ಹುಬ್ಬಳ್ಳಿ: ನಟ ಪುನೀತ್ ರಾಜ್ಕುಮಾರ್ ಅಗಲಿಕೆಗೆ ಇಡೀ ದೇಶವೇ ಕಣ್ಣೀರು ಹಾಕಿದೆ. ಅವರ ಸ್ಮರಣಾರ್ಥವಾಗಿ ಈ ವರ್ಷ ಪೂರ್ತಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ರಾಜ್ ಕುಟುಂಬದ ಆತ್ಮೀಯ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಶಿವಾನಂದ ಮುತ್ತಣ್ಣವರ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ನಟ ಪುನೀತ್ ರಾಜ್ಕುಮಾರ ನಿಧನ ಅತೀವ ದುಃಖ ತಂದಿದೆ. ಅವರ ಅಗಲಿಕೆಯನ್ನು ನಂಬಲು ಆಗುತ್ತಿಲ್ಲ. ಅವರ ವ್ಯಕ್ತಿತ್ವ ಎಂತಹದ್ದು ಎಂದರೆ, ದೊಡ್ಮನೆ ಹುಡುಗ ಸಿನಿಮಾ ಚಿತ್ರೀಕರಣಕ್ಕಾಗಿ ಹುಬ್ಬಳ್ಳಿಗೆ ಬಂದಾಗ ಅಲೆಮಾರಿ ಕಲಾವಿದರು ಪುನೀತ್ ರಾಜ್ಕುಮಾರ್ ಜೊತೆಗೆ ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಅವರನ್ನು ತಾವು ತಂಗಿದ್ದ ಹೋಟೆಲ್ಗೆ ಕರೆಸಿಕೊಂಡು ಅವರೊಂದಿಗೆ ಫೋಟೋ ಜೊತೆಗೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 10 ಸಾವಿರ ರೂಪಾಯಿ ಕೊಟ್ಟಿದ್ದರು. ಅಂತಹ ಕರುಣಾಮಯಿ ಮನಸ್ಸು ಪುನೀತ್ ರಾಜ್ಕುಮಾರ್ ಅವರದ್ದು ಎಂದು ನೆನೆದರು.
ಹಿಂದುಳಿದ ಜನರಿಗೆ ಕೈಲಾದ ಸಹಾಯ:
ಧಾರವಾಡ ಜಿಲ್ಲೆಯ ಸಮಾನ ಮನಸ್ಕರು, ಸಮಾಜ ಸೇವಕರು ಒಳಗೊಂಡು ಈ ವರ್ಷ ಪೂರ್ತಿ ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥವಾಗಿ ಬಡವರು, ಪ್ರತಿಭಾವಂತ ವಿದ್ಯಾರ್ಥಿಗಳು, ಶ್ರೀ ಶಕ್ತಿ ಸಂಘಗಳು, ಆರ್ಥಿಕವಾಗಿ ಹಿಂದುಳಿದ ಜನರಿಗೆ ಕೈಲಾದ ಸಹಾಯ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಅಪ್ಪುಗೆ ಶ್ರದ್ಧಾಂಜಲಿ:
ಇದಕ್ಕೆ ಮೊದಲ ಮೆಟ್ಟಿಲು ಎಂಬಂತೆ ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನ. 12ರಂದು ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನ.16 ರಂದು ಬೆಂಗಳೂರಿನಲ್ಲಿ ಕನ್ನಡ ಚಲನಚಿತ್ರ ಸಂಘದಿಂದ ಪುನೀತ್ ರಾಜ್ಕುಮಾರ್ ನೆನಪಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅದಾದ ಬಳಿಕ ಧಾರವಾಡ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ನಟ ಪುನೀತ್ ಅವರ ಸ್ಮರಣಾರ್ಥ ಕಾರ್ಯಕ್ರಮ ಮಾಡಲಾಗುವುದು ಎಂದು ಶಿವನಾಂದ ಮುತ್ತಣ್ಣವರ ವಿವರಿಸಿದರು.
ಇದನ್ನೂ ಓದಿ: ರಾಜ್ಯದ 550 ಚಿತ್ರಮಂದಿರಗಳಲ್ಲಿ 'ಅಪ್ಪು'ಗೆ ಶ್ರದ್ಧಾಂಜಲಿ ಕಾರ್ಯಕ್ರಮ