ಮಹದೇವಪುರ: ಕ್ವಾರಿಯಲ್ಲಿ ಕಸ ಸುರಿಯಲು ಬಿಡುವುದಿಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಮಿಟಗಾನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸರ ಇಲಾಖೆ ಹಿರಿಯ ಅಧಿಕಾರಿ ರೇಖಾ ಅವರು ತಮ್ಮ ಅಧಿಕಾರಿಗಳೊಂದಿಗೆ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ನೋಡಿ ಇಲ್ಲಿನ ಪರಿಸ್ಥಿತಿ ಹದಗೆಟ್ಟಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿ ಹೊರಟರು. ತಾ.ಪಂ. ಮಾಜಿ ಅಧ್ಯಕ್ಷ ನಂಜೇಗೌಡ ಮಾತನಾಡಿ, ಬಿಬಿಎಂಪಿಯವರು ಪರಿಸರ ಇಲಾಖೆಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ, ಪರಿಸರ ಇಲಾಖೆಗೆ ಮನವಿ ಮಾಡಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಮಿಟಗಾನಹಳ್ಳಿ ಕಸ ವಿಲೇವಾರಿ ಘಟಕದ ಸುತ್ತಮುತ್ತಲ ಜನ ಊಟ ಕೇಳುತ್ತಿಲ್ಲ ಶುದ್ಧವಾದ ಗಾಳಿ ದೊರೆಯುವಂತೆ ಮಾಡಿ. ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡರು.
ಕಣ್ಣೂರು ಪಂಚಾಯಿತಿ ಮಾಜಿ ಅಧ್ಯಕ್ಷ ಭಕ್ತಪಾಲ್ ಮಾತನಾಡಿ, ಈ ಹಿಂದೆ ನಡೆದ ಸಭೆಯಲ್ಲಿ ಇಲ್ಲಿ ಕಸ ಸುರಿಯುವುದಿಲ್ಲ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದರು. ಆದರೂ ಮತ್ತೆ ಕಸ ಸುರಿಯಲು ಪ್ರಾರಂಭಿಸಿದ್ದಾರೆ. ಈ ಭಾಗದಲ್ಲಿ ಎರಡು ಅಡಿ ಹಳ್ಳ ತೋಡಿದರೂ ಲಿಚೆಡ್ ತುಂಬಿದ ನೀರು ಸಿಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯ ಹಾಳಾಗುವುದಲ್ಲದೆ ಪರಿಸರ ಮಾಲಿನ್ಯವಾಗುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿ ಕಸ ಹಾಕುವುದಕ್ಕೆ ಬಿಡುವುದಿಲ್ಲ ಎಂದು ತಿಳಿಸಿದರು. ಸ್ಥಳದಲ್ಲಿ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್, ಕೆ.ಸಿ.ಮುನಿನಾರಾಯಣ, ಅಶೋಕ್, ಶ್ರೀನಿವಾಸ್, ಚಂದ್ರಶೇಖರ್, ರಾಘವೇಂದ್ರ ಮತ್ತಿತರರಿದ್ದರು.