ಬೆಂಗಳೂರು: ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಪುತ್ರನಿಗೆ, ಜ್ಯೋತಿಷಿಯೊಬ್ಬರ ಮಗನಿಂದ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಶಾಸಕರೊಬ್ಬರ ಪುತ್ರಿಯ ಹೆಸರು ಕೇಳಿಬಂದಿದೆ. ಶಾಸಕರ ಪುತ್ರಿಯ ಹೆಸರಿನಲ್ಲಿದ್ದ ಮೊಬೈಲ್ನಿಂದ ಸಚಿವರ ಪುತ್ರನಿಗೆ ಬೆದರಿಕೆ ಹಾಕಲಾಗಿತ್ತು ಎಂಬ ಅಂಶ ತನಿಖೆಯಿಂದ ಗೊತ್ತಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ತಮ್ಮ ಮಗಳ ಮೇಲೆ ಬಂದಿರುವ ಆರೋಪ ತಳ್ಳಿ ಹಾಕಿದ್ದಾರೆ. ಅಲ್ಲದೇ, ನನ್ನ ಪುತ್ರಿ ಕಳೆದ ಮಾರ್ಚ್ನಲ್ಲಿ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್ಗೆ ತೆರಳಿದ್ದಾಳೆ. ಆರೋಪಿ ರಾಕೇಶ್ ಮತ್ತು ನನ್ನ ಮಗಳು ಗೆಳೆಯರು. ಯಾವುದೋ ಬ್ಯುಸಿನೆಸ್ ವಿಚಾರವಾಗಿ ತನ್ನ ಮೊಬೈಲ್ನಿಂದ ರಾಕೇಶ್ಗೆ ಒಟಿಪಿ ಕಳುಹಿಸಿದ್ದಾಳೆ ಅಷ್ಟೇ. ಪ್ರಕರಣದಲ್ಲಿ ತನ್ನ ಮಗಳ ಪಾತ್ರವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ವಿಚಾರವಾಗಿ ನಾನು ಸಚಿವ ಸೋಮಶೇಖರ್ ಅವರನ್ನು ಭೇಟಿ ಮಾಡಿದ್ದೇನೆ. ತನ್ನ ಮಗಳ ಮೇಲೆ ವಿನಾಕಾರಣ ಆರೋಪ ಬಂದಿದೆ. ತಪ್ಪಿತಸ್ಥರು ಯಾರೇ ಇದ್ದರೂ, ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಸದ್ಯ ತನಿಖೆ ನಡೆಯುತ್ತಿದೆ. ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂದು ತಿಳಿಯಬೇಕು ಎಂದರು.
ಇದನ್ನೂ ಓದಿ: ರಾಜ್ಯಾದ್ಯಂತ ಬೂಸ್ಟರ್ ಡೋಸ್ ಲಸಿಕಾಭಿಯಾನಕ್ಕೆ ಸಿಎಂ ಚಾಲನೆ: ಸ್ಪುಟ್ನಿಕ್ ಲಸಿಕೆ ಪಡೆದವರಿಗಿಲ್ಲ ಬೂಸ್ಟರ್ ಡೋಸ್