ಕಳೆದ 6 ತಿಂಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳನ್ನು ಅಕ್ಟೋಬರ್ 15 ರಿಂದ ಮತ್ತೆ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಚಿತ್ರಮಂದಿರ ತೆರೆಯುತ್ತಿದ್ದಂತೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಲು ಕ್ಯೂನಲ್ಲಿ ನಿಂತಿವೆ. ಇದೀಗ 'ರಣಂ' ಚಿತ್ರತಂಡ ಕೂಡಾ ಚಿತ್ರ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ.
ಚಿರಂಜೀವಿ ಸರ್ಜಾ ಹಾಗೂ ಚೇತನ್ ಕುಮಾರ್ ನಟಿಸಿರುವ 'ರಣಂ' ಚಿತ್ರವನ್ನು ದಸರಾ ಹಬ್ಬಕ್ಕೆ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೇಳಿದ್ದಾರೆ. ಚಿತ್ರವನ್ನು ನೋಡಲು ಪ್ರೇಕ್ಷಕರು ಖಂಡಿತ ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎಂಬುದು ಶ್ರೀನಿವಾಸ್ ಅವರ ನಂಬಿಕೆ. ಎಲ್ಲಾ ಸರಿ ಇದ್ದಿದ್ದರೆ ಏಪ್ರಿಲ್ನಲ್ಲಿ ರಣಂ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಸಮಸ್ಯೆಯಿಂದ ಚಿತ್ರ ಬಿಡುಗಡೆ ತಡವಾಯ್ತು. ಒಂದು ವೇಳೆ ಏಪ್ರಿಲ್ನಲ್ಲೇ ಚಿತ್ರ ಬಿಡುಗಡೆಯಾಗಿದ್ದರೆ ಚಿರಂಜೀವಿ ಸರ್ಜಾ ಕೂಡಾ ತಮ್ಮ ಚಿತ್ರವನ್ನು ನೋಡುತ್ತಿದ್ದರೇನೋ. ಆದರೆ ಈಗ ಚಿರು ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಅವರ ಸಿನಿಮಾವನ್ನು ನೋಡುವಂತಾಗಿದೆ.
ಚಿತ್ರದಲ್ಲಿ ಚಿರಂಜೀವಿ ಸರ್ಜಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಚೇತನ್ ಕುಮಾರ್, ವರಲಕ್ಷ್ಮಿ ಶರತ್ ಕುಮಾರ್ ನೀತು ಗೌಡ ಹಾಗೂ ಇನ್ನಿತರರು ನಟಿಸಿದ್ದಾರೆ. ರೈತ ಸಮುದಾಯದ ಬಗ್ಗೆ ಹೇಳಲಾಗಿರುವ ಚಿತ್ರವನ್ನು ಬೆಂಗಳೂರು, ಚಿಂತಾಮಣಿ, ಮಡಿಕೇರಿ, ಬಳ್ಳಾರಿ, ಉತ್ತರ ಕರ್ನಾಟಕ ಹಾಗೂ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರವನ್ನು ತೆಲುಗು ನಿರ್ದೇಶಕ ವಿ. ಸಮುದ್ರ ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ.
ಚಿತ್ರದಲ್ಲಿ 6 ಹಾಡುಗಳಿದ್ದು ರವಿಶಂಕರ್ ಸಂಗೀತ ನಿರ್ದೇಶಿಸಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ, ಡಾ. ರವಿವರ್ಮ ಸಾಹಸ, ದೀಪು ಎಸ್.ಕುಮಾರ್ ಸಂಕಲನ ಚಿತ್ರಕ್ಕಿದೆ. ಅಕ್ಟೋಬರ್ 23 ರಂದು ರಣಂ ಬಿಡುಗಡೆಯಾಗುತ್ತಿದೆ.