ತಿರುಚಿರಾಪಲ್ಲಿ (ತಮಿಳುನಾಡು): ಟೋಕಿಯೋ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡು ಮನೆಗೆ ಮರಳಿದ್ದ ಓಟಗಾರ್ತಿ ಧನಲಕ್ಷ್ಮಿ ಶೇಖರ್ಗೆ ಆಘಾತಕಾರಿ ವಿಚಾರವೊಂದು ಕಾದು ಕುಳಿತಿತ್ತು. ತಮ್ಮೂರ ಜನರ ಭವ್ಯ ಸ್ವಾಗತ ಸ್ವೀಕರಿಸಿ ಬಂದಾಕೆ ಮನೆಯಲ್ಲಿ ಅಕ್ಕ ಮೃತಪಟ್ಟಿರುವ ಸುದ್ದಿ ಕೇಳಿ ಕುಸಿದು ಬಿದ್ದಿದ್ದಾರೆ.
ತಮಿಳುನಾಡಿನ ತಿರುಚಿರಾಪಲ್ಲಿ ಜಿಲ್ಲೆಯ ಗುಂಟೂರು ಮೂಲದ ಧನಲಕ್ಷ್ಮಿ ಅನೇಕ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಗೆದ್ದಿದ್ದರು. ಈ ಬಾರಿಯ ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದರು. ಆದರೆ ಇವರು ಟೋಕಿಯೋದಲ್ಲಿರುವ ವೇಳೆ ಇವರ ಅಕ್ಕ ಮೃತಪಟ್ಟಿದ್ದಾರೆ. ಈ ವಿಚಾರ ಹೇಳಿದರೆ ತಮ್ಮ ಮಗಳ ಸ್ಪರ್ಧೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಇವರ ತಾಯಿ ವಿಷಯ ಮುಚ್ಚಿಟ್ಟಿದ್ದರು.
![Olympian broke down when she learns about the death of her sister](https://etvbharatimages.akamaized.net/etvbharat/prod-images/tn-tri-03-athletic-cry-script-vis-photo-tn10045_08082021225128_0808f_1628443288_110_0908newsroom_1628483613_29.jpg)
ಇದನ್ನೂ ಓದಿ: "ಈ ಭಾವನೆ ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ.." ‘ಚಿನ್ನದ ಹುಡುಗ’ನ ಮುತ್ತಿನಂಥ ಮಾತು
ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಧನಲಕ್ಷ್ಮಿಗೆ ಇಬ್ಬರು ಸಹೋದರಿಯರಿದ್ದರು. ಆದರೆ ಎರಡು ವರ್ಷದ ಹಿಂದೆ ಒಬ್ಬ ಸಹೋದರಿ ಸಾವನ್ನಪ್ಪಿದ್ದರು. ಇದೀಗ ಕುಟುಂಬದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದು, ಆಘಾತದ ಮೇಲೆ ಆಘಾತವನ್ನ ಕ್ರೀಡಾಪಟು ಧನಲಕ್ಷ್ಮಿ ಅನುಭವಿಸುತ್ತಿದ್ದಾರೆ.