ಘಾಜಿಯಾಬಾದ್: ರಿಕ್ಷಾ ಎಳೆಯುವ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಆತನ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ಹಾಗೂ ನೆರೆಹೊರೆಯ ಜನರು ಹಿಂದೇಟು ಹಾಕಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ.
ಆಟೋ ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಕೋವಿಡ್ ಹರಡುವ ಭೀತಿಯಿಂದಾಗಿ ಕುಟುಂಬಸ್ಥರು ಹಾಗೂ ನೆರೆಹೊರೆಯ ಜನರು ಅಂತಿಮ ವಿಧಿ-ವಿಧಾನ ನಡೆಸಲು ಹಿಂದೇಟು ಹಾಕಿದ್ದಾರೆ. ಇದರ ಮಾಹಿತಿ ಸಿಗುತ್ತಿದ್ದಂತೆ ಎನ್ಜಿಒವೊಂದರ ಮುಖ್ಯಸ್ಥೆಯಾಗಿರುವ ಮಮತಾ ಸಿಂಗ್ ಮುಂದೆ ನಿಂತು ಎಲ್ಲ ಕಾರ್ಯ ನಡೆಸಿದ್ದಾರೆ.
ಆನಂದ್ ಸೇವಾ ಸಮಿತಿ ಮುಖ್ಯಸ್ಥೆ ಆಗಿರುವ ಇವರು ಖುದ್ದಾಗಿ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ನನಗೆ ಫೋನ್ ಮೂಲಕ ಇದರ ಬಗ್ಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಸ್ಥಳಕ್ಕೆ ಹೋಗಿ ಅಂತ್ಯಕ್ರಿಯೆ ನಡೆಸಿರುವೆ ಎಂದಿದ್ದು, ಈ ವೇಳೆ ಕುಟುಂಬದ ಒಂದಿಬ್ಬರು ನನ್ನೊಂದಿಗೆ ಇದ್ದರು ಎಂದಿದ್ದಾರೆ.
ದೇಶದಲ್ಲಿ ಕೊರೊನಾ ಭಯದಿಂದ ಜನರು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದು, ಸುರಕ್ಷತಾ ಕ್ರಮ ಕೈಗೊಂಡರೆ ಯಾವುದೇ ರೀತಿಯಲ್ಲೂ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.