ಕರ್ನಾಟಕ

karnataka

ETV Bharat / state

ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಬಣ್ಣದ ಬಳೆಗಳ ಭರ್ಜರಿ ವ್ಯಾಪಾರ; ಹೆಂಗೆಳೆಯರ ಸಂಭ್ರಮ - SAVADATTI YALLAMMA FAIR

ಸವದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ ಬಳೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಈ ಬಗ್ಗೆ 'ಈಟಿವಿ ಭಾರತ'ದ ಪ್ರತಿನಿಧಿ ಸಿದ್ದನಗೌಡ ಪಾಟೀಲ್​ ಅವರ ವಿಶೇಷ ವರದಿ ಇಲ್ಲಿದೆ.

bangle business at Savadatti Yallamma fair
ಸವದತ್ತಿ ಯಲ್ಲಮ್ಮನ ಜಾತ್ರೆ (ETV Bharat)

By ETV Bharat Karnataka Team

Published : Feb 13, 2025, 10:28 PM IST

Updated : Feb 13, 2025, 10:37 PM IST

ಬೆಳಗಾವಿ: ಶ್ರೀಕ್ಷೇತ್ರ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಹನ್ನೆರೆಡು ತಿಂಗಳೂ ಜಾತ್ರಾ ವೈಭವದ ಕಳೆ. ಅದರಲ್ಲಿಯೂ ಬನದ ಹುಣ್ಣಿಮೆಯಿಂದ ಭಾರತ ಹುಣ್ಣಿಮೆವರೆಗಂತೂ ಭಕ್ತಸಾಗರ. ಆದಿಶಕ್ತಿ ಯಲ್ಲಮ್ಮನ ಈ ಜಾತ್ರಾ ವೈಭವಕ್ಕೆ ಭಂಡಾರದಷ್ಟೇ ಕಳೆಕಟ್ಟುವುದು ಬಳೆಗಳು. ಭಾರತ ಹುಣ್ಣಿಮೆಗೆ ಮುತ್ತೈದೆ ಹುಣ್ಣಿಮೆ ಅಂತಲೂ ಕರೆಯುತ್ತಾರೆ. ಹೇಗಿದೆ ಬಳೆ ವ್ಯಾಪಾರ? ಏನಂತಾರೆ ವ್ಯಾಪಾರಸ್ಥರು ನೋಡೋಣ ಬನ್ನಿ.

ಯಲ್ಲಮ್ಮ ಗುಡ್ಡದ ಜಾತ್ರೆಯಲ್ಲಿ ಮುತ್ತೈದೆ ಭಾಗ್ಯದ ಸಂಕೇತವಾದ ಬಳೆಗಳ ಮಾರಾಟ ಭರ್ಜರಿಯಾಗಿಯೇ ನಡೆಯುವುದು ವಿಶೇಷ. ಗುಡ್ಡಕ್ಕೆ ಬರುವ ಪ್ರತಿಯೊಬ್ಬ ಹೆಣ್ಣುಮಕ್ಕಳೂ ಅಬಾಲ ವೃದ್ಧರಾಧಿಯಾಗಿ ಬಳೆ ಇಟ್ಟುಕೊಂಡು ಸಂಭ್ರಮಿಸುವ ಪರಿ ವರ್ಣಿಸಲಸಾಧ್ಯ. ಭಾರತ ಹುಣ್ಣಿಮೆ ಜಾತ್ರೆಗೆ ಆಗಮಿಸುವ ಮಹಿಳಾ ಭಕ್ತರು ದೇವಿ ದರ್ಶನ, ಪೂಜೆ, ನೈವೇದ್ಯ ಸಮರ್ಪಿಸಿದ ನಂತರ ಬಳೆ ಇಟ್ಟುಕೊಂಡು ಮನೆಗೆ ತೆರಳುವುದು ವಾಡಿಕೆ. ಇದು ಅನಾದಿ ಕಾಲದಿಂದಲೂ ಬಂದ ವಾಡಿಕೆ. ಹೀಗಾಗಿ, ಒಬ್ಬೊಬ್ಬ ಮಹಿಳೆ ತಮಗಿಷ್ಟದ ಬಳೆಗಳನ್ನು ಇಟ್ಟುಕೊಂಡು ಸಂಭ್ರಮಿಸುತ್ತಾರೆ.

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಬಳೆ ವ್ಯಾಪಾರ (ETV Bharat)

ಬಣ್ಣ ಬಣ್ಣದ ಬಳೆಗಳ ಸೊಬಗು:ಸವದತ್ತಿ ಯಲ್ಲಮ್ಮ ಜಾತ್ರಾ ವೈಭವವೇ ಹಾಗೆ. ಎಲ್ಲಿ ನೋಡಿದರೂ ಜನಜಾತ್ರೆ. ಜಾತ್ರೆಗೆ ಕಳೆಕಟ್ಟಿದ ಅಂಗಡಿಗಳಲ್ಲಿ ಕಣ್ಮನ ಸೆಳೆಯುವ ಅರಿಷಿನ-ಕುಂಕುಮದಂತೆ ಬಣ್ಣ ಬಣ್ಣದ ಬಳೆಗಳೂ ಸೊಬಗನ್ನು ನೋಡಲು ಎರಡು ಕಣ್ಣು ಸಾಲುವುದಿಲ್ಲ.
ಒಬ್ಬೊಬ್ಬ ಮಹಿಳೆಯರು ಎರಡೂ ಕೈಗಳಲ್ಲಿ ಡಜನ್‌ಗಟ್ಟಲೆ ಬಳೆ ಇಟ್ಟುಕೊಳ್ಳುತ್ತಾರೆ. ಒಬ್ಬೊಬ್ಬರು ಎರಡ್ಮೂರು ಡಜನ್ ಬಳೆ ಇಟ್ಟುಕೊಳ್ಳುವುದನ್ನು ಕಾಣಬಹುದು.

ಸವದತ್ತಿ ಯಲ್ಲಮ್ಮ (ETV Bharat)

ಭರ್ಜರಿ ವ್ಯಾಪಾರ:ಯಲ್ಲಮ್ಮ ಜಾತ್ರೆ ಹಿನ್ನೆಲೆಯಲ್ಲಿ ಸುಮಾರು ನೂರಕ್ಕೂ ಅಧಿಕ ಬಳೆಗಳ ಅಂಗಡಿಗಳಿದ್ದು, ಒಂದೊಂದು ಅಂಗಡಿಯಲ್ಲಿಯೂ ಹಗಲು ರಾತ್ರಿ ಎನ್ನದೇ ಜನಜಂಗುಳಿ ಕಂಡು ಬರುವುದು ವಿಶೇಷ. ಸರಿಸುಮಾರು 45ಕ್ಕೂ ಹೆಚ್ಚು ದಿನಗಳ ಕಾಲ ಸತತವಾಗಿ ನಡೆಯುವ ರೇಣುಕಾ ಯಲ್ಲಮ್ಮನ ಜಾತ್ರೆಯಲ್ಲಿ ಬಳೆಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ. ಪ್ರತಿ ದಿನಕ್ಕೆ ಒಂದೊಂದು ಅಂಗಡಿಯಲ್ಲಿ ಸುಮಾರು 10ರಿಂದ 20 ಸಾವಿರ ರೂ.ಗಳವರೆಗೆ ವ್ಯಾಪಾರ ವಹಿವಾಟು ನಡೆಯುತ್ತದೆ ಎಂದರೆ ಬಳೆಗಳ ಮಹತ್ವ ಹೇಗಿದೆ ಎಂಬುದು ಗೊತ್ತಾಗುತ್ತದೆ.

ಕೋಟಿ ರೂ.ಗಳ ವಹಿವಾಟು:ಜನವರಿಯ ಬನದ ಹುಣ್ಣೆಮೆಯಿಂದ ಫೆಬ್ರವರಿ ತಿಂಗಳ ಭಾರತ ಹುಣ್ಣಿಮೆಯವರೆಗೆ ಹಾಗೂ ದವದ ಹುಣ್ಣಿಮೆ ಸೇರಿದಂತೆ ನಿರಂತರವಾಗಿ ನಡೆಯುವ ರೇಣುಕಾ ಯಲ್ಲಮ್ಮಳ ಸನ್ನಿಧಿಗೆ ಬರುವ ಪ್ರತಿಯೊಬ್ಬ ಮಹಿಳೆಯರೂ ಬಳೆ ಇಟ್ಟುಕೊಳ್ಳುವುದರಿಂದ ಬಳೆಗಳ ಮಾರಾಟ ಭರ್ಜರಿಯಾಗಿ ನಡೆಯುತ್ತದೆ. ಒಟ್ಟಾರೆಯಾಗಿ, ಈ ಜಾತ್ರೆಯಲ್ಲಿ ಸರಿಸುಮಾರು ಮೂರು ಕೋಟಿ ರೂ.ಗಳವರೆಗೆ ಬಳೆಗಳ ವ್ಯಾಪಾರ ವಹಿವಾಟು ನಡೆಯುತ್ತದೆ ಎನ್ನುತ್ತಾರೆ ಬಳೆ ವ್ಯಾಪಾರಿಗಳು.

ಸವದತ್ತಿ ಯಲ್ಲಮ್ಮನ ಜಾತ್ರೆ (ETV Bharat)

ಜಾತ್ರೆ-ಬಳೆ ವ್ಯಾಪಾರಕ್ಕೆ ಅಡ್ಡಿಯಾಗದ ಧರ್ಮ:ಜಾತ್ರೆಗೆ ಬರುವ ಮಹಿಳೆಯರು ಬಳೆ ಇಟ್ಟುಕೊಂಡೇ ಮನೆಗೆ ತೆರಳುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದರಲ್ಲಿ ಮುಸ್ಲಿಂ ವ್ಯಾಪಾರಿಗಳೂ ಅಧಿಕವಾಗಿದ್ದಾರೆ. ಇಲ್ಲಿ ಯಾವುದೇ ಜಾತಿ, ಮತ, ಪಂಥ ಅಡ್ಡಿಯಾಗುವುದಿಲ್ಲ. ಸಂಪ್ರದಾಯದ ಈ ಜಾತ್ರಾ ವೈಭವಕ್ಕೆ ಸಾಮರಸ್ಯದ ಬದುಕೂ ಇಲ್ಲಿ ಥಳಕು ಹಾಕಿಕೊಂಡಿದೆ. ಹೀಗಾಗಿ, ಮಹಿಳೆಯರು ಭಕ್ತಿ ಭಾವದಿಂದ ಹೇಗೆ ಬಳೆ ಇಟ್ಟುಕೊಂಡು ಸಂಭ್ರಮಿಸುತ್ತಾರೋ, ಹಾಗೆಯೇ ಮುಸ್ಲಿಂ ಸಮುದಾಯದ ವ್ಯಾಪಾರಿಗಳೂ ಅಷ್ಟೇ ಶ್ರದ್ಧೆಯಿಂದ ಬಳೆಗಳನ್ನು ಮಾರಿ ಸಂತಸಪಡುತ್ತಾರೆ.

ಯಲ್ಲಮ್ಮನ ಗುಡ್ಡದಲ್ಲಿ ಬಳೆಗಳ ವ್ಯಾಪಾರಿ ಪ್ರಕಾಶ ಧೋಂಗಡಿ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿ, ''ನಾವು 50 ವರ್ಷಗಳಿಂದ ಬಳೆ ವ್ಯಾಪಾರ ಮಾಡುತ್ತಿದ್ದೇವೆ. ವರ್ಷಪೂರ್ತಿ 7 ಅಂಗಡಿಗಳಲ್ಲಿ ಬಳೆ ವ್ಯಾಪಾರ ನಡೆಯುತ್ತದೆ. ಅದೇ ರೀತಿ ಜಾತ್ರೆ ಸಮಯದಲ್ಲಿ ಹೊರಗೆ 200ಕ್ಕೂ ಅಧಿಕ ಅಂಗಡಿಗಳಲ್ಲಿ ಬಳೆ ಮಾರಾಟ ಆಗುತ್ತದೆ. ಗುಡ್ಡದಲ್ಲಿ ಬಳೆ-ಕುಂಕುಮ ಮಾರಾಟಕ್ಕೆ ಪ್ರಸಿದ್ಧಿ. ಉತ್ತರ ಪ್ರದೇಶದ ಫಿರೋಜಾಬಾದ್​​ನಲ್ಲಿ ಬಳೆಗಳು ತಯಾರಾಗುತ್ತವೆ. ಅಲ್ಲಿಂದ ಹುಬ್ಬಳ್ಳಿ, ಸವದತ್ತಿ, ಬೈಲಹೊಂಗಲ ಜಮಖಂಡಿ ಸೇರಿ ಮತ್ತಿತರ ಕಡೆ ಸಗಟು ವ್ಯಾಪಾರಿಗಳು ಬಳೆ ತರಿಸುತ್ತಾರೆ. ಅವರಿಂದ ನಾವು ಖರೀದಿಸುತ್ತೇವೆ'' ಎಂದು ವಿವರಿಸಿದರು.

ಬಳೆ ವ್ಯಾಪಾರದಲ್ಲಿ ತೊಡಗಿರುವ ಮಹಿಳೆಯರು (ETV Bharat)

ಮುನೇರಾ ಕಿತ್ತೂರ ಮಾತನಾಡಿ, ''ನಮ್ಮ ಪೂರ್ವಜರ ಕಾಲದಿಂದೂ ಬಳಿ ವ್ಯಾಪಾರ ಮಾಡಾತ್ಯೆವರಿ. ಯಲ್ಲಮ್ಮದೇವಿ ನಮಗ ಬಾಳ ಚಲೋ ಮಾಡಿದಾಳರಿ. ವ್ಯಾಪಾರನೂ ಚಲೋ ಅಯ್ತರಿ. ಗುಡ್ಡಕ್ಕ ಬರೋ ಪ್ರತಿ ಹೆಣ್ಣುಮಕ್ಕಳು ಬಳಿ ತಗೊಂಡೇ ಹೋಗ್ತಾರ್ರಿ. ಇದು ಅನೇಕ ವರ್ಷಗಳಿಂದ ಪದ್ಧತಿ ನಡೆದುಕೊಂಡು ಬಂದೆತ್ರಿ. ನಮ್ಮಲ್ಲಿ ಡಜನ್ ಬಳೆಗೆ 100 ರೂ.ವರೆಗೆ ದರ ನಿಗದಿಪಡಿಸಲಾಗಿದೆ'' ಎಂದು ಹೇಳಿದರು.

ಇದನ್ನೂ ಓದಿ:ಕಾರವಾರದಲ್ಲಿ ವಿಶಿಷ್ಟ ಸಂಪ್ರದಾಯದ ಮಾರ್ಕೆಪೂನವ್ ಜಾತ್ರಾ ಮಹೋತ್ಸವ: ವಿಡಿಯೋ

''ನಮ್ಮ ಇಡೀ ಕುಟುಂಬ ಯಲ್ಲಮ್ಮಗುಡ್ಡದಲ್ಲಿ ಬಳಿ ವ್ಯಾಪಾರ ಮಾಡುತ್ತದೆ. ಭಾರತ ಹುಣ್ಣಿಮೆಯಲ್ಲಿ ಬಳಿ ವ್ಯಾಪಾರ ಹೆಚ್ಚಿಗೆ ಇರುತ್ತದೆ. ಯಲ್ಲಮ್ಮ ದೇವಿ ನಮಗ ಬದುಕು ಕಟ್ಟಿಕೊಟ್ಟಿದ್ದಾಳೆ. ನಮ್ಮ ಜೀವ ಇರೋವರೆಗೂ ದೇವಿ ಸೇವೆ ಮುಂದುವರಿಸುತ್ತೇವೆ'' ಎನ್ನುತ್ತಾರೆ ಜುಲೇಕಾ ಕೊರಿಕೊಪ್ಪ.

ಮಹಾರಾಷ್ಟ್ರದ ಸೊಲ್ಲಾಪುರದಿಂದ ಜಾತ್ರೆಗೆ ಬಂದಿದ್ದ ಭಕ್ತೆ ಅಂಜಲಿ ಪವಾರ್ ಮಾತನಾಡಿ, ''ಯಲ್ಲಮ್ಮ ದೇವಿ ನಮ್ಮ ಕುಲದೇವತೆ. ನನ್ನ ಮದುವೆ ಆದ ಬಳಿಕ 1997ರಿಂದಲೂ ಪ್ರತಿ ವರ್ಷವೂ ಗುಡ್ಡಕ್ಕೆ ಬರುತ್ತೇನೆ ಮತ್ತು ನಮ್ಮ ಅತ್ತೆ ತೋರಿಸಿದ ಇದೇ ಅಂಗಡಿಯಲ್ಲಿ ಬಳೆ ಇಡಿಸಿಕೊಳ್ಳುತ್ತೇನೆ. ಈಗ 3 ಡಜನ್ ಇಡಿಸಿಕೊಂಡೆ'' ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ತೆರೆ: ಮೂಲಸ್ಥಾನ ಸೇರಿದ ತೇರು

Last Updated : Feb 13, 2025, 10:37 PM IST

ABOUT THE AUTHOR

...view details