ಬೆಂಗಳೂರು: ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಶೇ 1.5 ರಿಂದ ಶೇ 1ಕ್ಕೆ ಇಳಿಸಿರುವ ಸರ್ಕಾರದ ತೀರ್ಮಾನವನ್ನು ಎಫ್.ಕೆ.ಸಿ.ಸಿ.ಐ. ಸಂಸ್ಥೆ ಸ್ವಾಗತಿಸಿದೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಎಫ್.ಕೆ.ಸಿ.ಸಿ.ಐ. ಅಧ್ಯಕ್ಷ ಸಿ.ಆರ್ ಜನಾರ್ಧನ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಭಾರತ ಸರ್ಕಾರ ಜೂ.5 ರಂದು ಹೊರಡಿಸಿರುವ ಆರ್ಡಿನೆನ್ಸ್ ಅನ್ವಯ, ಎಪಿಎಂಸಿ ಪ್ರಾಂಗಣಗಳ ಹೊರತಾದ ವ್ಯಾಪಾರ ಪ್ರದೇಶಗಳಲ್ಲಿ ವ್ಯವಹರಿಸುವವರಿಗೆ ಮಾರುಕಟ್ಟೆ ಶುಲ್ಕ ವಿಧಿಸದೇ ಇದ್ದು, ಇದರಿಂದಾಗಿ ಎಪಿಎಂಸಿ ವರ್ತಕರು ಪೈಪೋಟಿಯನ್ನು ಎದುರಿಸಬೇಕಾಗಿರುವ ಸಂದರ್ಭ ಒದಗಿ ಬಂದಿತ್ತು. ಈ ಬಗ್ಗೆ ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಶೇ 0.2ಕ್ಕೆ ಇಳಿಸಲು ಕೋರಿತ್ತು. ಸದ್ಯ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಶೇ.1.5 ನಿಂದ ಶೇ.1ಕ್ಕೆ ಇಳಿಸಲಾಗಿದೆ.
ಎಪಿಎಂಸಿ ಹಾಗೂ ಇದರ ಹೊರತಾದ ವ್ಯಾಪಾರಿ ಪ್ರದೇಶಗಳಲ್ಲಿ ನ್ಯಾಯಯುತ ಹಾಗೂ ಸಮಾನಾವಕಾಶ ಕಲ್ಪಿಸಲು ಹಾಗೂ ವ್ಯವಹಾರದಲ್ಲಿ ಏಕರೀತಿಯ ಸ್ಪರ್ಧೆಗೆ ಉತ್ತೇಜನ ನೀಡುವ ಸಂಬಂಧ ಮಾರುಕಟ್ಟೆ ಶುಲ್ಕವನ್ನು ಶೇ 0.2ಕ್ಕೆ ಇಳಿಸಲು ಮರುಪರಿಶೀಲಿಸಿ, ನಮ್ಮ ಬೇಡಿಕೆಯನ್ನು ಪರಿಗಣಿಸಲು ಒತ್ತಾಯಿಸುತ್ತೇವೆ ಎಂದಿದ್ದಾರೆ.
ಸದ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದ್ರೆ, ನಮ್ಮ ಬೇಡಿಕೆಯನ್ನು ಸರ್ಕಾರ ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ಪರಿಗಣಿಸಿ ಅನುಕೂಲ ಮಾಡಿಕೊಡಲಿದೆ ಎಂಬ ನಂಬಿಕೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.