ಕೃಷ್ಣಗಿರಿ(ತಮಿಳುನಾಡು): ನಮಗೆ ಪರಿಚಿತವಲ್ಲದ ಸ್ಥಳಗಳಿಗೆ ತೆರಳುವಾಗ ಸಾಮಾನ್ಯವಾಗಿ ನಾವು ಆನ್ಲೈನ್ ಮ್ಯಾಪ್ (Google Maps) ಉಪಯೋಗಿಸುತ್ತೇವೆ. ಆದರೆ, ಹೀಗೆ ಗೂಗಲ್ ಮ್ಯಾಪ್ ನಂಬಿ ಕಾರಿನಲ್ಲಿ ಹೋದ ಕುಟುಂಬವೊಂದು ತುಂಬಿ ಹರಿಯುತ್ತಿರುವ ನದಿಗೆ / ಪ್ರವಾಹ ಪೀಡಿತ ಪ್ರದೇಶದಲ್ಲಿ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಸೋಮವಾರ ರಾತ್ರಿ ತಮಿಳುನಾಡಿನ ಹೊಸೂರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ ಭಾರೀ ವಾಹನಗಳ ಸಹಾಯದಿಂದ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಜೊತೆಗೆ ಕಾರನ್ನು ಸಹ ಹೊರತೆಗೆದಿದ್ದಾರೆ.
ಕೃಷ್ಣಗಿರಿ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಹಲವೆಡೆ ರಸ್ತೆ ಜಲಾವೃತಗೊಂಡಿದೆ. ಅದರಲ್ಲೂ ಹೊಸೂರು ಬಳಿಯ ಬಾಗೇಪಲ್ಲಿ ಭೂಸೇತುವೆಯಲ್ಲಿ 5 ಅಡಿಗೂ ಹೆಚ್ಚು ನೀರು ನಿಂತಿದೆ. ಕತ್ತಲಲ್ಲಿ ರಸ್ತೆ ಸರಿಯಾಗಿ ಕಾಣಿಸಿಲ್ಲ. ಎಲ್ಲಿ ಗುಂಡಿಗಳಿವೆ ಎಂಬುದು ತಿಳಿಯಲಾಗಲಿಲ್ಲ. ಆನ್ಲೈನ್ ಮ್ಯಾಪ್ ನಂಬಿ ಮುಂದೆ ಸಾಗಿದ ಕಾರು ನೀರಿನಲ್ಲಿ ಸಿಲುಕಿದೆ. ಬಳಿಕ ರಕ್ಷಣಾ ತಂಡ ಆಗಮಿಸಿ ಕಾರು ಸಹಿತ 4 ಮಂದಿಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ಕೇರಳ : ಆಂಬ್ಯುಲೆನ್ಸ್ ಬಾಗಿಲು ತೆರೆಯಲು ತಡ.. ಹಾರಿಹೋಯ್ತು ಗಾಯಾಳು ಪ್ರಾಣ
ಕರ್ನಾಟಕದ ಸರ್ಜಾಪುರ ಮೂಲದ ರಾಜೇಶ್ ಕುಟುಂಬ ಸಮೇತ ಹೊಸೂರಿಗೆ ಬಂದು ನಿನ್ನೆ ರಾತ್ರಿ ಸ್ವಗ್ರಾಮಕ್ಕೆ ಮರಳುವ ವೇಳೆ ಈ ಘಟನೆ ನಡೆದಿದೆ. ಸುದ್ದಿಗಾರರೊಂದಿಗೆ ರಾಜೇಶ್ ಮಾತನಾಡಿ, ಆನ್ಲೈನ್ ಮ್ಯಾಪ್ ನೋಡಿಕೊಂಡು ಕಾರನ್ನು ಓಡಿಸಿದೆವು. ಪ್ರವಾಹ ಪರಿಸ್ಥಿತಿಯನ್ನು ಅರಿತು ಹಿಂತಿರುಗಲು ಪ್ರಯತ್ನಿಸಿದೆವು. ಆದರೆ ಕಾರು ನೀರಿನಲ್ಲಿ ಸಿಲುಕಿತು. ಹಾಗಾಗಿ ಆದ್ದರಿಂದ ಅವರು ದೂರವಾಣಿ ಮೂಲಕ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಕರೆ ಮಾಡಿದೆವು. ಕೂಡಲೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ನಮ್ಮನ್ನು ರಕ್ಷಿಸಿದ್ದಾರೆಂದು ತಿಳಿಸಿದ್ದಾರೆ.