ಪ್ರಯಾಗರಾಜ್ (ಉತ್ತರಪ್ರದೇಶ): ಡೆಂಘೀ ರೋಗಿಗೆ ರಕ್ತದ ಪ್ಲೇಟ್ಲೆಟ್ ನೀಡುವ ಬದಲಿಗೆ ಹಣ್ಣಿನ ರಸವನ್ನು ವರ್ಗಾಯಿಸಿದ ಆರೋಪದ ಮೇಲೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದನ್ನು ಗುರುವಾರ ಸೀಲ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧಿತ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರಿಂದ ಜಿಲ್ಲಾಡಳಿತವು ಕ್ರಮ ಕೈಗೊಂಡಿದೆ. ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ನಿರ್ದೇಶನದ ಮೇರೆಗೆ ಆಸ್ಪತ್ರೆಯನ್ನು ಬಂದ್ ಮಾಡಿ ಸೀಲ್ ಮಾಡಲಾಗಿದೆ. ಡೆಂಘೀಯಿಂದ ಬಳಲುತ್ತಿದ್ದ ಪ್ರದೀಪ್ ಪಾಂಡೆ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಅವರ ಪರಿಸ್ಥಿತಿ ಮತ್ತಷ್ಟು ಹದೆಗೆಟ್ಟಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ಎಫ್ಐಆರ್ ದಾಖಲಾಗಿಲ್ಲ.
ಖಾಸಗಿ ಆಸ್ಪತ್ರೆಯಲ್ಲಿ ಪ್ಲೇಟ್ಲೆಟ್ಗಳನ್ನು ಬೇರೆ ಕಡೆಯಿಂದ ತರಿಸಿ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಉಪ ಮುಖ್ಯಮಂತ್ರಿ ಪಾಠಕ್, ಆಸ್ಪತ್ರೆಯಲ್ಲಿ ಡೆಂಘೀ ರೋಗಿಗೆ ಪ್ಲೇಟ್ಲೆಟ್ಗಳ ಬದಲಿಗೆ ಮೋಸಂಬಿ ರಸವನ್ನು ತುಂಬಿಸಿದ ವೈರಲ್ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು, ನನ್ನ ನಿರ್ದೇಶನದ ಮೇರೆಗೆ ಆಸ್ಪತ್ರೆಗೆ ಸೀಲ್ ಮಾಡಲಾಗಿದೆ ಮತ್ತು ಪ್ಲೇಟ್ಲೆಟ್ ಪ್ಯಾಕೆಟ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದರೆ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೂಲಗಳ ಪ್ರಕಾರ, ಸರಿಹೊಂದದ ಪ್ಲೇಟ್ಲೆಟ್ಗಳ ವರ್ಗಾವಣೆಯಿಂದಾಗಿ ರೋಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮುಖ್ಯ ವೈದ್ಯಾಧಿಕಾರಿಯ ಸೂಚನೆಯ ಮೇರೆಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಎಂದು ಡಿಸಿಎಂ ಸ್ಪಷ್ಟನೆ ಕೂಡಾ ನೀಡಿದ್ದಾರೆ. ಅಷ್ಟೇ ಅಲ್ಲ ರೋಗಿಗೆ ನೀಡಿದ ಎಲ್ಲ ಸ್ಯಾಂಪಲ್ಗಳನ್ನು ಪರೀಕ್ಷಿಸಲಾಗುವುದು ಹಾಗೂ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಆಸ್ಪತ್ರೆ ಕೊಡುತ್ತಿರುವ ಸ್ಪಷ್ಟನೆ ಏನು?: ರೋಗಿ ಪ್ರದೀಪ್ ಪಾಂಡೆ ಎಂಬುವವರ ಪ್ಲೇಟ್ಲೆಟ್ಗಳ ಮಟ್ಟ 17,000 ಕ್ಕೆ ಇಳಿದಿದ್ದರಿಂದ ಅವರ ಸಂಬಂಧಿಕರಿಗೆ ರಕ್ತದ ಪ್ಲೇಟ್ಲೆಟ್ ವ್ಯವಸ್ಥೆ ಮಾಡಲು ಕೇಳಲಾಗಿತ್ತು ಎಂದು ಆಸ್ಪತ್ರೆಯ ಮಾಲೀಕ ಸೌರಭ್ ಮಿಶ್ರಾ ಹೇಳಿದ್ದಾರೆ. ಅವರು ಎಸ್ಆರ್ಎನ್ ಆಸ್ಪತ್ರೆಯಿಂದ ಐದು ಯೂನಿಟ್ ಪ್ಲೇಟ್ಲೆಟ್ಗಳನ್ನು ತಂದು ಕೊಟ್ಟಿದ್ದರು. ಮೂರು ಯೂನಿಟ್ಗಳ ವರ್ಗಾವಣೆ ವರೆಗೂ ರೋಗಿ ಪ್ರತಿಕ್ರಿಯಿಸುತ್ತಲೇ ಇದ್ದರು. ಹೀಗಾಗಿ ಅವರು ಆ ಬಳಿಕ ಪೇಟ್ಲೆಟ್ ಯೂನಿಟ್ ನೀಡುವುದನ್ನು ನಿಲ್ಲಿಸಿದ್ದೇವೆ ಎಂದು ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.
ಪ್ಲೇಟ್ಲೆಟ್ಗಳ ಮೇಲೆ ಎಸ್ಆರ್ಎನ್ ಆಸ್ಪತ್ರೆಯ ಸ್ಟಿಕ್ಕರ್ ಇರುವುದರಿಂದ ಅವುಗಳ ಮೂಲವನ್ನು ಪರೀಕ್ಷಿಸಬೇಕು ಮತ್ತು ಅವುಗಳ ಮೂಲವನ್ನು ಕಂಡು ಹಿಡಿಯಬೇಕು ಎಂದು ಮಿಶ್ರಾ ಇದೇ ವೇಳೆ ಹೇಳಿದರು. ಈ ಸಂಬಂಧ ಮಾತನಾಡಿರುವ ಡಿಸಿ ಸಂಜಯ್ ಕುಮಾರ್ ಖಾತ್ರಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಪ್ಲೇಟ್ಲೆಟ್ಗಳನ್ನೂ ಸಹ ಪರೀಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಸಾಮಾಜಿಕ ಬಹಿಷ್ಕಾರ ಹಾಕಿದ ಆರೋಪ: ರಾಜಸ್ಥಾನದಲ್ಲಿ ದಲಿತ ಕುಟುಂಬಗಳಿಗೆ ಕಿರುಕುಳ