ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ವಿಚಾರವನ್ನು ಮುಂದಿನ ದಿನಗಳಲ್ಲಿ ಹೇಗೆ ತೆಗೆದುಕೊಂಡು ಹೋಗಬೇಕು. ಬಿಜೆಪಿ ನಾಯಕರು ಕಾಂಗ್ರೆಸ್ ಕಡೆ ಬೆರಳು ತೋರಿಸುತ್ತಿರುವುದರಿಂದ ಯಾವ ರೀತಿ ಮುನ್ನಡೆಯಬೇಕು. ಹಾಗೂ ಸದನದಲ್ಲಿ ಪ್ರಸ್ತಾಪ ಮಾಡುವುದರಿಂದ ಆಗುವ ಸಾಧಕ-ಬಾಧಕಗಳೇನು? ಎಂಬುದರ ಕುರಿತು ನಗರದ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ಹಿರಿಯ ನಾಯಕರ ಸಭೆ ನಡೆದಿದೆ.
ಒಂದು ಲೋಕಸಭೆ ಹಾಗೂ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆ ಸಂಬಂಧವೂ ಚರ್ಚೆ ನಡೆದಿದ್ದು, ಅಭ್ಯರ್ಥಿ ಆಯ್ಕೆ ಮತ್ತು ಜವಾಬ್ದಾರಿ ಹಂಚಿಕೆ ಬಗ್ಗೆಯೂ ಚರ್ಚೆಯಾಗಿದೆ. ಕ್ಷೇತ್ರಗಳಲ್ಲಿ ಪ್ರಚಾರ ಸಂಬಂಧ ಯಾರು ಯಾರಿಗೆ ಜವಾಬ್ದಾರಿ ವಹಿಸಬೇಕು, ನಾಯಕರ ಪ್ರಚಾರ ಯಾವ ರೀತಿ ಇರಬೇಕು, ಯಾವ ಯಾವ ನಾಯಕರು ಯಾವ ಸಂದರ್ಭದಲ್ಲಿ ಹಾಗೂ ಒಟ್ಟಾಗಿ ಬೃಹತ್ ರ್ಯಾಲಿ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಕೇಂದ್ರದ ಮಾಜಿ ಸಚಿವರಾದ ವೀರಪ್ಪ ಮೊಯ್ಲಿ, ಕೆ ಹೆಚ್ ಮುನಿಯಪ್ಪ, ಕೆ ರೆಹಮಾನ್ ಖಾನ್, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಧೃವನಾರಾಯಣ್, ರಾಜ್ಯದ ಮಾಜಿ ಸಚಿವರಾದ ಹೆಚ್.ಕೆ. ಪಾಟೀಲ್, ಅಲ್ಲಂ ವೀರಭದ್ರಪ್ಪ, ರಮೇಶ್ ಕುಮಾರ್, ಕೆ ಜೆ ಜಾರ್ಜ್, ಜಮೀರ್ ಅಹಮದ್ ಖಾನ್, ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ, ತುಕರಾಂ, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ನಜೀರ್ ಅಹಮದ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ ಮತ್ತಿತರರು ಭಾಗವಹಿಸಿದ್ದರು.
ಕೆಪಿಸಿಸಿ ಕಾನೂನು ಘಟಕದ ಸಭೆ; ಕಾನೂನು ಹೋರಾಟ ಕೈಗೊಳ್ಳುವ ಸಂಬಂಧ ಚರ್ಚೆ
ಮುಂಬರುವ ದಿನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕೈಗೊಳ್ಳುವ ಕಾನೂನು ಹೋರಾಟಗಳ ಕುರಿತು ನಗರದ ಕ್ವೀನ್ಸ್ ರಸ್ತೆಯ ಪಕ್ಷದ ಕಚೇರಿಯಲ್ಲಿ ಸೋಮವಾರ ಕೆಪಿಸಿಸಿ ಕಾನೂನು ಘಟಕದ ಸಭೆ ನಡೆಯಿತು. ಈ ಸಂದರ್ಭ ಮಹತ್ವದ ಚರ್ಚೆ ನಡೆದಿದ್ದು, ರಾಜ್ಯ ಸರ್ಕಾರದ ವಿರುದ್ಧ ದಾಖಲೆಗಳ ಸಮೇತ ಕಾನೂನು ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. ಇದಕ್ಕೆ ಅಗತ್ಯವಿರುವ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸುವ ಸಂಬಂಧ ಡಿ ಕೆ ಶಿವಕುಮಾರ್ ಪಕ್ಷದ ಕಾನೂನು ಘಟಕಕ್ಕೆ ಸೂಚನೆ ನೀಡಿದರು.
ಇನ್ನೆರಡು ವರ್ಷಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ಎದುರಾಗಲಿದೆ. ಈ ಸಂದರ್ಭಕ್ಕೆ ರಾಜ್ಯ ಸರ್ಕಾರವನ್ನು ಕನಿಷ್ಟ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕಾನೂನು ಮೂಲಕ ಕಟ್ಟಿ ಹಾಕುವ ಪ್ರಯತ್ನ ಕಾಂಗ್ರೆಸ್ ಮಾಡಲಿದೆ.
ಪಕ್ಷ ಈ ಹಿಂದೆ ಅಧಿಕಾರದಲ್ಲಿದ್ದಾಗ ಕೈಗೊಂಡ ಕಾರ್ಯಕ್ರಮಗಳನ್ನು ತಿಳಿಸುವ ಜೊತೆಗೆ ಆಡಳಿತ ಪಕ್ಷವನ್ನು ಮಾನಸಿಕವಾಗಿ ಕುಗ್ಗಿಸುವ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸಿದ್ದು, ಈ ನಿಟ್ಟಿನಲ್ಲಿ ಕಾನೂನು ಹೋರಾಟ ಕೂಡ ಒಂದು ಭಾಗವಾಗಿ ಪರಿಗಣಿಸಲಾಗಿದೆ.