ಹೈದರಾಬಾದ್ (ತೆಲಂಗಾಣ): ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು, ಆರು ಮಹಡಿಯಿಂದ ಕೆಳಗೆ ಬಿದ್ದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹೈದರಾಬಾದ್ನ ಕೆಪಿಎಚ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಘಟನೆ ನಡೆಯಿತು.
ಪೊಲೀಸರು, ಕೂಲಿಕಾರ್ಮಿಕರು ಮತ್ತು ಸ್ಥಳೀಯರು ತಿಳಿಸಿರುವಂತೆ, ಕೆಪಿಎಚ್ಬಿ ಅಡ್ಡಗುಟ್ಟಾದಲ್ಲಿ ದಾಸರಿ ಸಂತೋಷ್ ಅವರು ದಾಸರಿ ಶ್ರೀರಾಮ್ ಹೆಸರಿನಲ್ಲಿ 5 ಅಂತಸ್ತಿನ ಕಟ್ಟಡ ನಿರ್ಮಿಸಲು ಅನುಮತಿ ಪಡೆದುಕೊಂಡಿದ್ದಾರೆ. ಆದರೆ ಅಕ್ರಮವಾಗಿ ಆರನೇ ಮಹಡಿ ನಿರ್ಮಿಸಲಾಗುತ್ತಿದೆ. ಬಿಲ್ಡರ್ ಪಿ.ಶ್ರೀನಿವಾಸ್ ನಾಯ್ಡು ಈ ಕಟ್ಟಡದ ನಿರ್ಮಾತೃ.
ಎರಡು ತಿಂಗಳ ಹಿಂದೆ ಒಡಿಶಾ ರಾಜ್ಯದ ಮಲ್ಕನಗಿರಿ ಜಿಲ್ಲೆಯ ಮುದಿಲಿಪದ ತಾಲೂಕಿನ ಬಡಪದ ಗ್ರಾಮದಿಂದ ಬಂದಿದ್ದ ಆರು ಕಾರ್ಮಿಕರು ಇಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಗುರುವಾರ ಬೆಳಗ್ಗೆ 6:30ಕ್ಕೆ 10 ದಿನಗಳ ಹಿಂದೆ ಎತ್ತರಕ್ಕೆ ನಿರ್ಮಿಸಿದ್ದ ಸಾರಾದ ಮೇಲೆ (ಕಟ್ಟಿಗೆಗಳಿಂದ ಮಾಡಿದ ಆಸರೆ) ನಿಂತಿದ್ದ ಸೆಂಟ್ರಿಂಗ್ ಉಪಕರಣಗಳನ್ನು ಬಿಡಿಸಿ ಕೆಳಗೆ ತರಲಾಗುತ್ತಿತ್ತು. ಬೆಳಗ್ಗೆ 8:30ಕ್ಕೆ ಆರನೇ ಮಹಡಿಯಲ್ಲಿ ನಿರ್ಮಿಸಿದ್ದ ಗೋಡೆ ದಿಢೀರ್ ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳು, ಸಾರಾಗೆ ಕಟ್ಟಿದ ಕಟ್ಟಿಗೆಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿವೆ. ಇದರೊಂದಿಗೆ ಇನ್ನಿಬ್ಬರು ಕಾರ್ಮಿಕರಾದ ಸಾಮಾ ಪಟ್ನಾಯಕ್ (23) ಮತ್ತು ಸನ್ಯಾ ಚಲನ್ (19) ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳಾದ ಬಲರಾಮ್ ಪಟ್ನಾಯಕ್ ಮತ್ತು ಸನ್ಯಾ ಪಟ್ನಾಯಕ್ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸನ್ಯಾ ಪಟ್ನಾಯಕ್ (18) ಅವರ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಬಲರಾಮ್ ಪಟ್ನಾಯಕ್ ಗಂಭೀರವಾಗಿದ್ದು, ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲನಗರ ಡಿಸಿಪಿ ಶ್ರೀನಿವಾಸರಾವ್ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಣೆ ನಡೆಸಿದರು. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕುಕಟ್ಪಲ್ಲಿ ನಗರ ಯೋಜನಾ ವಿಭಾಗದ ಎಸಿಪಿ ಸುಶ್ಮಿತಾ ಘಟನೆ ಬಗ್ಗೆ ವಿವರಣೆ ಕೇಳಿ ಶೋಕಾಸ್ ನೊಟೀಸ್ ಜಾರಿ ಮಾಡಿದ್ದಾರೆ. ಅಧಿಕಾರಿಗಳು ಮಧ್ಯಾಹ್ನದ ನಂತರ ಆರನೇ ಮಹಡಿಯ ಸ್ಲ್ಯಾಬ್ ಮತ್ತು ಟೆರೇಸ್ಗಳನ್ನು ಕೆಡವಲು ಕಾರ್ಯ ಪ್ರಾರಂಭಿಸಿದರು.
ಕಳಪೆ ಗೋಡೆ ನಿರ್ಮಾಣ ಹಾಗೂ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಕಟ್ಟಡ ಮಾಲೀಕರು ಹಾಗೂ ಬಿಲ್ಡರ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಲೋಪದೋಷಗಳ ಬಗ್ಗೆ ತನಿಖೆ ನಡೆಸಿ ಬಿಲ್ಡರ್ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೆರಿಲಿಂಗಂಪಲ್ಲಿ ಶಾಸಕ ಅರೆಕಪುಡಿ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ತಾಯಿಯೊಂದಿಗೆ ಮಲಗಿದ್ದ 8 ವರ್ಷದ ಬಾಲಕಿಯ ಅಪಹರಿಸಿ ಅತ್ಯಾಚಾರ: ಆರೋಪಿ ಬಂಧನ