ಕನ್ನಡ ಸಿನಿರಂಗದ ಮೆಲೋಡಿ ಕಿಂಗ್, ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪದ ತೀರ್ಪುಗಾರರಲ್ಲಿ ಒಬ್ಬರಾದ ರಾಜೇಶ್ ಕೃಷ್ಣನ್ ಅವರಿಗೆ ಇಂದು ಜನುಮದಿನದ ಸಂಭ್ರಮ.
ಸರಿಗಮಪ ಕಾರ್ಯಕ್ರಮದ ಮೂಲಕ ಕಿರುತೆರೆ ವೀಕ್ಷಕರಿಗೆ ಮಗದಷ್ಟು ಹತ್ತಿರವಾಗಿರುವ ಮೆಲೋಡಿ ಕಿಂಗ್ ಸ್ವರ ಮಾಧುರ್ಯಕ್ಕೆ ಮನ ಸೋಲದವರಿಲ್ಲ. ಸುಮಧುರವಾದ ದನಿಯ ಮೂಲಕ ಚಂದನವನದ ತುಂಬಾ ಸಂಗೀತ ಸುಧೆಯನ್ನು ಹರಿಸಿದ ರಾಜೇಶ್ ಕೃಷ್ಣನ್ ಅವರು ಗೌರಿ ಗಣೇಶ ಸಿನಿಮಾದ ಮೂಲಕ ಹಿನ್ನೆಲೆ ಗಾಯಕರಾಗಿ ಕಾಣಿಸಿಕೊಂಡಿದ್ದರು.
![rajesh krishna](https://etvbharatimages.akamaized.net/etvbharat/prod-images/kn-bng02-rajeshkrishnan-bday-photo-ka10018_03062020143512_0306f_1591175112_24.jpg)
ಕಳೆದ ಇಪ್ಪತ್ತು ವರುಷಗಳಿಂದ ಚಂದನವನದಲ್ಲಿ ಗಾಯಕರಾಗಿ ಗುರುತಿಸಿಕೊಂಡಿರುವ ರಾಜೇಶ್ ಕೃಷ್ಣನ್ ಇಲ್ಲಿಯ ತನಕ 5,000ಕ್ಕೂ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿ ಸಂಗೀತ ಪ್ರಿಯರನ್ನು ರಂಜಿಸಿದ್ದಾರೆ. ಜೊತೆಗೆ 500 ತೆಲುಗು, 250 ತಮಿಳು ಮತ್ತು ಹಿಂದಿ ಹಾಡುಗಳನ್ನು ಕೂಡಾ ಇವರು ಹಾಡಿದ್ದಾರೆ.
ಸದ್ಯ ಸರಿಗಮಪ ಕಾರ್ಯಕ್ರಮದ ತೀರ್ಪುಗಾರರಾಗಿ ಬ್ಯುಸಿಯಾಗಿರುವ ಇವರು ಇದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ಕಾನ್ಫಿಡೆಂಟ್ ಸ್ಟಾರ್ ಸಿಂಗರ್, ಮ್ಯೂಕ್ನ ಸೂಪರ್ ಸ್ಟಾರ್ ಜೊತೆಗೆ ಟಿವಿ 9ನ ವಾಯ್ಸ್ ಆಫ್ ಬೆಂಗಳೂರು ಸಂಗೀತ ಕಾರ್ಯಕ್ರಮದ ತೀರ್ಪುಗಾರರಾಗಿ ಮಿಂಚಿದ್ದಾರೆ.
![rajesh krishna](https://etvbharatimages.akamaized.net/etvbharat/prod-images/kn-bng02-rajeshkrishnan-bday-photo-ka10018_03062020143512_0306f_1591175112_735.jpg)
ಗಾಯಕ ಮಾತ್ರವಲ್ಲ ನಟ, ಕಂಠದಾನ ಕಲಾವಿದ ಕೂಡಾ ಹೌದು!
ಗಾಯನದ ಮೂಲಕ ಮನೆ ಮಾತಾಗಿರುವ ರಾಜೇಶ್ ಕೃಷ್ಣನ್ ನಟನೂ ಹೌದು. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಇವರು ಮೆಲೋಡಿ ಸಿನಿಮಾದಲ್ಲೂ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
![rajesh krishna](https://etvbharatimages.akamaized.net/etvbharat/prod-images/kn-bng02-rajeshkrishnan-bday-photo-ka10018_03062020143512_0306f_1591175112_555.jpg)
ಇದರ ಜೊತೆಗೆ ಮಾರುತಿ ಸುಜೂಕಿ ವ್ಯಾಗನರ್, ಮಂಜಲ್ ಸೋಪ್, ಇಂದುಲೇಖ ಹೇರ್ ಆಯಿಲ್ ಸೇರಿದಂತೆ ಒಂದಷ್ಟು ಜಾಹೀರಾತುಗಳಿಗೆ ದನಿಯಾಗಿರುವ ಇವರು ಕಂಠದಾನ ಕಲಾವಿದರೂ ಹೌದು.
ನನ್ ಪ್ರೀತಿಯ ಹುಡುಗಿ, ಅಮೃತಧಾರೆ ಮತ್ತು ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ ಸಿನಿಮಾಗಳಲ್ಲಿನ ನಟ ಧ್ಯಾನ್ ಅವರಿಗೆ ಕಂಠದಾನ ಮಾಡಿರುವ ರಾಜೇಶ್ ಕೃಷ್ಣನ್ ಪ್ಯಾರಿಸ್ ಪ್ರಣಯ ಚಿತ್ರದಲ್ಲಿ ನಾಯಕನಾಗಿ ನಟಿಸಿದ ರಘು ಮುಖರ್ಜಿ ಅವರಿಗೂ ಕಂಠದಾನ ಮಾಡಿದ್ದಾರೆ.