ಮೈಸೂರು: ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಯಾರು ಸಪೋರ್ಟ್ ಮಾಡುತ್ತಿಲ್ಲ. ಹೀಗಾಗಿ ಅವರಿಗೆ ಅಸ್ಥಿರತೆಯ ಭಾವ ಕಾಡುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಕುಟುಕಿದರು.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡ ಅಧಿದೇವತೆ ದರ್ಶನ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಅಸ್ಥಿರತೆ ಕಾಡುತ್ತಿದೆ. ಅವರು ಒಬ್ಬಂಟಿಯಾಗಿದ್ದಾರೆ. ಅದಕ್ಕಾಗಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ವಸತಿ ಇಲಾಖೆಯಿಂದ ಒಂದು ಮನೆಯನ್ನು ಕೊಟ್ಟಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಸುಳ್ಳು ಹೇಳಬಾರದು. ಅವರ ಆಡಳಿತದ ಕೊನೆಯಲ್ಲಿ ಚುನಾವಣೆಗಾಗಿ ವಸತಿ ಇಲಾಖೆಗೆ 29 ಸಾವಿರ ಕೋಟಿ ಘೋಷಣೆ ಮಾಡಿದ್ದರು. ಆದರೆ ಅದರಲ್ಲಿ ಇಟ್ಟಿದ್ದು ಕೇವಲ 2 ಸಾವಿರ ಕೋಟಿ ರೂ. ನಾನು ಚಾಮುಂಡಿ ಮುಂದೆ ನಿಂತು ಅಂಕಿ-ಅಂಶ ಇಟ್ಟುಕೊಂಡೇ ಮಾತನಾಡುತ್ತಿದ್ದೇನೆ. ಸುಳ್ಳು ಹೇಳುತ್ತಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಇಲಾಖೆಯಲ್ಲಿ ನಾಲ್ಕೂವರೆ ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಈಗಾಗಲೇ 2 ಲಕ್ಷ ಮನೆ ಪೂರ್ತಿಯಾಗಿವೆ. ಇನ್ನೂ ಮೂರು ಲಕ್ಷ ಮನೆಗಳು ಆರೇಳು ತಿಂಗಳಲ್ಲಿ ಮುಗಿಯುತ್ತವೆ. ಎಲ್ಲದಕ್ಕೂ ಲೆಕ್ಕ ಇದೆ ಎಂದು ಹೇಳಿದರು.
ಮುಂದಿನ ವಾರ ಅಧಿವೇಶನದಲ್ಲಿ ಎಲ್ಲವನ್ನು ಸದನದ ಮುಂದಿಡುತ್ತೇನೆ. ಸಿದ್ದರಾಮಯ್ಯನವರ ಪ್ರಬುದ್ಧತೆ, ಅನುಭವ ನಮಗೆ ಪೂರಕವಾಗಬೇಕು. ಆದರೆ ಮಾರಕವಾಗುವ ರೀತಿ ಅವರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಸೋಮಣ್ಣ, ಈ ರೀತಿ ಹೇಳಿಕೆ ನೀಡುತ್ತಿರುವವರು ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿ ಮತ್ತು ಅಮಿತ್ ಶಾ ಅವರೇ ಈ ಕುರಿತು ಸ್ಪಷ್ಟಪಡಿಸಿದ್ದಾರೆ. 2023 ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ನಾವು ನಮ್ಮ ಇತಿ ಮಿತಿ ಅರ್ಥ ಮಾಡಿಕೊಂಡು ಮಾತನಾಡಬೇಕು. ಸಿಎಂ ಬದಲಾವಣೆ ಕೂಗು ನಿಲ್ಲಿಸಬೇಕು ಎಂದರು.