ಬೆಂಗಳೂರು: ಬಾಡಿಗೆ ಕೊಡುವಂತೆ ಕೇಳಿದಕ್ಕೆ ನಿವೃತ್ತ ಉಪ ತಹಶೀಲ್ದಾರ್ ಕೆ.ರಾಜೇಶ್ವರಿ ಹತ್ಯೆ ಮಾಡಿ ಶವವನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೋರ್ವ ಆರೋಪಿಯನ್ನು ವಿವಿಪುರಂ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಇಬ್ರಾಹಿಂ ಖಾನ್ (45) ಬಂಧಿತ. ಈ ಪ್ರಕರಣದಲ್ಲಿ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದ್ದು, ಇದೀಗ ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಪ್ರಕರಣ ಪ್ರಮುಖ ಆರೋಪಿ ಅಲೀಂ ಪಾಷಾಗೆ ಪರಿಚಿತನಾಗಿದ್ದ ಇಬ್ರಾಹಿಂ ಮೃತ ರಾಜೇಶ್ವರಿ ಶವವನ್ನು ಸಾಗಿಸಲು ಸಹಾಯ ಮಾಡಿದ್ದ. ಬಂಧನಕ್ಕೊಳಗಾದ ಆರೋಪಿಗಳು ನೀಡಿದ ಸುಳಿವಿನ ಆಧಾರದ ಮೇರೆಗೆ ಇಬ್ರಾಹಿಂಗಾಗಿ ಕೆಲ ಸಮಯದಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇತ್ತೀಚೆಗೆ ಆತ ಉತ್ತರಪ್ರದೇಶದಲ್ಲಿ ಸರವಸ್ಸಿ ಜಿಲ್ಲೆಯ ಪಟ್ಟರ್ ಗಂಜ್ನಲ್ಲಿರುವ ಆತನ ಮನೆಯಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಉತ್ತರ ಪ್ರದೇಶಕ್ಕೆ ತೆರಳಿದ ವಿವಿಪುರ ಪೊಲೀಸರು ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ.
ಪ್ರಕರಣ ಹಿನ್ನೆಲೆ: ನಿವೃತ್ತ ಉಪ ತಹಶೀಲ್ದಾರ್ ರಾಜೇಶ್ವರಿಗೆ ಪಾರ್ವತಿಪುರದ ಮುನಿ ವೆಂಕಟಪ್ಪ ರಸ್ತೆಯಲ್ಲಿ 3 ಮಹಡಿಯ ಕಟ್ಟಡವಿದ್ದು, ಬಾಡಿಗೆಗೆ ನೀಡಿದ್ದರು. 2ನೇ ಮಹಡಿಯಲ್ಲಿ ವಾಸಿಸುತ್ತಿದ್ದ ಆಲಂ ಪಾಷಾ ತನ್ನ ಕುಟುಂಬದ ಜತೆ ನೆಲೆಸಿದ್ದ. ಕಳೆದ 9 ತಿಂಗಳಿಂದ ಬಾಡಿಗೆ ಹಣವನ್ನು ಕೊಟ್ಟಿರಲಿಲ್ಲ. ಫೆ.3ರಂದು ಬಾಡಿಗೆ ಹಣ ವಸೂಲಿ ಮಾಡುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ರಾಜೇಶ್ವರಿಯನ್ನು ಮನೆ ಒಳಗೆ ಎಳೆದು ಕತ್ತುಕೊಯ್ದು ಕೊಲೆ ಮಾಡಿದ್ದ. ಆನಂತರ ತನ್ನ ಚಿಕ್ಕಪ್ಪ ಮತ್ತು ಪರಿಚಿತರ ಸಹಾಯದಿಂದ ಕ್ಯಾಟರಿಂಗ್ಗೆ ಇಟ್ಟುಕೊಂಡಿದ್ದ ಗೂಡ್ಸ್ ಆಟೋದಲ್ಲಿ ಶವವನ್ನು ಹಾಕಿ ಕೆಂಗೇರಿ ಸಮೀಪದ ಅಂಚೆಪಾಳ್ಯದಲ್ಲಿ ನಿರ್ಜನ ಪ್ರದೇಶದಲ್ಲಿ ಶವ ಎಸೆದು ಬೆಂಕಿಹಚ್ಚಿ ಸುಟ್ಟಿ ಹಾಕಿದ್ದರು.