ಹೊಸಪೇಟೆ : ಹೊಸ ವರ್ಷಕ್ಕೆ ನಗರದಲ್ಲಿ ಕವಿರಾಜ ಅರಸ್ ಅಭಿಮಾನಿಗಳು ಶುಭಾಶಯ ತಿಳಿಸಲು ಬ್ಯಾನರ್ಗಳನ್ನು ಹಾಕಿದ್ದರು. ಇದನ್ನು ತೆರವುಗೊಳಿಸಲು ಬಂದ ಹೆಲ್ತ್ ಇನ್ಸ್ಪೆಕ್ಟರ್ ವೆಂಕಟೇಶ್ ಅವರಿಗೆ ಬಿಜೆಪಿ ಮುಖಂಡ ಕವಿರಾಜ ಅರಸ್ ಅವಾಜ್ ಹಾಕಿರುವ ಘಟನೆ ನಡೆದಿದೆ.
ಕವಿರಾಜ್ ಅವರ ಅಭಿಮಾನಿಗಳು 2020 ನೇ ವರ್ಷದ ಶುಭಾಶಯಗಳನ್ನು ಕೋರಲು ನಗರದಲ್ಲಿ ಬ್ಯಾನರ್ಗಳನ್ನು ಹಾಕಿಸಿದ್ದಾರೆ. ಅದನ್ನು ತೆರವುಗೊಳಿಸಲು ಬಂದ ಅಧಿಕಾರಿಗೆ ಸಾರ್ವಜನಿಕವಾಗಿ ಬಿಜೆಪಿ ಮುಖಂಡ ಆವಾಜ್ ಹಾಕಿದ್ದಾರೆ. ನಾನು ನಗರಸಭೆಯ ಕಚೇರಿಗೆ ಕಾಲಿಟ್ಟರೆ ಬೆಂಕಿ ಹತ್ತುತ್ತದೆ, ಹೊಸಪೇಟೆ ಶಾಂತವಾಗಿದೆ. ಹೋಗಿ ನಿಮ್ಮ ಮೇಡಂಗೆ ಹೇಳಿ ಎಂದು ಸಾರ್ವಜನಿಕರ ಮುಂದೆಯೇ ಜೋರು ಧ್ವನಿಯಲ್ಲಿ ಧಮ್ಕಿ ಹಾಕಿದರು.
ನಿಮ್ಮಿಂದಾಗಿ ಹೊಸಪೇಟೆ ಇಷ್ಟೊಂದು ಗಲಿಜಾಗಿರುವುದು. ಬ್ಯಾನರ್ ಹಾಕಿದರೆ ನಿಮ್ಮದೇನು ಗಂಟು ಹೋಗುತ್ತೆ? ನಗರದಲ್ಲಿ ಎಲ್ಲೆಂದರಲ್ಲಿ ಕಸ, ಕಡ್ಡಿ ಹಾಗೆಯೇ ಇದೆ. ಹೊಸ ವರ್ಷ ಇದ್ದರೂ ಕೂಡ ನಗರವನ್ನು ಸ್ವಚ್ಛ ಮಾಡಿಸಿಲ್ಲ. ನಗರದಲ್ಲಿ ಅಭಿಮಾನಿಗಳು ನನ್ನ ಬ್ಯಾನರ್ ಹಾಕಿರುವುದರಿಂದ ಸುಂದರವಾಗಿ ಕಾಣುತ್ತದೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ನನ್ನ ಬ್ಯಾನರ್ ತೆಗೆಯುವಂತಿಲ್ಲ. ನಿಮಗೆ ನಾವು ತೆರಿಗೆಯನ್ನು ಕಟ್ಟುತ್ತೇವೆ. ಅದರಿಂದ ನಿಮಗೆ ಸಂಬಳ ಬರುತ್ತೆ ಎಂದು ಜೋರು ದನಿಯಲ್ಲಿ ಅಧಿಕಾರಿಯನ್ನು ಗದರಿಸಿದ್ರು. ಈ ವಿಡಿಯೋ ಇದೀಗ ವೈರಲ್ ಆಗಿದೆ.