ಬೆಂಗಳೂರು : ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ರಚಿಸಿರುವ ಕಾವ್ಯಗಳನ್ನು ನೃತ್ಯದ ಮೂಲಕ ಪ್ರಸ್ತುತಪಡಿಸಿರುವುದು ಬಹಳ ಮೆಚ್ಚುಗೆಯಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ರೀತಿಯ ಕಾರ್ಯಕ್ರಮ ಆಯೋಜಿಸಿ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಸಲಹೆ ನೀಡಿದರು.

ನಗರದ ಮಲ್ಲೇಶ್ವರದಲ್ಲಿರುವ ಸೇವಾ ಸದನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಟಲ್ ಕಾವ್ಯ ಕಲಾ ನರ್ತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಜಪೇಯಿ ಅವರ 96ನೇ ಜನ್ಮದಿನ ಅಂಗವಾಗಿ ಶ್ರೀವಸ್ತ ಅವರ ಕಲಾ ತಂಡ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಬಹಳ ಅದ್ಭುತವಾಗಿದೆ.
ಕಾವ್ಯ ಹಾಗೂ ನೃತ್ಯದ ಮೂಲಕವೂ ವಾಜಪೇಯಿಯವರ ತತ್ವಾದರ್ಶಗಳು ಜನರನ್ನು ತಲುಪಲಿ. ಆ ಹಿನ್ನೆಲೆಯಲ್ಲಿ ಶ್ರೀವಸ್ತ ಕಾರ್ಯಕ್ರಮ ಆಯೋಜಿಸಲು ನಮ್ಮ ಸಹಕಾರ ಇರುತ್ತದೆ ಎಂದು ಹೇಳಿದರು.
ಅಟಲ್ ಜೀ ಅವರು ಜನಸಂಘ ಕಟ್ಟಲು ತ್ಯಾಗ ಮಾಡಿದ್ದರು. ಅವರಿಗೆ ಅಧಿಕಾರದ ಆಸೆ ಇರಲಿಲ್ಲ. ಕೇವಲ ಸಂಘ ಹಾಗೂ ದೇಶ ಕಟ್ಟಬೇಕೆಂಬ ಕನಸು ಹೊಂದಿದ್ದರು. ಆದರೆ, ಈಗಿನವರು ಅಧಿಕಾರಕ್ಕಾಗಿ ಸಂಘ ಕಟ್ಟುತ್ತಾರೆ. ಇದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ನಿರ್ದೇಶಕ ಶ್ರೀವಸ್ತ ಶಾಂಡಿಲ್ಯ ಮಾತನಾಡಿ, ಕಲಾವಿದರೂ ತಮ್ಮೊಳಗಿದ್ದ ಅಟಲ್ ಜೀಯವರ ಕನಸನ್ನು ಅವರ ಜನ್ಮದಿನದ ಮೂಲಕ ಪ್ರಸ್ತುತಪಡಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ರಾಜ್ಯದ ಇತರೆ ಜಿಲ್ಲೆಯಲ್ಲಿ ಈ ರೀತಿಯ ಕಾವ್ಯ ನೃತ್ಯ ಕಾರ್ಯಕ್ರಮ ಮಾಡಿ ಎಂದು ಸದಾನಂದಗೌಡರು ಸಲಹೆ ನೀಡಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ಆಯೋಜಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ಅಟಲ್ ಬಿಹಾರಿ ವಾಜಪೇಯಿ 96ನೇ ಜನ್ಮದಿನ ಅಂಗವಾಗಿ ಅಟಲ್ ಕಾವ್ಯ ಕಲಾ ಕಾರ್ಯಕ್ರಮದ ಮೂಲಕ ಅವರು ನಮ್ಮೊಳಗಿದ್ದಾರೆಂದು ವ್ಯಕ್ತಪಡಿಸುವಂತ ವೇದಿಕೆ ಕಲ್ಪಿಸಲಾಗಿತ್ತು. ವಾಜಪೇಯಿ ಬರೆದ ಹಾಡುಗಳನ್ನ ಆಯ್ಕೆ ಮಾಡಿ, ಅದರಲ್ಲಿ ಐದು ಕಲಾ ಪ್ರಕಾರಗಳಾದ, ಕುಚುಪುಡಿ, ಕಥಕ್, ಒಡಿಸ್ಸಿ, ಇನ್ನೂ ಮುಂತಾದ ನೃತದ ಮೂಲಕ ಪ್ರಸ್ತುತಪಡಿಸಲಾಯಿತು. ಇದನ್ನು ಆನ್ಲೈನಲ್ಲಿ ಸಾಕಷ್ಟು ಜನ ನೋಡಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾಾರೆ ಎಂದು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಟಲ್ ಕಾವ್ಯ ಕಲಾ ನರ್ತನ ಕಾರ್ಯಕ್ರಮವನ್ನು ದೆಹಲಿ, ಗ್ವಾಲಿಯರ್ ಬೆಂಗಳೂರಿನ ತಂಡಗಳು ಪ್ರಸ್ತುತಪಡಿಸಿ ದಿವಂಗತ ಪ್ರಧಾನಿ ವಾಜಪೇಯಿವರ ಗೌರವಾರ್ಥ ವಿವಿಧ ನೃತ್ಯ ಪ್ರಾಕಾರಗಳ ಮೂಲಕ ಪ್ರಸ್ತುತ ಪಡಿಸಿ ಪ್ರೇಕ್ಷಕರ ಗಮನ ಸೆಳೆದರು. ಈ ಕಾರ್ಯಕ್ರಮ ಲೈವ್ನಲ್ಲೂ ಪ್ರಸಾರವಾಗಿ ಜನಮೆಚ್ಚುಗೆ ಪಡೆಯಿತು.