ನವದೆಹಲಿ: ಹೊಟ್ಟೆಯಲ್ಲೇ ಮಗು ಸತ್ತು ಹೋಗಿದ್ದು, ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಲಾಕ್ಡೌನ್ ನಡುವೆಯೂ ದೆಹಲಿಯ ಝಾಕಿರ್ ನಗರ ಪ್ರದೇಶದಲ್ಲಿ ಪೊಲೀಸರು ರಕ್ಷಿಸಿದ್ದಾರೆ.
ಬದರ್ಪುರ್ದ ಭಟ್ ಕಾಲೋನಿ ನಿವಾಸಿ ನಿರ್ಮಲಾ ಎಂಬವರು ಏಳು ತಿಂಗಳ ಗರ್ಭಿಣಿಯಾಗಿದ್ದು, ಕೆಲ ದಿನಗಳಿಂದ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಬದರ್ಪುರ್ನಲ್ಲಿ ವೈದ್ಯರೊಬ್ಬರನ್ನು ಭೇಟಿಯಾದಾಗ ಅವರು ಹೊಟ್ಟೆ ಒಳಗೇ ಸತ್ತಿರುವುದಾಗಿ ಹೇಳಿದ್ದು, ಬೇರೆಡೆ ಆಪರೇಷನ್ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ.
ಆದರೆ, ಲಾಕ್ಡೌನ್ನಿಂದಾಗಿ ಯಾವೊಂದು ಆಸ್ಪತ್ರೆಯು ಸಿಗದಿದ್ದಾಗ, ಎರಡು ವರ್ಷದ ಹಿಂದೆ ಭೇಟಿ ನೀಡಿದ್ದ ನಹಿದಾ ಫಾತೀಮಾ ಎಂಬ ವೈದ್ಯರೊಬ್ಬರು ನೆನಪಿಗೆ ಬಂದಿದ್ದಾರೆ. ಅವರ ಕ್ಲಿನಿಕ್ ಬದರ್ಪುರ್ನಿಂದ 12 ಕಿ.ಮೀ ದೂರದಲ್ಲಿರುವ ಝಾಕಿರ್ ನಗರದಲ್ಲಿದ್ದು, ಪತಿಯೊಂದಿಗೆ ಅಲ್ಲಿಗೆ ತೆರಳುವ ಮಾರ್ಗಮಧ್ಯೆ ನಿರ್ಮಲಾ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ದಂಪತಿಯನ್ನು ಗಮನಿಸಿದ ಜಾಮಿಯಾ ಪೊಲೀಸ್ ಠಾಣೆಯ ಎಎಸ್ಐ ಸುಭಾಷ್ ಮತ್ತು ಸಿ.ಟಿ.ರಮಣ್, ಇವರನ್ನು ವಿಚಾರಿಸಿ, ಡಾ.ಫಾತೀಮಾ ಅವರನ್ನು ಸಂಪರ್ಕಿಸಿ ಕ್ಲಿನಿಕ್ ತೆರೆದು, ಆಪರೇಷನ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಬಳಿಕ ಅವರ ಖಾಸಗಿ ವಾಹನದಲ್ಲಿ ಕ್ಲಿನಿಕ್ಗೆ ಕರೆದುಕೊಂಡು ಹೋಗಿರುವುದಾಗಿ ಆಗ್ನೇಯ ದೆಹಲಿ ಡಿಸಿಪಿ ಆರ್.ಪಿ.ಮೀನಾ ಮಾಹಿತಿ ನೀಡಿದ್ದಾರೆ.
ನಿರ್ಮಲಾರನ್ನು ಕ್ಲಿನಿಕ್ಗೆ ಕರೆ ತಂದಾಗ ಆಕೆಯ ಪರಿಸ್ಥಿತಿ ಗಂಭೀರವಾಗಿತ್ತು. ಜಾಮಿಯಾ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ. ಇದೀಗ ನಿರ್ಮಲಾ ಆರೋಗ್ಯವಾಗಿದ್ದು, ಡಿಸ್ಚಾರ್ಚ್ ಆಗಿರುವುದಾಗಿ ಡಾ.ಫಾತೀಮಾ ತಿಳಿಸಿದ್ದಾರೆ.
ಇದು ನಮ್ಮ ಮೊದಲ ಮಗುವಾಗಿತ್ತು. ಆದರೆ ಹೊಟ್ಟೆಯೊಳಗೆ ಮಗು ಮೃತಪಟ್ಟು ಒದ್ದಾಡುತ್ತಿದ್ದ ನನ್ನ ಪತ್ನಿಯನ್ನು ಕಾಪಾಡಿದ ಪೊಲೀಸರು ಮತ್ತು ವೈದ್ಯರಿಗೆ ಧನ್ಯವಾದಗಳು ಎಂದು ನಿರ್ಮಲಾ ಪತಿ ನರೇಶ್ ಹೇಳಿದ್ದಾರೆ.