ಹೈದ್ರಾಬಾದ್(ತೆಲಂಗಾಣ): ಸಾರ್ವಜನಿಕರ ಉಪಯೋಗಕ್ಕಾಗಿ ರಸ್ತೆ ಬದಿ ಇಟ್ಟಿದ್ದ ಮೊಬೈಲ್ ಶೌಚಾಲಯವನ್ನೇ ಕಿರಾತಕರ ತಂಡ ಕದ್ದು ಅದನ್ನು ಮಾರಾಟ ಮಾಡಿರುವ ಘಟನೆ ತೆಲಂಗಾಣದ ಸಿಕಂದ್ರಾಬಾದ್ನ ಮಲ್ಕಜ್ಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಪ್ರಕರಣ ಸಂಬಂಧ ಒಬ್ಬ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದು, ಶೌಚಾಲಯ ಮಾರಾಟ ಮಾಡಿದ್ದರಿಂದ ಬಂದ 45 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಇಲ್ಲಿನ ಸಫೀಲ್ಗೂಡ ಚೌರಸ್ತಾ ಸಮೀಪ ಕಬ್ಬಿಣದಿಂದ ಕೂಡಿದ್ದ ಸ್ವಚ್ಛ ಶೌಚಾಲಯವನ್ನು ಕಟ್ಟಿಸಲಾಗಿತ್ತು.
ಆದರೆ, ಮಾರ್ಚ್ 16ರಿಂದ ಅದು ಕಾಣೆಯಾಗಿದೆ. ಇದನ್ನು ಗಮನಿಸಿದ ಓರ್ವ ಪೌರ ಕಾರ್ಮಿಕ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆಗ ಅಧಿಕಾರಿಗಳು, ಪೊಲೀಸರಿಗೆ ದೂರು ನೀಡಿದ್ದರು. ಅಂತೆಯೇ ಪೊಲೀಸರು, ಶೌಚಾಲಯವಿದ್ದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದರು.
ಈ ವೇಳೆ ಎಂ.ಜೋಗಯ್ಯ ಎಂಬ ಆರೋಪಿಯನ್ನು ಪತ್ತೆ ಹೆಚ್ಚಿದ್ದು, ವಿಚಾರಣೆ ವೇಳೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ, ಕಳ್ಳತನಕ್ಕೆ ನೆರವಾದ ಅರುಣ್ ಕುಮಾರ್ ಮತ್ತು ಭಿಕ್ಷಾಪತಿ ಎಂಬ ಮತ್ತಿಬ್ಬರ ಹೆಸರನ್ನೂ ಬಾಯಿಬಿಟ್ಟಿದ್ದಾನೆ. ಅಲ್ಲದೇ, ಕದ್ದ ಶೌಚಾಲಯವನ್ನು ಹಣಕ್ಕೆ ಮಾರಾಟ ಮಾಡಿರುವುದನ್ನೂ ಬಹಿರಂಗಪಡಿಸಿದ್ದಾನೆ.
ಮತ್ತೋರ್ವ ಆರೋಪಿ ಅರುಣ್ ಕುಮಾರ್ ಗ್ರೇಟರ್ ಹೈದ್ರಾಬಾದ್ ಮಹಾನಗರ ಪಾಲಿಕೆಯ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನೋರ್ವ ಆರೋಪಿ ಭಿಕ್ಷಾಪತಿ ಎಂಬುವವ ಜೈನ್ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಸೂಪರ್ವೈಸರ್ ಆಗಿದ್ದಾನೆ. ಸದ್ಯ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಲಸ ಕೊಟ್ಟ ಮಾಲೀಕನ ಅಂಗಡಿಯಲ್ಲಿ ಚಿನ್ನಾಭರಣ ಕಳ್ಳತನ: ಇಬ್ಬರು ಆರೋಪಿಗಳು ಅಂದರ್