ಮಂಗಳೂರು: ನಗರದ ಜಿಲ್ಲಾ ಕಾರಾಗೃಹದೊಳಗೆ ಕೈದಿಗಳ ನಡುವೆ ನಡೆದ ಮಾರಾಮಾರಿಯ ಬಗ್ಗೆ ಪರಿಶೀಲನೆ ನಡೆಸಲು ಹೋದ ಸಂದರ್ಭದಲ್ಲಿ ತನ್ನ ಮೇಲೆ ಹಲ್ಲೆಯಾಗಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಸ್ಪಷ್ಟನೆ ನೀಡಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತಾಡಿದ ಅವರು, ಕೆಲ ಪತ್ರಿಕೆ ಹಾಗೂ ವೆಬ್ಸೈಟ್ನಲ್ಲಿ ಭಾನುವಾರ ಜೈಲಿನೊಳಗೆ ಕೈದಿಗಳ ನಡುವೆ ನಡೆದ ಮಾರಾಮಾರಿಯ ಬಗ್ಗೆ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಜೈಲು ಅಧಿಕಾರಿಗಳು, ಸಿವಿಲ್ ಪೊಲೀಸರು ಹಾಗೂ ಮಂಗಳೂರು ಪೊಲೀಸ್ ಆಯುಕ್ತರ ಮೇಲೂ ಹಲ್ಲೆಯಾಗಿದೆ ಎಂದು ತಪ್ಪಾಗಿ ಬರೆದಿದ್ದಾರೆ. ಆದರೆ ನನ್ನ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸುದ್ದಿ ಮಾಧ್ಯಮದವರು ಸರಿಪಡಿಸಲಿ ಎಂದು ಹೇಳಿದರು.
ಭಾನುವಾರ ಕಾರಾಗೃಹದೊಳಗೆ ನಡೆದ ಹೊಡೆದಾಟದಲ್ಲಿ ವಿಚಾರಣಾಧೀನ ಕೈದಿ ಮತ್ತೊಂದು ಬ್ಯಾರಕ್ನ ಕೈದಿಗಳಾದ ಜೈನು ಹಾಗೂ ಅನ್ಸಾರ್ ಎಂಬವರಿಗೆ ತನ್ನ 20 ಮಂದಿ ಸಹಚರರೊಂದಿಗೆ ಸೇರಿ ಹಲ್ಲೆ ನಡೆಸಿದ್ದ. ಜೈಲು ಅಧಿಕಾರಿಗಳು ಬಿಡಿಸಲು ಹೋದ ಸಂದರ್ಭ ಅವರಿಗೂ ಹಲ್ಲೆ ನಡೆಸಿದ್ದಾನೆ. ಅಲ್ಲದೆ ತಾನು ಪರಿಶೀಲನೆಗೆಂದು ತೆರಳಿದ ಸಂದರ್ಭದಲ್ಲಿ ಅವನನ್ನು ಕರೆದುಕೊಂಡು ಬರಲು ಹೋದ ಜೈಲು ಸಿಬ್ಬಂದಿ ಹಾಗೂ ಸ್ಥಳೀಯ ಠಾಣಾ ಸಿವಿಲ್ ಪೊಲೀಸ್ ಸಿಬ್ಬಂದಿ ಮೇಲೂ ದಾಳಿ ನಡೆಸಿರೋದು ಸತ್ಯ. ಆದರೆ ನನ್ನ ಮೇಲೆ ಹಲ್ಲೆ ನಡೆದಿಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ: ಇಬ್ಬರಿಗೆ ಗಾಯ