TRAI New Rules: ಟೆಲಿಕಾಂ ನಿಯಂತ್ರಕ ಟ್ರಾಯ್ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಹಕರಿಗೆ ಪದೇ ಪದೇ ಕಿರುಕುಳ ನೀಡುವ ಅನಗತ್ಯ ಅಥವಾ ಸ್ಪ್ಯಾಮ್ ಕರೆಗಳನ್ನು ನಿಲ್ಲಿಸಲು ಹೊಸ ನಿಯಮಗಳನ್ನು ಹೊರಡಿಸಿದೆ.
ಇದರಲ್ಲಿ ಜಿಯೋ, ವೊಡಾಫೋನ್-ಐಡಿಯಾ, ಏರ್ಟೆಲ್ ಮತ್ತು ಬಿಎಸ್ಎನ್ಎಲ್ನಂತಹ ಟೆಲಿಕಾಂ ಕಂಪನಿಗಳ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದೆ. ಈ ಕಂಪೆನಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಪ್ರತಿ ತಪ್ಪಿಗೆ 10 ಲಕ್ಷ ರೂ. ದಂಡ ತೆರಬೇಕಾಗುತ್ತದೆ. ಇಂತಹ ಸ್ಪ್ಯಾಮ್ ಮತ್ತು ಅನಗತ್ಯ ಕರೆಗಳನ್ನು ನಿಲ್ಲಿಸಲು ಟೆಲಿಕಾಂ ಕಂಪೆನಿಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ.
ಹೌದು, ಟ್ರಾಯ್ ನಿಯಮಗಳನ್ನು ಟೆಲಿಕಾಂ ಕಂಪೆನಿಗಳು ಉಲ್ಲಂಘಿಸಿದ್ರೆ 2 ರಿಂದ 10 ಲಕ್ಷದವರೆಗೆ ದಂಡ ವಿಧಿಸಬಹುದು. ಭಾರತದಲ್ಲಿ ಕೋಟಿಗಟ್ಟಲೆ ಮೊಬೈಲ್ ಬಳಕೆದಾರರಿದ್ದಾರೆ. ಅವರಲ್ಲಿ ಹೆಚ್ಚಿನವರು ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳಿಂದ ತೊಂದರೆಗೀಡಾಗಿದ್ದಾರೆ.
ಹೊಸ ನಿಯಮವೇನು?:ಹೈ ಕಾಲ್ ವ್ಯಾಲ್ಯೂಮ್, ಶಾರ್ಟ್ ಕಾಲ್ ಡ್ಯುರೇಶನ್ ಮತ್ತು ಲೋ-ಇನ್ಕಮಿಂಗ್ ಟು ಔಟ್ಗೋಯಿಂಗ್ ಕಾಲ್ ರೇಶ್ಯೋ ಆಧರಿಸಿ ಕಾಲ್ ಮತ್ತು ಎಸ್ಎಮ್ಎಸ್ ಮಾದರಿಗಳನ್ನು ವಿಶ್ಲೇಷಿಸಲು ಟ್ರಾಯ್ ಎಲ್ಲಾ ಟೆಲಿಕಾಂ ಕಂಪೆನಿಗಳಿಗೆ ಆದೇಶಿಸಿದೆ. ಇದರ ಆಧಾರದ ಮೇಲೆ ಸ್ಪ್ಯಾಮ್ ಕರೆಗಳ ಪಟ್ಟಿ ಮತ್ತು ಸಂಖ್ಯೆಯನ್ನು ನೀಡುವಂತೆ ಕೇಳಲಾಗಿದೆ. ಅಷ್ಟೇ ಅಲ್ಲ, ರಿಯಲ್ ಟೈಂನಲ್ಲಿ ಸಂಭಾವ್ಯ ಸ್ಪ್ಯಾಮರ್ಗಳನ್ನು ಗುರುತಿಸಲು ಇದು ಸುಲಭವಾಗುತ್ತದೆ.
ಟ್ರಾಯ್ ಟೆಲಿಕಾಂ ಕಂಪೆನಿಗಳಿಗೆ ಹೊಸ ನಿಯಮಗಳ ಪ್ರಕಾರ, ಯಾವುದೇ ಸಂಖ್ಯೆಗೆ ಸ್ವೀಕರಿಸಿದ ಸ್ಪ್ಯಾಮ್ ಕರೆಗಳ ಸಂಪೂರ್ಣ ಸಂಖ್ಯೆಯನ್ನು ಬಹಿರಂಗಪಡಿಸಬೇಕು ಎಂದು ಸೂಚನೆ ನೀಡಿದೆ.
‘ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಷನ್ ಗ್ರಾಹಕರ ಆದ್ಯತೆಯ ನಿಯಮ'ಗಳಿಗೆ ತಿದ್ದುಪಡಿ ಮಾಡುವ ಮೂಲಕ ಟೆಲಿಕಾಂ ಕಂಪೆನಿಗಳ ಮೇಲೆ ದಂಡ ವಿಧಿಸುವ ನಿಬಂಧನೆಗಳನ್ನು ಮಾಡಲಾಗಿದೆ. ಈ ಹೊಸ ನಿಯಮದ ನಿಬಂಧನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಟೆಲಿಕಾಂ ಕಂಪೆನಿಗಳು ವಿಫಲವಾದರೆ ಈ ದಂಡವನ್ನು ಅವುಗಳ ಮೇಲೆ ವಿಧಿಸಲಾಗುತ್ತದೆ. ಹೊಸದಾಗಿ ನಿಗದಿಪಡಿಸಿದ ಮಾನದಂಡಗಳ ಪ್ರಕಾರ, ತಪ್ಪು ಮಾಹಿತಿ ನೀಡಿದ ಟೆಲಿಕಾಂ ಕಂಪೆನಿಗಳಿಗೆ ಮೊದಲ ಉಲ್ಲಂಘನೆಗೆ ರೂ 2 ಲಕ್ಷ, ಎರಡನೇ ಉಲ್ಲಂಘನೆಗೆ ರೂ 5 ಲಕ್ಷ ಮತ್ತು ನಂತರದ ಪ್ರತಿ ಉಲ್ಲಂಘನೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.
ಟೆಲಿಮಾರ್ಕೆಟಿಂಗ್ಗೆ 10 ಅಂಕಿಯ ನಂಬರ್ ಬಳಸಕೂಡದು: ಪಾರದರ್ಶಕತೆಯನ್ನು ಹೆಚ್ಚಿಸಲು ಟ್ರಾಯ್ 10 ಅಂಕಿಯ ನಂಬರ್ಗಳನ್ನು ಕಮರ್ಶಿಯಲ್ ಕಮ್ಯುನಿಕೇಶನ್ ನಿಷೇಧಿಸಿದೆ. ಅಂದರೆ ಈಗ 10 ಅಂಕಿ ನಂಬರ್ಗಳನ್ನು ಟೆಲಿಮಾರ್ಕೆಟಿಂಗ್ಗೆ ಬಳಸಲಾಗುವುದಿಲ್ಲ. ಬದಲಾಗಿ, '140' ಸೀರಿಸ್ ಪ್ರಚಾರದ ಕರೆಗಳಿಗಾಗಿ ಮುಂದುವರಿಸಲಾಗುತ್ತದೆ. ಆದರೆ '1600' ಸೀರಿಸ್ ವಹಿವಾಟು ಮತ್ತು ಸೇವಾ ಕರೆಗಳಿಗಾಗಿ ಬಳಸಲಾಗುತ್ತದೆ. ಇದಲ್ಲದೆ ಸ್ಪ್ಯಾಮ್ ಕರೆಗಳ ಬಗ್ಗೆ ದೂರುಗಳನ್ನು ಸಲ್ಲಿಸಲು ಟ್ರಾಯ್ ಬಳಕೆದಾರರಿಗೆ ಸುಲಭವಾಗಿದೆ. ಈಗ ಅವರು ಸಂವಹನ ಆದ್ಯತೆಗಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.
ನಮ್ಮ ದೇಶದಲ್ಲಿ ಶೇ 90ರಷ್ಟು ಜನರು ಮೊಬೈಲ್ ಫೋನ್ ಬಳಸುತ್ತಾರೆ. ಆದರೆ ಇವುಗಳಲ್ಲಿ ಜನಸಂಖ್ಯೆಯ ಹೆಚ್ಚಿನ ಭಾಗವು ಇನ್ನೂ ತಾಂತ್ರಿಕವಾಗಿ ಸಾಕ್ಷರತೆಯನ್ನು ಹೊಂದಿಲ್ಲ. ಇದಕ್ಕೆ ಪ್ರಮುಖ ಕಾರಣ ಡಿಜಿಟಲ್ ವಿಭಜನೆ. ಇಂತಹ ಪರಿಸ್ಥಿತಿಯಲ್ಲಿ ಅನಗತ್ಯ ಮತ್ತು ಸ್ಪ್ಯಾಮ್ ಕರೆಗಳ ಮೂಲಕ ಜನರನ್ನು ವಂಚನೆಗೆ ಬಲಿಪಶು ಮಾಡಲಾಗುತ್ತಿದೆ. ಸರ್ಕಾರವೂ ಈ ಬಗ್ಗೆ ಕಾಳಜಿ ವಹಿಸಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಟ್ರಾಯ್ನ ಈ ನಿರ್ಧಾರ ಮುಂದಿನ ದಿನಗಳಲ್ಲಿ ಜನತೆಗೆ ನೆಮ್ಮದಿ ನೀಡಲಿದೆ.
ಇದನ್ನೂ ಓದಿ:5ಜಿ ಆರಂಭಿಸಲು ಕಾತುರದಿಂದ ಕಾಯ್ತಿದೆ ವೊಡಾಫೋನ್-ಐಡಿಯಾ: ಮೊದಲು ಮುಂಬೈ, ಆಮೇಲೆ ಬೆಂಗಳೂರು