ಹುಬ್ಬಳ್ಳಿ: ಮಹಿಳೆಯೊಬ್ಬರ ಕಣ್ಣಿನೊಳಗೆ ಸಿಲುಕಿದ್ದ ಮುರಿದ ಟೂತ್ ಬ್ರಷ್ ಚೂರೊಂದನ್ನು ಹೊರ ತೆಗೆಯುವಲ್ಲಿ ಹುಬ್ಬಳ್ಳಿಯ ಕಿಮ್ಸ್ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಹಾವೇರಿ ಜಿಲ್ಲೆ ಹಾನಗಲ್ ಬಳಿಯ ಹಿರೂರು ಗ್ರಾಮದ ನಿವಾಸಿ 28 ವರ್ಷದ ವಿನೋದಾ ತಳವಾರ (28) ಎಂಬುವವರ ಕಣ್ಣಿನಲ್ಲಿ ಟೂತ್ ಬ್ರಷ್ ಚೂರು ಸಿಲುಕಿ ಬಳಲುತ್ತಿದ್ದರು.
ಆಗಸ್ಟ್ 14ರಂದು ಬೆಳಗ್ಗೆ ವಿನೋದಾ ಅವರ ನಾಲ್ಕು ವರ್ಷದ ಮಗಳು ಹಲ್ಲುಜ್ಜುವಾಗ ಇದ್ದಕ್ಕಿದ್ದಂತೆ ಟೂತ್ ಬ್ರಷ್ ಮುರಿದಿದೆ. ಇದರ ಚೂರು ತಾಯಿಯ ಎಡಗಣ್ಣಿನೊಳಗೆ ಸಿಲುಕಿತ್ತು. ನಂತರ ಕುಟುಂಬ ಸದಸ್ಯರು ಅದನ್ನು ತೆಗೆಯಲು ಪ್ರಯತ್ನಿಸಿದಾಗ ಮುರಿದಿದೆ. ಕೂಡಲೇ ಮಹಿಳೆಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
![KIMS Hospital in hubballi](https://etvbharatimages.akamaized.net/etvbharat/prod-images/16135952_thumbn333.jpg)
ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ರೋಗಿಯನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಶಿಫಾರಸು ಮಾಡಿದ್ದಾರೆ. ಕಿಮ್ಸ್ ವೈದ್ಯರು ಮುಖದ ಸಿಟಿ ಸ್ಕ್ಯಾನ್, ಸಿಟಿ ಆಂಜಿಯೋಗ್ರಾಮ್ ಮಾಡಿದಾಗ ಕಣ್ಣಿನ ಕೆಳಗೆ ಬ್ರಷ್ ಸಿಲುಕಿರುವುದು ಕಂಡು ಬಂದಿದೆ.
ಅಲ್ಲದೇ, ಸ್ಕ್ಯಾನ್ ವರದಿ ವೇಳೆ ಎಡಗಣ್ಣು ಸಂಪೂರ್ಣವಾಗಿ ಹಾನಿಯಾಗಿರುವುದೂ ಗೊತ್ತಾಗಿದೆ. ನಂತರ ನೇತ್ರಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಡಾ.ಮಂಜುನಾಥ್ ವಿಜಯಪುರ, ಡಾ.ವಸಂತ್ ಕಟ್ಟಿಮನಿ, ಡಾ. ಅನುರಾಧ ನಾಗನಗೌಡರ್, ಡಾ.ಸ್ಫೂರ್ತಿ ಶೆಟ್ಟಿ ಮತ್ತು ಅರವಳಿಕೆ ವಿಭಾಗದ ಸಿಬ್ಬಂದಿ ಶಸ್ತ್ರಚಿಕಿತ್ಸೆ ನಡೆಸಿ, 7 ಸೆಂಟಿ ಮೀಟರ್ನಷ್ಟು ಉದ್ದದ ಮುರಿದ ಟೂತ್ ಬ್ರಷ್ ಚೂರನ್ನು ಹೊರತೆಗೆದಿದ್ದಾರೆ.
ಇದೀಗ ರೋಗಿ ಆರೋಗ್ಯವಾಗಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಅವರನ್ನು ಮನೆಗೆ ಕಳುಹಿಸಲಾಗುವುದು ಎಂದು ಡಾ.ಮಂಜುನಾಥ್ ವಿಜಯಪುರ ಮಾಹಿತಿ ನೀಡಿದರು.
ಇದನ್ನೂ ಓದಿ: ಆದಿವಾಸಿಗಳ ಆರೋಗ್ಯ ಕಾಳಜಿಗೆ ಪ್ರತ್ಯೇಕ ಸೆಲ್.. ಗಡಿಜಿಲ್ಲೆಯಲ್ಲಿ ರಾಜ್ಯದಲ್ಲೇ ಮೊದಲ ಪ್ರಯತ್ನ