ವರನಟ ಡಾ. ರಾಜ್ ಕುಮಾರ್ ನಮ್ಮೆನ್ನೆಲ್ಲಾ ಅಗಲಿ ಇಂದಿಗೆ 15 ವರ್ಷಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಅವರ ಸಮಾಧಿ ಬಳಿ ಆಗಮಿಸಿದ ರಾಜ್ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, "ಅಪ್ಪಾಜಿ ಅಗಲಿ 15 ವರ್ಷ ಕಳೆದಿವೆ. ಕೊರೊನಾ ಭೀತಿಯಿಂದ ಆಡಂಬರ ಬೇಡ ಎಂದು ಸರಳವಾಗಿ ಪೂಜೆ ಮಾಡುತ್ತಿದ್ದೇವೆ. ಅಭಿಮಾನಿಗಳು ಹುಷಾರಾಗಿರಬೇಕು. ಎಲ್ಲರಿಗೂ ಕುಟುಂಬ ಇದೆ. ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಯುಗಾದಿಗೆ ಮುನ್ನಾ ದಿನ ಅಪ್ಪಾಜಿ ಪುಣ್ಯಸ್ಮರಣೆಯ ದಿನ ಬಂದಿದೆ. ನಾವು ಯುಗಾದಿ ಹಬ್ಬವನ್ನು ಆಚರಿಸುತ್ತೇವೆ. ಇಡೀ ಕುಟಂಬ ಈ ಹಬ್ಬದ ದಿನ ಸೇರುತ್ತೇವೆ" ಎಂದರು.
ಸಿನಿಮಾ ಸಂಬಂಧ ಮಾತನಾಡಿದ ಅವರು, "ಶಿವಪ್ಪ ಸಿನಿಮಾದ ಟೈಟಲ್ ಬದಲಾಗಿದೆ. ಈ ಸಿನಿಮಾಗೆ ಹೊಸ ಟೈಟಲ್ ಅನೌನ್ಸ್ ಮಾಡುತ್ತೇವೆ" ಎಂದರು.
ಲಾಕ್ಡೌನ್ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ, "ಈಗಾಗಲೇ ಒಂದು ವರ್ಷ ಕಷ್ಟ ಪಟ್ಟಿದ್ದೇವೆ. ಮತ್ತೆ ಕಷ್ಟ ಪಡೋದು ಬೇಡ. ಲಾಕ್ಡೌನ್ ಅನ್ನೋದು ಬರೋದು ಬೇಡ. ಎಚ್ಚರ ವಹಿಸಿಕೊಂಡು ಬದುಕೋಣ. ನಮ್ಮ ಜವಾಬ್ಧಾರಿಯನ್ನು ನಾವು ನಿಭಾಯಿಸಿದ್ರೆ ಲಾಕ್ಡೌನ್ ಮಾಡುವ ಅಗತ್ಯವಿಲ್ಲ" ಎಂದರು.