾರ್ಟಿ ಮಾಡಿದ್ದ ಗ್ಯಾಂಗ್ ನಂತರ ಹಣಕಾಸಿನ ವಿಚಾರ ತೆಗೆದು ಯುವತಿ ಜೊತೆ ಗಲಾಟೆ ಶುರು ಮಾಡಿದ್ದರು. ಬಳಿಕ ನಮಗೆ ಮೋಸ ಮಾಡ್ತೀಯಾ ಎಂದು ಹಿಂಸೆ ಕೊಟ್ಟು ಲೈಂಗಿಕ ದೌರ್ಜನ್ಯದ ವಿಕೃತಿ ಮೆರೆದು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದರು.
ಘಟನೆ ಬಳಿಕ ವಿಡಿಯೋವನ್ನು ಹೈದರಾಬಾದ್ನ ಓರ್ವನಿಗೆ ಕಳುಹಿಸಿದ್ದರು. ವಿಡಿಯೋ ನೋಡಿದ ಬಳಿಕ ಕೇಸ್ ಹಾಕಿಸುವುದಾಗಿ ಸಂತ್ರಸ್ತೆ ಕಡೆಯವರು ಆರೋಪಿಗಳಿಗೆ ಬೆದರಿಕೆ ಹಾಕಿದ್ದರು. ₹7 ಲಕ್ಷ ಹಣ ಕೊಟ್ಟರೆ ಪೊಲೀಸರಿಗೆ ದೂರು ಕೊಡುವುದಿಲ್ಲ ಎಂದಿದ್ದರಂತೆ. ಹಣ ನೀಡಿ ಆರೋಪಿಗಳು ಸೆಟಲ್ ಮಾಡಿಕೊಂಡಿದ್ದರು. ಘಟನೆ ಬಳಿಕ ಮಾರತ್ಹಳ್ಳಿ ಬಳಿಯಿರುವ ಬಾಂಗ್ಲಾದೇಶದ ಕೆಲ ಯುವಕರಿಗೆ ಮಾಹಿತಿ ಗೊತ್ತಾಗಿ ಆರೋಪಿಗಳ ಮೇಲೆ ಹಲ್ಲೆ ಮಾಡಿದ್ದರು.
ಹಲ್ಲೆ ಹಿನ್ನೆಲೆ ಆರೋಪಿಗಳ ಕೈ-ಕಾಲು ಹಾಗೂ ತಲೆಗೆ ಗಾಯಗಳಾಗಿದ್ದವು. ಬಳಿಕ ಸ್ಥಳೀಯರು 100ಕ್ಕೆ ಕರೆ ಮಾಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಹೊಡೆದಾಡಿಕೊಂಡಿದ್ದವರನ್ನು ವಶಕ್ಕೆ ಪಡೆದು ನಂತರ ವಾರ್ನ್ ಮಾಡಿ ಬಿಟ್ಟು ಕಳುಹಿಸಿದ್ದರು. ಗಲಾಟೆ ಬಳಿಕ ರೈಲಿನ ಮೂಲಕ ಕೇರಳದ ಕ್ಯಾಲಿಕಟ್ಗೆ ಸಂತ್ರಸ್ತೆ ಹೋಗಿದ್ದಳು. ಲಾಕ್ಡೌನ್ ನಿಯಮ ಉಲ್ಲಂಘನೆ ಸಂಬಂಧ ಕೆ.ಆರ್.ಪುರದಲ್ಲಿ ಪೊಲೀಸರು ಚೆಕ್ ಪೋಸ್ಟ್ನಲ್ಲಿ ಹಿಡಿದಿದ್ದರು.
ಇಬ್ಬರು ಪಿಎಸ್ಐ ಹಾಗೂ ಪೊಲೀಸರು ಸಂತ್ರಸ್ತೆ ಹಾಗೂ ಜೊತೆಗಿದ್ದ ಯುವತಿಯನ್ನು ಠಾಣೆಗೆ ಕರೆತಂದು ಕೂರಿಸಿದ್ದರು. ಪ್ರಾಥಮಿಕ ವಿಚಾರಣೆ ನಡೆದಾಗ ಗಲಾಟೆ ಮಾಡಿಕೊಂಡಿರುವ ವಿಚಾರ ಹೇಳಿ ಹಾಗೂ ಸ್ನೇಹಿತ ಕ್ಯಾಲಿಕಟ್ನಲ್ಲಿ ಇದ್ದಾನೆ ಎಂದು ರೈಲ್ವೆ ಟಿಕೆಟ್ ತೋರಿಸಿದ್ದರು ಎಂದು ತಿಳಿದು ಬಂದಿದೆ.
ಓದಿ: ಬಾಂಗ್ಲಾ ಯುವತಿ ಅತ್ಯಾಚಾರ ಕೇಸ್: ಬಂಧಿತ ಆರೋಪಿಗಳಲ್ಲಿ ಓರ್ವನಿಗೆ ಕೊರೊನಾ