ಮೈಸೂರು: ಸರಗೂರು ಬಳಿಯ ಚಾಮನ ಹಳ್ಳಿಯ ತೋಟದಲ್ಲಿ ಭಾನುವಾರ ಸಂಜೆ ದನ ಕಾಯುವ ವ್ಯಕ್ತಿಯೊಬ್ಬರಿಗೆ ಹುಲಿ ಕಾಣಿಸಿಕೊಂಡಿದೆ. ಈ ವಿಚಾರ ತಿಳಿದ ಗ್ರಾಮಸ್ಥರು ಆತಂಕಗೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹುಲಿ ಸೆರೆಗಾಗಿ ಅರಣ್ಯ ಇಲಾಖೆ ತಂಡವೇ ದೌಡಾಯಿಸಿದ್ದು, ಸಾಕಾನೆ ನೆರವಿನಿಂದ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಅರಣ್ಯ ಇಲಾಖೆಯವರು ನಿನ್ನೆ ಹುಲಿ ಇರುವ ಜಾಗಗಳಲ್ಲಿ ಕ್ಯಾಮರಾ ಅಳವಡಿಸಿದ್ದರು. ಇಂದು ಬೆಳಗ್ಗೆ ಸಾಕಾನೆಗಳಾದ ಭೀಮ ಹಾಗೂ ಶ್ರೀಕಂಠನ ನೆರವಿನಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ.
![Forest Department personnel operating with elephants](https://etvbharatimages.akamaized.net/etvbharat/prod-images/15791931_tiger.jpg)
ತೋಟದಲ್ಲಿ ಸಿಕ್ಕಿಬಿದ್ದ ಹುಲಿ: ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿರುವ ಈ ಹುಲಿ ತೋಟದಲ್ಲಿ ನವಿಲನ್ನು ಬೇಟೆಯಾಡಿ ಅದನ್ನು ಅಲ್ಲೇ ತಿಂದು ಮುಗಿಸಿದೆ. ತೋಟದಿಂದ ಹೊರ ಹೋಗಲು ಪ್ರಯತ್ನಿಸಿದಾಗ ತೋಟದ ಸುತ್ತ ಅಳವಡಿಸಿರುವ ಸೋಲಾರ್ ತಂತಿಗೆ ಹುಲಿಯ ಹಿಂಬದಿಯ ಕಾಲು ಸಿಕ್ಕಿ, ಗಾಯಗೊಂಡಿದೆ ಎನ್ನಲಾಗುತ್ತಿದೆ. ಡಿಸಿಎಫ್ ಕಮಲ ಕರಿಕಾಳನ್, ಎಸಿಎಫ್ ಶಿವರಾಮು, ಆರ್ಎಫ್ಒ ಮಧು, ವೈದ್ಯ ಪ್ರಕಾಶ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಹುಲಿ ಸೆರೆಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ.
ಇದನ್ನೂ ಓದಿ: Video - ಕೆಮ್ಮಣ್ಣು ಗುಂಡಿಯ ಪ್ರವಾಸಿ ಸ್ಥಳದಲ್ಲಿ ಮೂರು ಹುಲಿಗಳು ಪ್ರತ್ಯಕ್ಷ