ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಬುಧವಾರ 1.15 ಲಕ್ಷ ಕ್ಯೂಸೆಕ್ ಒಳ ಹರಿವು ಬಂದಿದ್ದು, ಹೊರ ಹರಿವು 1.14 ಲಕ್ಷ ಕ್ಯೂಸೆಕ್ ಆಗಿದೆ. ಒಟ್ಟು 6 ಟಿಎಂಸಿ ನೀರಿನ ಸಾಮರ್ಥ್ಯವನ್ನು ಹೊಂದಿರುವ ಜಲಾಶಯದಲ್ಲಿ ಸದ್ಯ 2 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ. ನೀರಿನ ಮಟ್ಟ 520.70 ಮೀಟರ್ನಷ್ಟಿದೆ. ಕಳೆದೊಂದು ವಾರದಿಂದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗುತ್ತಿದೆ. ಮುಂದಿನ 15 ದಿನಗಳಲ್ಲಿ ನೀರಿನಮಟ್ಟ ಏರುವ ಸಂಭವವಿದೆ.
ಪ್ರವಾಹದ ಭೀತಿ ಇಲ್ಲ: ಸದ್ಯಕ್ಕೆ ಕೃಷ್ಣಾ ನದಿಗೆ ಯಾವುದೇ ಪ್ರವಾಹದ ಭೀತಿ ಇಲ್ಲ. ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಬಂದಾಗ ಮಾತ್ರ ಕೆಲವು ಪ್ರದೇಶಗಳು ತೊಂದರೆಗೆ ಒಳಗಾಗಲಿವೆ. ಆದರೂ ನದಿ ತೀರದ ಜನರು ತಾವಾಗಲಿ, ತಮ್ಮ ಜಾನುವಾರುಗಳನ್ನಾಗಲಿ ನದಿ ತೀರಕ್ಕೆ ತೆಗೆದುಕೊಂಡು ಹೋಗಬಾರದು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಹಶೀಲ್ದಾರ್ ಎಸ್.ಬಿ ಇಂಗಳೆ ತಿಳಿಸಿದರು.
ಇದನ್ನೂ ಓದಿ: ಬಾಗಲಕೋಟೆ: ನೇಕಾರನ ಮಗನಿಗೆ ವಾರ್ಷಿಕ 21.35 ಲಕ್ಷ ರೂ. ಆಫರ್