ನವದೆಹಲಿ: ಜಸ್ಪ್ರೀತ್ ಬುಮ್ರಾ ಒಬ್ಬ ಅದ್ಭುತ ಬೌಲರ್, ಬುದ್ದಿವಂತ, ಆದರೆ ಎಲ್ಲ ಆಟಗಾರರಿಗೆ ಆಗುವಂತಹ ವೈಫಲ್ಯ ಅವರಲ್ಲೂ ಕಂಡುಬಂದಿದೆ. ಸದ್ಯದಲ್ಲೇ ಅವರು ತಿರುಗಿ ಬೀಳಲಿದ್ದಾರೆ, ತಮ್ಮ ಹಿಂದಿನ ಲಯಕ್ಕೆ ಮರಳಿ ಬ್ಯಾಟ್ಸ್ಮನ್ಗಳನ್ನು ಕಾಡಲಿದ್ದಾರೆ ಎಂದು ನ್ಯೂಜಿಲ್ಯಾಂಡ್ ಮಾಜಿ ಕ್ರಿಕೆಟಿಗ ಹಾಗೂ ಭಾರತ ತಂಡದ ಮಾಜಿ ಕೋಚ್ ಜಾನ್ ರೈಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತನ್ನ ಮೊದಲ ಪಂದ್ಯದಲ್ಲಿ ಹತ್ತು ವಿಕೆಟ್ಗಳ ಹೀನಾಯ ಸೋಲು ಕಂಡಿತ್ತು. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಅವರ ವೈಫಲ್ಯ ಹೆಚ್ಚು ಸುದ್ದಿಯಾಗಿತ್ತು.
ಗಾಯದಿಂದ ಚೇತರಿಸಿಕೊಂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ನಂತರ ಯಾರ್ಕರ್ ಕಿಂಗ್ ಬುಮ್ರಾ ತಮ್ಮ ಹಿಂದಿನ ಲಯ ಕಳೆದುಕೊಂಡಿದ್ದಾರೆ. ಏಕದಿನ ಸರಣಿಯಲ್ಲಿ ವಿಕೆಟ್ ಇಲ್ಲದೇ ಸರಣಿ ಮುಗಿಸಿದ್ದ ಅವರು ಮೊದಲ ಟೆಸ್ಟ್ನಲ್ಲಿ ಕೇವಲ ಒಂದು ವಿಕೆಟ್ಗೆ ತೃಪ್ತಿಕೊಂಡಿದ್ದಾರೆ. ಈ ಕಾರಣದಿಂದ ಅವರ ವಿರುದ್ಧ ಟೀಕೆಗಳು ಕೇಳಿ ಬರುತ್ತಿದ್ದು, ಇದಕ್ಕೆ ಭಾರತ ತಂಡದ ಮಾಜಿ ಕೋಚ್ ಜಾನ್ ರೈಟ್ ಬುಮ್ರಾ ಅವರ ವೈಫಲ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
" ಅವರು(ಬುಮ್ರಾ) ಗಾಯದಿಂದ ಚೇತರಿಸಿಕೊಂಡು ಬಂದಿದ್ದಾರೆ. ಅವರು ತಮ್ಮ ಹಿಂದಿನ ದಾರಿ ಹಾಗೂ ಲಯವನ್ನು ಹುಡುಕುತ್ತಿದ್ದಾರೆ. ವೈಫಲ್ಯ ಎಲ್ಲ ಆಟಗಾರರಿಗೂ ಬಂದೇ ಬರುತ್ತದೆ. ತುಂಬಾ ಎತ್ತರಕ್ಕೆ ಹೋದ ಮೇಲೆ, ಮತ್ತೆ ನೆಲದ ಮೇಲೆ ಬರಲೇಬೇಕು" ಎಂದು ರೈಟ್ ತಿಳಿಸಿದ್ದಾರೆ.
ಇನ್ನು ನ್ಯೂಜಿಲ್ಯಾಂಡ್ ನೆಲದಲ್ಲಿ ಬುಮ್ರಾ ವೈಫಲ್ಯಕ್ಕೆ ಕಾರಣ ತಿಳಿಸಿರುವ ಅವರು, " ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ಗಳು ಬುಮ್ರಾ ಬೌಲಿಂಗ್ಗೆ ಹೇಗೆ ಆಡಬೇಕು ಎಂಬುದನ್ನು ದೀರ್ಘ ಸಮಯದಿಂದಲೇ ತಯಾರಿ ನಡೆಸಿಕೊಂಡಿದ್ದಾರೆ. ಸಾಕಷ್ಟು ವಿಡಿಯೋಗಳನ್ನು ನೋಡಿದ್ದಾರೆ. ಒಮ್ಮೆ ನೀವು ಅತ್ಯುತ್ತಮ ಬೌಲರ್ ಎಂದು ಎದುರಾಳಿ ತಂಡಕ್ಕೆ ಗೊತ್ತಾದರೆ, ನಿಮ್ಮನ್ನು ಅವರು ತುಂಬಾ ತೀಕ್ಷ್ಣವಾಗಿ ಗಮನಿಸುತ್ತಿರುತ್ತಾರೆ. ನಿಮ್ಮನ್ನು ನಿಭಾಯಿಸುವ ವಿಧಾನಗಳನ್ನು ಹುಡುಕುತ್ತಾರೆ, ಕೆಲವೊಮ್ಮೆ ನಿಮ್ಮ ಬೌಲಿಂಗ್ಗೆ ಡಿಫೆನ್ಸ್ ಮಾಡುತ್ತಾರೆ ಹೊರೆತು ವಿಕೆಟ್ ನೀಡುವುದಿಲ್ಲ" ಎಂದು ರೈಟ್ ಬುಮ್ರಾ ವೈಫಲ್ಯ ಹೇಗಾಯಿತು ಎಂಬುದನ್ನು ವಿವರಿಸಿದ್ದಾರೆ.
ಬುಮ್ರಾ ಸದ್ಯ ಕಠಿಣ ಸಮಯದಲ್ಲಿ ಹೋರಾಡಬೇಕಿದೆ. ಮುಂದಿನ ದಿನಗಳಲ್ಲಿ ವೈಫಲ್ಯಕ್ಕೆ ಸಡ್ಡು ಹೊಡೆದು ತಿರುಗಿ ಬೀಳಲಿದ್ದಾರೆ. ಅವರು ತುಂಬಾ ಬುದ್ದಿವಂತ ವ್ಯಕ್ತಿ, ಅವರು ಇದರಿಂದ ಹೊರಬರುವ ದಾರಿಯನ್ನು ಕಂಡುಕೊಳ್ಳಲಿದ್ದಾರೆ ಎಂಬುದರ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಭಾರತದ ಬೌಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.