ಮಂಗಳೂರು: ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ಆಂಧ್ರಪ್ರದೇಶದ ಮೂಲದ ಮೀನುಗಾರ ನಾಪತ್ತೆಯಾದ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಂಧ್ರ ಪ್ರದೇಶದ ನೆಲ್ಲೂರು ನಿವಾಸಿ ವಯಿಲ ಅಂಕಯ್ಯ ನಾಪತ್ತೆಯಾದವರು. ಅ.19ರಂದು ಬೋಟ್ ಮೂಲಕ ಮಂಗಳೂರು ದಕ್ಕೆಯಿಂದ ಮೀನುಗಾರಿಕೆಗೆ 11 ಮಂದಿ ತೆರಳಿದ್ದರು. ಸಮುದ್ರದಲ್ಲಿ ಬಿರುಸಾದ ಗಾಳಿಯ ಹೊಡೆತವಿದ್ದ ಕಾರಣ ದಡದ ಸಮೀಪದಲ್ಲಿಯೇ ಮೀನುಗಾರಿಕೆ ನಡೆಸಲಾಗುತ್ತಿತ್ತು. ಆದರೆ ಅ.23 ರಂದು ವಯಿಲ ಅಂಕಯ್ಯ ನಾಪತ್ತೆಯಾಗಿದ್ದಾರೆ. ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿಲ್ಲ. ಉಳಿದ ಮೀನುಗಾರರು ಶುಕ್ರವಾರ ರಾತ್ರಿ ದಕ್ಕೆಗೆ ವಾಪಸಾಗಿದ್ದಾರೆ. ಆದರೆ ಮೀನುಗಾರಿಕೆ ವೇಳೆ ಜಾಕೆಟ್ ಧರಿಸಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಯಿಲ ಅಂಕಯ್ಯ ಚಹರೆ:
5.9 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸದೃಢ ಶರೀರ, ಉರುಟು ಮುಖ, ಕಪ್ಪು ತಲೆಕೂದಲು, ಕೆಂಪು ಬಣ್ಣದ ಟೀ-ಶರ್ಟ್, ನೀಲಿ ಬಣ್ಣದ ಬರ್ಮುಡಾ ಧರಿಸಿದ್ದರು. ತೆಲುಗು ಭಾಷಿಗ. ಎಡ ಕೆನ್ನೆಯಲ್ಲಿ ಬಿಳಿ ಮಚ್ಚೆ ಇದೆ. ನಾಪತ್ತೆಯಾದ ಮೀನುಗಾರನ ಮಾಹಿತಿ ದೊರೆತಲ್ಲಿ ಮಂಗಳೂರು ಉತ್ತರ (ಬಂದರು) ಠಾಣೆ (0824- 2220516) ಸಂಪರ್ಕಿಸಬಹುದು.