ಬೆಂಗಳೂರು : ಕೇಂದ್ರ ಸರ್ಕಾರದ ನಿರ್ಭಯ ಯೋಜನೆಯಡಿ ಮೊದಲ ಬಾರಿಗೆ ರೈಲ್ವೆ ಪೊಲೀಸರಿಗೆ ದ್ವಿಚಕ್ರ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಡೆಯಿತು. ಎಡಿಜಿಪಿ ಭಾಸ್ಕರ್ ರಾವ್ ಹಾಗೂ ಎಸ್ಪಿ ಸಿರಿಗೌರಿ ಅವರು ಪೊಲೀಸ್ ಸಿಬ್ಬಂದಿಗೆ ವಾಹನಗಳನ್ನು ವಿತರಿಸಿದರು.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ರಾಜ್ಯ ರೈಲ್ವೆ ಎಸ್ಪಿ ಸಿರಿಗೌರಿ, ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಪೊಲೀಸ್ ವಿಭಾಗಗಳಲ್ಲಿ ನಿರ್ಭಯ ನಿಧಿಯಡಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಪೆಟ್ರೋಲಿಂಗ್ಗೆ ಸಂಬಂಧಪಟ್ಟಂತೆ ಬೈಕ್ಗಳನ್ನು ಪೊಲೀಸ್ ಇಲಾಖೆಯ ಎಲ್ಲಾ ವಿಭಾಗಗಳಿಗೆ ನೀಡಲಾಗಿದೆ. ಇದರ ಭಾಗವಾಗಿ ಇಂದು ರೈಲ್ವೆ ಪೊಲೀಸ್ ಇಲಾಖೆಗೆ 13 ಬೈಕ್ಗಳನ್ನು ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮುಖ್ಯವಾಗಿ ಮಹಿಳೆಯರ ಸುರಕ್ಷತೆಗಾಗಿ ಬೈಕ್ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ರೈಲ್ವೆ ಹಳಿಗಳ ಅಕ್ಕ ಪಕ್ಕದಲ್ಲಿ ಜಾಸ್ತಿ ಜಾಗ ಇರುವುದಿಲ್ಲ. ಫೂಟ್ ಪೆಟ್ರೋಲಿಂಗ್ ಅಥವಾ ದ್ವಿಚಕ್ರ ವಾಹನಗಳ ಮೂಲಕ ಘಟನಾ ಸ್ಥಳಕ್ಕೆ ತಲುಪಬೇಕಾಗುತ್ತದೆ.
![13 Bikes has given to railway police](https://etvbharatimages.akamaized.net/etvbharat/prod-images/kn-bng-02-railway-polic-first-nirbhaya-fund-bikes-script-ka10032_30072021151142_3007f_1627638102_414.jpg)
ರೈಲ್ವೆ ಬೀಟ್ಗಳು, ಪೊಲೀಸ್ ಠಾಣೆಯಷ್ಟು ಚಿಕ್ಕ ವ್ಯಾಪ್ತಿಯಲ್ಲಿ ಇರುವುದಿಲ್ಲ. ಟ್ರ್ಯಾಕ್ ಉದ್ದಗಲಕ್ಕೂ ನಮ್ಮ ವ್ಯಾಪ್ತಿ ಇರುತ್ತದೆ. ಹಾಗಾಗಿ, ಅಪರಾಧ ತಡೆಯಲು ಮತ್ತು ದುರ್ಘಟನೆ ನಡೆದಿರುವ ಸ್ಥಳಗಳಿಗೆ ದ್ವಿಚಕ್ರ ವಾಹನಗಳು ಹೆಚ್ಚಿನ ಉಪಯೋಗವಾಗುತ್ತದೆ ಎಂದರು.
ಟ್ರ್ಯಾಕ್ ಸುತ್ತಮುತ್ತ ಕ್ರೈಂ ನಡೆಯುವುದು ಹೆಚ್ಚು, ನಿರ್ಜನ ಪ್ರದೇಶ, ಕಾಡು ಮೇಡು ಹೆಚ್ಚಾಗಿದ್ದು, ಜನಸಂದಣಿ ಇರುವುದಿಲ್ಲ. ಬೀಟ್ ಕಡಿಮೆ ಇರುವುದರಿಂದ ಅಪರಾಧ ಕೃತ್ಯವೆಸಗಲು ಅನುಕೂಲಕರ ವಾತಾವರ ಅಪರಾಧಿಗಳಿಗೆ ಇರುತ್ತದೆ.
ಇಂತಹ ಸಂದರ್ಭದಲ್ಲಿ ಬೇಗ ಹೋಗಿ ತಲುಪುವ ಅವಶ್ಯಕತೆ ಇರುತ್ತದೆ. ಜತೆಗೆ ನನ್ನ ಪ್ರಕಾರ ಟ್ರ್ಯಾಕ್ ಮೇಲೆ ಆತ್ಮಹತ್ಯೆಗೆ ಜಾಸ್ತಿ ಹೆಣ್ಣುಮಕ್ಕಳೇ ಪ್ರಯತ್ನಿಸುತ್ತಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಈ ವಾಹನಗಳು ಸಹಕಾರಿಯಾಗಲಿದೆ ಎಂದರು.
ವಿಸಿಟಿಂಗ್ ಕಾರ್ಡ್ ಕಾರ್ಯಕ್ರಮ ಪ್ರಾರಂಭ ಮಾಡಿದ್ದೇವೆ. ಮುಖ್ಯವಾಗಿ ಮಹಿಳೆಯರು ಒಬ್ಬರೇ ಪ್ರಯಾಣಿಸುವ ಸಂದರ್ಭ ಹೆಚ್ಚಿರುತ್ತವೆ. ಈ ಸಮಯದಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಕಾರ್ಡ್ಗಳನ್ನು ನೀಡುವ ಕಾರ್ಯಕ್ರಮ ಈಗಾಗಲೇ ಜಾರಿಯಾಗಿದೆ.
ಅವರಿಗೆ ಏನಾದರು ತೊಂದರೆ ಎದುರಾದರೆ ನಮ್ಮ ಕಂಟ್ರೋಲ್ ರೂಮ್ಗೆ ಕರೆ ಮಾಡಬಹುದು. ಅಥವಾ ರೈಲ್ವೆ ಪೊಲೀಸ್ ಸ್ಟೇಷನ್ಗಳಿಗೆ ದೂರು ನೀಡಲು ದಾರಿ ಮಾಡಿ ಕೊಟ್ಟಿದ್ದೇವೆ. ಏನೇ ತೊಂದರೆಯಾದರೂ ಅವರಿಗೆ ಬೇಕಾದಂತಹ ಸಹಾಯ ಮಾಡಲು ಸನ್ನದ್ಧರಾಗಲಿದ್ದೇವೆ ಎಂದರು.