ಬೆಂಗಳೂರು: ಮೇಯರ್ ಗೌತಮ್ ಕುಮಾರ್ ತಂಡ ನಗರದ ಕೆಲ ಖಾಸಗಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಮೊದಲು ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿ ನೀಡಿ ಒಟ್ಟು ಹಾಸಿಗೆಗಳ ಲಭ್ಯತೆ, ಸರ್ಕಾರಿ ಮತ್ತು ಖಾಸಗಿಗೆ ಕಾಯ್ದಿರಿಸಿರುವ ಬಗ್ಗೆ ನೊಟೀಸ್ ಬೋರ್ಡ್ ಪರಿಶೀಲಿಸಿದರು. ನಂತರ ಆಡಳಿತ ಮಂಡಳಿ ಜೊತೆ ಚರ್ಚಿಸಿ ಕೂಡಲೇ ಹೆಲ್ಪ್ಡೆಸ್ಕ್ ಆರಂಭಿಸುವ ಬಗ್ಗೆ ಮಾಹಿತಿ ನೀಡಿದರು. ರೋಗಿಗಳು ಡಿಸ್ಚಾರ್ಜ್ ಆಗಿದ್ದರೂ ಪೋರ್ಟಲ್ನಲ್ಲಿ ಅಡ್ಮಿಟ್ ಅಂತ ತೋರಿಸುತ್ತಿದೆ. ತಂತ್ರಾಂಶದಲ್ಲಿ ತೊಡಕಿದ್ದು, ಸರಿಪಡಿಸುವಂತೆ ತಿಳಿಸಿದರು.
ಬಳಿಕ ವಿಕ್ರಮ್ ಆಸ್ಪತ್ರೆಗೆ ಭೇಟಿ ನೀಡಿ ಕೂಡಲೇ ಹೆಲ್ಪ್ ಡೆಸ್ಕ್ ಸ್ಥಾಪಿಸಿ ಸಿಬ್ಬಂದಿಗೆ ಅವಶ್ಯಕ ಮಾಹಿತಿ ನೀಡಿ, ಆಸನ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಇನ್ನು, ವಿಕ್ರಮ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ಗೆ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಬಂದಿತ್ತು. ಈಗ ಹೆಚ್ಚುವರಿಯಾಗಿ ಪಡೆದ ಹಣವನ್ನು ಹಿಂತಿರುಗಿಸಲಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಸರ್ಕಾರದ ನಿಯಮ ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸ್ಪಷ್ಟೀಕರಣ ಪತ್ರ ಕೊಡಿ. ಒಟ್ಟು ಹಾಸಿಗೆಗಳು ಎಷ್ಟಿವೆ, ಎಷ್ಟು ಭರ್ತಿಯಾಗಿದೆ ಎಂಬುದನ್ನು ಚಾರ್ಟ್ನಲ್ಲಿ ಹಾಕಿ ಎಂದರು. ಬಳಿಕ ಏಸ್ಟರ್ ಸಿಎಂಐ ಆಸ್ಪತ್ರೆಗೆ ಭೇಟಿ ನೀಡಿ, ಖಾಸಗಿ ಫೀವರ್ ಕ್ಲಿನಿಕ್ ಪರಿಶೀಲಿಸಿದರು. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಚಿಸಿದರು.
ಕೋವಿಡ್-19 ಸೋಂಕು ನಿಯಂತ್ರಿಸಲು ಎಲ್ಲರೂ ಕೈಜೋಡಿಸಿ ಒಟ್ಟಿಗೆ ಕಾರ್ಯ ನಿರ್ವಹಿಸಬೇಕಿದೆ. ಹೀಗಾಗಿ ಆಸ್ಪತ್ರೆಗೆ ಕೋವಿಡ್-19 ಸೋಂಕಿತರಾಗಲಿ ಅಥವಾ ಸಾಮಾನ್ಯ ಕಾಯಿಲೆಯಿಂದ ಬಳಲುತ್ತಿರುವವರು ಬಂದರೆ ಕೂಡಲೇ ಸ್ಪಂದಿಸಿ ಎಂದು ಮನವಿ ಮಾಡಿದರು.
ಜನರಿಗೆ ಅನುಕೂಲವಾಗಲು ಖಾಸಗಿ ಆಸ್ಪತ್ರೆಗಳಲ್ಲಿ ಕೂಡಲೇ ನಾಗರಿಕ ಸಹಾಯ ಕೇಂದ್ರ ತೆರೆಯಲು ಕ್ರಮ ವಹಿಸುವಂತೆ ಮುಖ್ಯ ಆರೋಗ್ಯಾಧಿಕಾರಿಗೆ ಮೇಯರ್ ಸೂಚಿಸಿದರು. ಅಲ್ಲದೆ, ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿರುವ ಹಾಸಿಗೆ ಸಾಮರ್ಥ್ಯ ಹಾಗೂ ಎಷ್ಟು ಮಂದಿ ದಾಖಲಾಗಿದ್ದಾರೆ ಎಂಬುದರ ಬಗ್ಗೆ ರಿಯಲ್ ಟೈಂ ಡಿಜಿಟಲ್ ಬೋರ್ಡ್ ಹಾಕಿ, ಸಮರ್ಪಕ ಮಾಹಿತಿ ನೀಡುವಂತೆ ಕ್ರಮವಹಿಸಲು ಸೂಚಿಸಿದರು.