ಕಂಪ್ಲಿ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣವು ಮಳೆ ನೀರಿನಿಂದಾಗಿ ಕೆರೆಯಂತಾಗಿದೆ. ಚರಂಡಿ ನೀರು ಮತ್ತು ಮಳೆ ನೀರಿನಿಂದ ಭರ್ತಿಯಾಗಿದೆ. ಈ ನೀರು ಹೊರ ಹೋಗುವುದಕ್ಕೆ ಸರಿಯಾಗಿ ಮೋರಿ ವ್ಯವಸ್ಥೆ ಇಲ್ಲ. ಸೊಳ್ಳೆಗಳು ಹಾಗೂ ನೊಣಗಳಿಂದ ಪ್ರಯಾಣಿಕರಿಗೆ ಭಯ ಶುರುವಾಗಿದೆ. ಇಲ್ಲಿಗೆ ಬಂದು ಕುಳಿತುಕೊಂಡರೆ ಮಲೇರಿಯಾ, ಡೆಂಘೀ, ಟೈಫೈಡ್ನಂತಹ ಕಾಯಿಲೆಗಳು ಬರುವ ಆತಂಕ ಎದುರಾಗಿದೆ.
ಮೂಲಸೌಲಭ್ಯ ವಂಚಿತ ಬಸ್ ನಿಲ್ದಾಣ: ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳಿಲ್ಲ. ಕರೆಂಟಿನ ವ್ಯವಸ್ಥೆಯಿಲ್ಲ. ಮಲ-ಮೂತ್ರ ವಿಸರ್ಜನೆಗೆ ಶೌಚಾಲಯವಿಲ್ಲ. ಕುಡಿಯಲೂ ನೀರಿಲ್ಲ. ಮದ್ಯವ್ಯಸನ ವ್ಯಕ್ತಿಗಳು ಯಾವಾಗಲೂ ಬಸ್ ನಿಲ್ದಾಣದಲ್ಲಿ ಮಲಗಿರುತ್ತಾರೆ. ಬಸ್ಗಳು ರಾತ್ರಿ ಸಮಯದಲ್ಲಿ ನಿಲ್ದಾಣದ ಕಡೆಗೆ ಬರುವುದಿಲ್ಲ. ಮಹಿಳೆಯರು ಇಲ್ಲಿಗೆ ಬರುವುದಕ್ಕೆ ಭಯ ಪಡುತ್ತಾರೆ. ಪ್ರಯಾಣಿಕರು ಬಸ್ ಸ್ಟಾಂಡ್ ಬಂತು ಅಂದ್ರೆ ಮೂಗು ಮುಚ್ಚಿಕೊಳ್ಳಬೇಕು. ಆದರೆ, ಸಂಬಂಧಿಸಿದ ಅಧಿಕಾರಿಗಳು ಮಾತ್ರ ಸುಮ್ಮನಿದ್ದಾರೆಂದು ಪ್ರಯಾಣಿಕರು ಈಟಿವಿ ಭಾರತಕ್ಕೆ ಅಳಲು ತೋಡಿಕೊಂಡಿದ್ದಾರೆ.
ಅಲ್ಲದೇ ಪ್ರಯಾಣಿಕರು ಬಸ್ ನಿಲ್ದಾಣದ ಕಡೆ ಬರದಂತೆ ಆಗಿದ್ದು, ರಾತ್ರಿಯ ಸಮಯ ಕುಡುಕರ ಅಡ್ಡೆಯಾಗಿದೆ ಎಂದು ಜಿಲಾನನಗರದ ನಿವಾಸಿಯೊಬ್ಬರು ಹೇಳಿದ್ದಾರೆ.