ಬೆಂಗಳೂರು : ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್ಡೌನ್ ಘೋಷಿಸಿರುವ ಪರಿಣಾಮ ಕುಡುಕರೂ ಸೇರಿದಂತೆ ಮಾದಕ ವ್ಯಸನಿಗಳು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲಾಗದೇ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ರಾಜ್ಯಾದ್ಯಂತ ಹೆಚ್ಚಾಗುತ್ತಿವೆ.
ಲಾಕ್ಡೌನ್ನಿಂದ ಮದ್ಯ ಮಾರಾಟ ಬಂದ್ ಆಗಿರುವ ಹಿನ್ನೆಲೆಯಲ್ಲಿ ಮದ್ಯ ಸಿಗದೇ ಕಂಗಾಲಾಗಿರುವ ಕುಡುಕರು ನಿತ್ಯವೂ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಳೆದ ಮಾ.24ರಂದು ಸರ್ಕಾರ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಎಲ್ಲ ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚುವಂತೆ ಆದೇಶಿತ್ತು. ಮೊದಲಿಗೆ ಮಾ.31 ರವರೆಗಷ್ಟೇ ಲಾಕ್ಡೌನ್ ಘೋಷಿಸಿದ್ದರಿಂದ ಕುಡುಕರಿಗೆ ಇನ್ನಾದರೂ ಮದ್ಯ ಸಿಗಲಿದೆ ಎಂಬ ಆಶಾಭಾವನೆ ಇತ್ತು. ಆದರೆ ಕೇಂದ್ರ ಸರ್ಕಾರ ಯಾವಾಗ ಲಾಕ್ಡೌನ್ ಅನ್ನು ಏ.14 ರವರೆಗೆ ವಿಸ್ತರಿಸಿತೋ ಆಗ ಕುಡುಕರೂ ಸೇರಿದಂತೆ ಇನ್ನಿತರ ಮಾದಕ ವ್ಯಸನಿಗಳಿಗೆ ಜಗತ್ತೇ ಮುಳುಗಿಹೋದಂತೆ ಭಾಸವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ವ್ಯಸನಿಗಳು ಮದ್ಯಕ್ಕಷ್ಟೇ ದಾಸರಾಗಿದ್ದಾರೆ. ಆದರೆ ನಗರ ಪ್ರದೇಶಗಳಲ್ಲಿನ ವ್ಯಸನಿಗಳು ಬರೀ ಮದ್ಯಪಾನಕ್ಕಷ್ಟೇ ಸೀಮಿತಗೊಂಡಿಲ್ಲ. ಬದಲಿಗೆ ಗಾಂಜಾ, ಅಫೀಮು, ಕೊಕೇನ್ ಸೇರಿದಂತೆ ವಿವಿಧ ಬಗೆಯ ಡ್ರಗ್ಗಳಿಗೆ ಅಂಟಿಕೊಂಡಿದ್ದಾರೆ. ಇವರಿಗೆಲ್ಲ ಈಗ ಮಾದಕ ವಸ್ತುಗಳು ಸಿಗದೆ ಕಂಗಾಲಾಗಿದ್ದಾರೆ. ತಮ್ಮ ಬಳಿ ಇರಿಸಿಕೊಂಡಿದ್ದ ಅಲ್ಪಸ್ವಲ್ಪ ಸರಕು ಖಾಲಿಯಾದ ಬಳಿಕ ಸ್ನೇಹಿತರ ಬಳಿ ಬೇಡಿ ಅಲ್ಲಿಯೂ ಖಾಲಿಯಾದ ಬಳಿಕ ಖಿನ್ನತೆಗೆ ಜಾರಿದ್ದಾರೆ. ಹೀಗಾಗಿ ಇಂಥವರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ.
ಪೊಲೀಸರ ಮಾಹಿತಿಯಂತೆ ರಾಜ್ಯದಲ್ಲಿ ಈವರೆಗೆ 16 ಮಂದಿ ಮದ್ಯ ಮತ್ತು ಇನ್ನಿತರ ಮಾದಕ ವಸ್ತುಗಳು ಸಿಕ್ಕಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಕ್ಷರತೆಯಲ್ಲಿ ಮೇಲುಗೈ ಸಾಧಿಸಿರುವ ಉಡುಪಿಯಲ್ಲೇ 6 ಜನ ಸಾವಿಗೆ ಶರಣಾಗಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆಯ ದೊಡ್ಡೂರು ನಿವಾಸಿ ಆನಂದ್(30), ಮುಳಬಾಗಿಲು ತಾಲೂಕಿನ ಮಲ್ಲೆಕುಪ್ಪೆ ನಿವಾಸಿ ಎಂ ಶಂಕರ(36), ಶಿವಮೊಗ್ಗ ಜಿಲ್ಲೆಯ ಸಾಗರದ ಕೂಲಿಕಾರ್ಮಿಕ ರಾಮಚಂದ್ರ (45), ತುಮಕೂರಿನ ಮಧುಗಿರಿ ನಿವಾಸಿ ಹನುಮಂತಪ್ಪ (47), ಬೀದರ್ ಭಾಲ್ಕಿ ಪಟ್ಟಣದ ಹೋಟೆಲ್ ಕಾರ್ಮಿಕ ಭಾಸ್ಕರ್ (40), ಹಾಸನದ ಶಾಂತಿಗ್ರಾಮದ ಕೂಲಿ ಕಾರ್ಮಿಕ ಎಚ್.ವಿ. ಶಶಿಕುಮಾರ್ (32), ಹುಬ್ಬಳ್ಳಿ ಹೊಸೂರಿನ ವಾಚ್ಮನ್ ಉಮೇಶ ಹಡಪದ (46), ದಕ್ಷಿಣ ಕನ್ನಡದ ಪುತ್ತೂರಿನ ಗಾಣದಕೆರೆ ನಿವಾಸಿ ಥಾಮಸ್ (70), ಬಂಟ್ವಾಳದ ನಿವಾಸಿಗಳಾದ ಟೋನಿ (40), ಪ್ರವೀಣ್ (37), ಉಡುಪಿಯ ಕಾಪುಪಡುವಿನ ಮೀನುಗಾರ ಶಶಿಧರ ಸುವರ್ಣ(46) ಇವರೆಲ್ಲರೂ ಮದ್ಯ ಸಿಗದೆ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳು.
ಲಾಕ್ಡೌನ್ ಅವಧಿಯಲ್ಲಿ ಮದ್ಯ ಸಿಗದೆ ಆತ್ಮಹತ್ಯೆಗೆ ಶರಣಾದವರಲ್ಲಿ ಲೆಕ್ಕಕ್ಕೆ ಸಿಕ್ಕಿರುವವರು ಇಷ್ಟೇ. ಲೆಕ್ಕಕ್ಕೆ ಸಿಗದವರು ಇನ್ನೂ ಇರಬಹುದು ಎನ್ನುತ್ತಾರೆ ಅಬಕಾರಿ ಅಧಿಕಾರಿಗಳು. ಇವರಲ್ಲದೇ ನಿತ್ಯವೂ ಅಕ್ರಮವಾಗಿ ನಡೆಯುತ್ತಿದ್ದ ಕ್ಲಬ್ಗಳಿಗೆ ತೆರಳಿ ಗಾಂಜಾ, ಅಫೀಮುಗಳಲ್ಲಿ ತೇಲುತ್ತಿದ್ದ, ಕಾಲೇಜು ಸುತ್ತಮುತ್ತ ಮಾರಾಟವಾಗುತ್ತಿದ್ದ ಹಲವು ಬಗೆಯ ಡ್ರಗ್ಸ್ ಸೇವಿಸುತ್ತಿದ್ದವರ ಸಂಕಟ ಹೇಳತೀರದಂತಾಗಿದೆ.
ಇದರ ನಡುವೆ ಕೆಲವು ಮದ್ಯ ವ್ಯಸನಿಗಳು ವಿಚಿತ್ರ ನಡವಳಿಕೆಗಳನ್ನೂ ವ್ಯಕ್ತಪಡಿಸುತ್ತಿದ್ದಾರೆ. ತುಮಕೂರಿನ ವ್ಯಕ್ತಿಯೊಬ್ಬ ಮದ್ಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬೆದರಿಕೆ ಹಾಕಿದ್ದ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಿವಾಸಿ ಮಂಜುನಾಥ್ ಎಂಬಾತ ಮದ್ಯ ಪೂರೈಸುವಂತೆ ಕೇಳಿ ಸಿಎಂ ಗೇ ಬಹಿರಂಗ ಪತ್ರ ಬರೆದಿದ್ದ. ಇವರೆಲ್ಲರನ್ನೂ ಮೀರಿಸುವಂತೆ ಕೇರಳದಲ್ಲಿ ವ್ಯಕ್ತಿಯೋರ್ವ ಮದ್ಯ ಸರಬರಾಜು ಕೋರಿ ಅಲ್ಲಿನ ಹೈಕೋರ್ಟ್ಗೆ ಅರ್ಜಿ ಹಾಕಿದ್ದ. ಈತನ ವಿಚಿತ್ರ ಕೋರಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ 50 ಸಾವಿರ ರೂ. ದಂಡ ವಿಧಿಸಿತ್ತು. ಇನ್ನು ತೆಲಂಗಾಣ ಸರ್ಕಾರದ ಅಧಿಸೂಚನೆಯನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಮದ್ಯ ಮಾರಾಟ ವಿಚಾರ ಕುಡುಕರ ಕಣ್ಣಲ್ಲಿ ಅರೆಕ್ಷಣ ಸಂಭ್ರಮವನ್ನು ಸೃಷ್ಟಿಸಿ ಹಾಗೇ ಮರೆಯಾಗಿ ಬಿಟ್ಟಿದ್ದು ಸುಳ್ಳಲ್ಲ.
ಇವೆಲ್ಲದರ ನಡುವೆ ಕೆಲ ಮದ್ಯ ಮಾರಾಟಗಾರರು ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಚೆನ್ನಾಗಿಯೇ ಜೋಳಿಗೆ ತುಂಬಿಸಿಕೊಳ್ಳುತ್ತಿದ್ದಾರೆ. ಇವರ ಬೇಟೆಗೆ ಇಳಿದಿರುವ ಅಬಕಾರಿ ಅಧಿಕಾರಿಗಳು ಬೆಂಗಳೂರಿನಲ್ಲಿ ಮೂರು ಬಾರ್ ಅಂಡ್ ರೆಸ್ಟೋರೆಂಟ್ಗಳ ಲೈಸೆನ್ಸ್ ಅಮಾನತು ಮಾಡಿದ್ದಾರೆ. ಕೊರೊನಾ ತಡೆಗಟ್ಟಲು ಸರ್ಕಾರ ಮದ್ಯ ಮಾರಾಟ ಸ್ಥಗಿತಗೊಳಿಸಿದ್ದರೂ ಚಟಕ್ಕೆ ದಾಸರಾಗಿರುವ ಕುಡುಕರು ತಮ್ಮೆಲ್ಲಾ ಶಕ್ತಿ ಸಾಮರ್ಥ್ಯ ಬಳಸಿ ಸುರಪಾನಕ್ಕಾಗಿ ಸರ್ಕಸ್ ಮಾಡುತ್ತಿದ್ದಾರೆ.
ಈ ಪರಿಸ್ಥಿತಿಯನ್ನು ವೈದ್ಯರ ಬಳಿ ವಿವರಿಸಿದರೆ- ಅವರು ಹೇಳುವುದಕ್ಕೂ ಕುಡುಕರ ಸಂಕಟಕ್ಕೂ ಸಾಮೀಪ್ಯ ಇರುವುದು ಕಂಡುಬರುತ್ತದೆ. ವಿಪರೀತ ಕುಡಿತ ಅಥವಾ ಮತ್ತಿನ್ಯಾವುದೇ ಮಾದಕ ವಸ್ತುವಿನ ದಾಸ್ಯಕ್ಕೆ ಒಳಗಾಗಿರುವ ವ್ಯಕ್ತಿಗೆ ನಿಯಮಿತವಾಗಿ ಅವುಗಳನ್ನು ಪೂರೈಸಲೇಬೇಕು. ಇಲ್ಲದಿದ್ದರೆ ನರಮಂಡಲ ವ್ಯವಸ್ಥೆಯಲ್ಲಿ ಬದಲಾವಣೆಯಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಚಿತ್ರವಾದ ಸಂಕಟ ಅನುಭವಿಸುತ್ತಾರೆ ಎಂದು ವೈದ್ಯರು ವ್ಯಸನಿಗಳ ಸಂಕಟವನ್ನು ಸರಳವಾಗಿ ವಿವರಿಸುತ್ತಾರೆ. ಜತೆಗೆ ವ್ಯಸನ ತೊರೆದ ಆರಂಭದ ದಿನಗಳಲ್ಲೇ ಅಗತ್ಯ ವೈದ್ಯಕೀಯ ನೆರವು ನೀಡದಿದ್ದಾಗ ಸಾವಿನ ಬಗ್ಗೆ ಯೋಚಿಸುತ್ತಾರೆ ಎನ್ನುತ್ತಾರೆ. ಒಟ್ಟಿನಲ್ಲಿ ಸರ್ಕಾರ ಕೊರೊನಾ ನಿಯಂತ್ರಿಸಲು ಮದ್ಯ ಮಾರಾಟ ನಿಲ್ಲಿಸಿರುವುದು ಕುಡುಕರ ಪಾಲಿಗೆ ಕರಾಳ ದಿನಗಳಾಗಿದ್ದರೂ ಪರಿಸ್ಥಿತಿ ನಿಭಾಯಿಸಲು ಅನ್ಯ ಮಾರ್ಗವಿಲ್ಲ ಎನ್ನುವುದೂ ಅಷ್ಟೇ ಸತ್ಯ.