ನವದೆಹಲಿ: ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಆಮ್ಲಜನಕದ ಅಭಾವ ಎದುರಿಸುತ್ತಿವೆ. ಇದೀಗ ಆಕ್ಸಿಜನ್ ಕೊರತೆಯಿಂದಾಗಿ ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ 8 ರೋಗಿಗಳು ಕೊನೆಯುಸಿರೆಳೆದಿದ್ದಾರೆ.
ಮತಪಟ್ಟವರಲ್ಲಿ ಓರ್ವ ವೈದ್ಯ ಸೇರಿದ್ದಾರೆ. ಇದರಲ್ಲಿ 6 ಮಂದಿ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿದ್ದರೆ ಇನ್ನಿಬ್ಬರು ಸಾಮಾನ್ಯ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಘಟನೆ ನಡೆದ ಸುಮಾರು 2 ಗಂಟೆಯ ನಂತರ ಆಕ್ಸಿಜನ್ ತುಂಬಿದ್ದ ಟ್ಯಾಂಕರ್ ಆಸ್ಪತ್ರೆ ತಲುಪಿದೆ. ಕಳೆದ ಕೆಲ ದಿನಗಳಿಂದ ದೆಹಲಿಯ ಪ್ರಮುಖ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಅನೇಕರು ಅಸುನೀಗಿದ್ದಾರೆ.
ಇತ್ತ ಹಾಸಿಗೆ ಲಭ್ಯತೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಕೇಜ್ರಿವಾಲ್ ಇಲ್ಲಿನ ರಾಧಾ ಸೋಮಿ ಕೇಂದ್ರದಲ್ಲಿ 5,000 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಆದರೆ, ಅದರಲ್ಲಿ 150 ಹಾಸಿಗೆಗಳು ಮಾತ್ರ ಆಕ್ಸಿಜನ್ ಸೌಲಭ್ಯ ಹೊಂದಿದೆ.
ಕಾಮನ್ವೆಲ್ತ್ ಕ್ರೀಡಾಕೂಟ ಮೈದಾನ ಮತ್ತು ಯಮುನಾ ಕ್ರೀಡಾ ಸಂಕೀರ್ಣದಲ್ಲಿ 1,300 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಬುರಾರಿಯಲ್ಲಿ 2,500 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಇಂದು ನಾವು ಆಮ್ಲಜನಕವನ್ನು ಪಡೆದರೆ, ದೆಹಲಿಯಲ್ಲಿ 24 ಗಂಟೆಯೊಳಗೆ 9,000 ಆಮ್ಲಜನಕಯುಕ್ತ ಹಾಸಿಗೆಗಳು ಸಿದ್ಧವಾಗಲಿದೆ ಎಂದಿದ್ದಾರೆ.