ಕರ್ನಾಟಕ

karnataka

ಟಿ-20 ಪ್ರಾಯೋಜಕತ್ವದಿಂದ ಕೆಎಂಎಫ್​ಗೆ ಏನು ಲಾಭವಿತ್ತು, ದರ ಪರಿಷ್ಕರಣೆ ವಾಪಸ್ ಪಡೆಯಿರಿ: ಸಿಎಂಗೆ ಸುರೇಶ್ ಕುಮಾರ್ ಪತ್ರ - Suresh Kumar

By ETV Bharat Karnataka Team

Published : Jun 27, 2024, 9:33 AM IST

ಮಾಜಿ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹಾಲಿನ ದರ ಏರಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಹಾಲಿನ ದರದ ಏರಿಕೆಯ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಸಿಎಂಗೆ ಸುರೇಶ್ ಕುಮಾರ್ ಪತ್ರ
ಸಿಎಂಗೆ ಸುರೇಶ್ ಕುಮಾರ್ ಪತ್ರ (ETV Bharat)

ಬೆಂಗಳೂರು: ಇಲ್ಲಿ ಬೆಲೆ ಏರಿಕೆ ಮಾಡಿ, ಬೇರೆ ದೇಶಗಳ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿ, ಸಾಮಾನ್ಯ ನಾಗರಿಕರ ಮೇಲೆ ಹೊಡೆತ ಕೊಡುವ ಬದಲು, ನಿಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರದ್ದು ಮಾಡಿ, ಅನಗತ್ಯ ಹೊರೆಯನ್ನು ಇಳಿಸಿ ರೈತರ ಸಹಾಯಕ್ಕೆ ಬನ್ನಿ, ಮಹಿಳೆಯರ ಮತ್ತು ಮಕ್ಕಳ ಹಿತ ದೃಷ್ಟಿಯಿಂದ ಈ ಹಾಲಿನ ದರದ ಏರಿಕೆಯ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಹಾಲಿನ ದರ ಪರಿಷ್ಕರಣೆ ವಾಪಸ್​ಗೆ ಆಗ್ರಹಿಸಿ ಸಿಎಂಗೆ ಸುದೀರ್ಘ ಪತ್ರ ಬರೆದಿರುವ ಸುರೇಶ್ ಕುಮಾರ್, ಯಾವುದೇ ಗ್ರಾಹಕ 50 ML ಹಾಲು ಹೆಚ್ಚುವರಿ ಬೇಕೆಂದು ಕೇಳಿರಲಿಲ್ಲ. ಯಾರಿಗಾದರೂ ಇದು ಅಗತ್ಯವೆಂದು ತಿಳಿದು ಬಂದಿಲ್ಲ. ಆದರೂ ಈ ಘೋಷಣೆ ಆಗಿದೆ. ಹೈನುಗಾರಿಕೆ ಕಾಯಕದಲ್ಲಿರುವ ರೈತರಿಗೆ ಹಾಲು ಹೆಚ್ಚು ಉತ್ಪಾದನೆ ಆಗುತ್ತಿರುವ ಈ ಸಮಯದಲ್ಲಿ ಹೆಚ್ಚಿನ ಬೆಂಬಲ ಬೆಲೆ ಸಿಗಬೇಕು ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಆದರೆ ಹೇಗೆ? ಎನ್ನುವುದು ಮುಖ್ಯ ಎಂದು ತಿಳಿಸಿದ್ದಾರೆ.

2023 ಜುಲೈ ತಿಂಗಳಲ್ಲಿ ಕೆಎಂಎಫ್ ರಾಜ್ಯ ಸರ್ಕಾರದ ಹಸಿರು ನಿಶಾನೆಯೊಂದಿಗೆ ಪ್ರತಿ ಲೀಟರ್ ಹಾಲಿಗೆ ₹3 ರೂ ಹೆಚ್ಚಳ ಮಾಡಿತ್ತು. ಆಗಲೂ ಸಹ " ಇದು ಮೂರು ರೂಪಾಯಿ ದರ ಏರಿಕೆಯಲ್ಲ, ಬದಲಿಗೆ 50ml ಹಾಲನ್ನು ಅಧಿಕವಾಗಿ ಕೊಡಲಾಗುವುದು" ಎಂದು ಹೇಳಲಾಗಿತ್ತು. ಆದರೆ ಕೆಲವೇ ತಿಂಗಳುಗಳ ನಂತರ ಆ 50 ml ಹೆಚ್ಚುವರಿ ಹಾಲು ಎಲ್ಲಿ ಮಾಯವಾಯಿತು ಯಾರಿಗೂ ಗೊತ್ತಿಲ್ಲ. ಮೇ 1, 2023 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡುತ್ತಾ ಹಾಲಿಗೆ ಸಬ್ಸಿಡಿಯನ್ನು ಪ್ರತಿ ಲೀಟರ್​ಗೆ ₹2 ರೂ ನಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದರು. ಆದರೆ ಆಗ ಮತದಾರರಾಗಿದ್ದ ಜನತೆಗೆ ಗೊತ್ತಾಗಲಿಲ್ಲ, ಈ ಹೆಚ್ಚುವರಿ ಎರಡು ರೂಪಾಯಿಯನ್ನು ಗ್ರಾಹಕರಾದ ತಾವೇ ಹೊರಬೇಕಾಗುತ್ತದೆ ಎಂದು ಹಾಲಿನ ದರ ಪರಿಷ್ಕರಣೆಯನ್ನು ಟೀಕಿಸಿದ್ದಾರೆ.

ಮುಖ್ಯಮಂತ್ರಿಗಳೇ, ತಮಗೆ ತಿಳಿದಿರುವಂತೆ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಲಕ್ಷಾಂತರ ಮಕ್ಕಳು ಮತ್ತು ಮಹಿಳೆಯರಿಗೆ ಹಾಲು ಸುಲಭವಾಗಿ ಪ್ರೋಟೀನ್ ಒದಗಿಸುವ ಒಂದು ಆಹಾರ ಮೂಲ. ಆದರೆ, ಒಂದೇ ವರ್ಷದಲ್ಲಿ ಎರಡು ಬಾರಿ ಹಾಲಿನ ದರವನ್ನು ಏರಿಸುವ ಮೂಲಕ ತಾವು ಬಡ ಗ್ರಾಹಕರ ಅದರಲ್ಲಿಯೂ ವಿಶೇಷವಾಗಿ ಕುಟುಂಬಗಳ ಕೊಳ್ಳುವಿಕೆಯ ಶಕ್ತಿಗೆ ಪೆಟ್ಟು ನೀಡುತ್ತಿದ್ದೀರಿ ಮತ್ತು ಅಗತ್ಯವಿರುವ ಪ್ರೋಟೀನ್ ಮೂಲವನ್ನು ನಿರಾಕರಿಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.

ಪ್ರಾಯೋಜಕತ್ವ ಬೇಕಿತ್ತೆ?:ಕೆಎಂಎಫ್ ಆರ್ಥಿಕವಾಗಿ ದುರ್ಬಲವಾಗಿದ್ದರೆ ಈ ಏರಿಕೆಯನ್ನು ಸಮರ್ಥಿಸಿಕೊಳ್ಳಬಹುದಿತ್ತು. ಆದರೆ ಇದೇ ಕೆಎಂಎಫ್ ಈಗ ಹಾಲಿ ನಡೆಯುತ್ತಿರುವ T20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಕಾಟ್ಲಂಡ್ ಮತ್ತು ಐರ್ಲ್ಯಾಂಡ್ ದೇಶಗಳ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಲು ಮುಂದಾಗಿರುವುದು ಏತಕ್ಕೆ? ಈ ಪ್ರಾಯೋಜಕತ್ವದಿಂದ ಹೈನುಗಾರಿಕೆ ಕಾರ್ಯಕ್ರಮ ಮಾಡುತ್ತಿರುವ ರೈತರಿಗೆ ಏನು ಉಪಯೋಗ? ಇದರಿಂದ ಸರ್ಕಾರಕ್ಕೆ ಯಾವ ರೀತಿ ಅನುಕೂಲವಾಗುತ್ತದೆ? ಇದರಿಂದ ನಮ್ಮ ರಾಜ್ಯದ ಹೈನುಗಾರಿಕೆಗೆ ಯಾವ ರೀತಿ ಪ್ರಯೋಜನವಾಗುತ್ತದೆ? ಇದರ ಬದಲು ಇದೇ ಹಣವನ್ನು ರೈತರಿಗೆ ವರ್ಗಾವಣೆ ಮಾಡಬಹುದಿತ್ತಲ್ಲವೇ? ಈ ಪ್ರಾಯೋಜಕತ್ವದಿಂದ ಯಾರಿಗೆ ಲಾಭವಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಪೆಟ್ರೋಲ್, ಡೀಸೆಲ್, ಇದೀಗ ಹಾಲು, ಮುಂದೆ ಕುಡಿಯುವ ನೀರು, ಈಗಾಗಲೇ ವಿದ್ಯುತ್ ದರ... ಈ ರೀತಿ ಎಲ್ಲ ಅವಶ್ಯಕತೆ ವಸ್ತುಗಳ ದರವನ್ನು ಏರಿಸುವ ಬದಲು ವೆಚ್ಚವನ್ನು ಕಡಿಮೆ ಮಾಡುವ ಕಡೆ ಏಕೆ ಗಮನ ಕೊಡುತ್ತಿಲ್ಲ? "ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು" ಎಂಬ ಗಾದೆಯಂತೆ ಇಲ್ಲಿ ಬೆಲೆ ಏರಿಕೆ ಮಾಡಿ, ಬೇರೆ ದೇಶಗಳ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿ, ಸಾಮಾನ್ಯ ನಾಗರಿಕರ ಮೇಲೆ ಹೊಡೆತ ಕೊಡುವ ಬದಲು, ನಿಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರದ್ದು ಮಾಡಿ, ಅನಗತ್ಯ ಹೊರೆಯನ್ನು ಇಳಿಸಿ ರೈತರ ಸಹಾಯಕ್ಕೆ ಬರಬಹುದಲ್ಲವೇ? ಎಂದಿದ್ದಾರೆ.

ನಿಮ್ಮ ಗ್ಯಾರೆಂಟಿ ಸಮಿತಿಗಳು, ನಿಮ್ಮ ರಾಜಕೀಯ ಸಲಹೆಗಾರರು, ನಿಮ್ಮ ರಾಜಕೀಯ ಕಾರ್ಯದರ್ಶಿಗಳು ಇವೆಲ್ಲಾ ರಾಜ್ಯದ ಜನತೆಯ ಮೇಲೆ ಒಂದು ಹೊರೆ. ಇವರಿಗೆ ನೀಡಲಾಗುತ್ತಿರುವ ಭಾರಿ ಮೊತ್ತದ ವೇತನವನ್ನು ಕೊನೆಗೊಳಿಸಿ, ಹೈನುಗಾರಿಕೆ ಕಾಯಕದಲ್ಲಿ ತೊಡಗಿರುವ ನಮ್ಮ ನೇಗಿಲ ಯೋಗಿಗಳ ಸಹಾಯಕ್ಕೆ ದಯವಿಟ್ಟು ಬರಬೇಕೆಂದು ಆಗ್ರಹಿಸುತ್ತೇನೆ. ಮಹಿಳೆಯರ ಮತ್ತು ಮಕ್ಕಳ ಹಿತ ದೃಷ್ಟಿಯಿಂದ ಈ ಹಾಲಿನ ದರದ ಏರಿಕೆಯ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:'ಹಿರಿತನ, ಬುದ್ಧಿಮತ್ತೆ, ಚಾರಿತ್ರ್ಯ ಪರಿಗಣಿಸಿದರೆ ಹಲವರು ಉನ್ನತ ಸ್ಥಾನದಲ್ಲಿರುತ್ತಿದ್ದರು': ಆರ್.ವಿ. ದೇಶಪಾಂಡೆ ಒಡಲಾಳದ ಇಂಗಿತ! - RV Deshpande

ABOUT THE AUTHOR

...view details