ETV Bharat Karnataka

ಕರ್ನಾಟಕ

karnataka

ETV Bharat / state

ಎಲೆಕ್ಟ್ರಾಲ್ ಬಾಂಡ್ ಪ್ರಪಂಚದ ದೊಡ್ಡ ಭ್ರಷ್ಟಾಚಾರ ಹಗರಣ: ಪ್ರಕಾಶ್ ರಾಜ್ ಆರೋಪ - Lok Sabha Election

ಎಲೆಕ್ಟ್ರಾಲ್ ಬಾಂಡ್ ಲೂಟಿ ಅಲ್ವ, ಎಲ್ಲವೂ ರೇಡ್ ಆದ ಮೇಲೆ ಸಂಗ್ರಹ ಮಾಡಿದ್ದೀರಿ. 1000 ಕೋಟಿ ರೂ. ಲಂಚ ಕೊಡುವ ಲಾಟರಿ ಕಂಪನಿ ಇದೆ. 2000 ಕೋಟಿ ಕಾಂಟ್ರ್ಯಾಕ್ಟ್ ಗೆ 500 ಕೋಟಿ ರೂ. ಲಂಚ ಕೊಡುವುದೆಂದರೆ ಅದು ನಮ್ಮ ದುಡ್ಡನ್ನೇ ಕೊಟ್ಟಿದ್ದು, ಈ ದುಡ್ಡಿನಲ್ಲಿ ಶಾಸಕ, ಸಂಸದರನ್ನು ಖರೀದಿಸುತ್ತೀರಿ ಎಂದು ಬಿಜೆಪಿ ವಿರುದ್ಧ ನಟ ಪ್ರಕಾಶ್ ರಾಜ್ ಹರಿಹಾಯ್ದರು.

Actor Prakash Raj spoke to the media
ನಟ ಪ್ರಕಾಶ್ ರಾಜ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
author img

By ETV Bharat Karnataka Team

Published : Mar 18, 2024, 5:29 PM IST

ಮಂಗಳೂರು:ಎಲೆಕ್ಟ್ರಾಲ್ ಬಾಂಡ್ ಪ್ರಪಂಚದ ಅತಿ ದೊಡ್ಡ ಭ್ರಷ್ಟಾಚಾರ. ಇಷ್ಟೊಂದು ಹಣ ಪಡೆದುಕೊಂಡ ಬಗ್ಗೆ ಪ್ರಧಾನಮಂತ್ರಿ ತಮ್ಮ ಮನ್ ಕಿ ಬಾತ್​​ನಲ್ಲಿ ಯಾಕೆ ಆ ಮಾತು ಹೇಳೊಲ್ಲ. ಈ ಬಗ್ಗೆ ಅವರು ಮಾತನಾಡಲಿ ಎಂದು ಬಹುಭಾಷ ನಟ ಪ್ರಕಾಶ್ ರಾಜ್ ಆಗ್ರಹಿಸಿದರು.

ಎಲೆಕ್ಟ್ರಾಲ್ ಬಾಂಡ್ ಲೂಟಿ ಅಲ್ವ:ಮಂಗಳೂರಿನಲ್ಲಿ ಮಾತನಾಡಿದ ಅವರು ಎಲೆಕ್ಟ್ರಾಲ್ ಬಾಂಡ್ ಲೂಟಿ ಅಲ್ವ ಅದು. ಎಲೆಕ್ಟ್ರಾಲ್ ಬಾಂಡ್​​ಗೆ ನಿಯಮ ತಂದು ಕಂಪನಿಗಳ ಹೆಸರನ್ನು ಯಾಕೆ ಗೌಪ್ಯವಾಗಿಟ್ಟಿರಿ. ದೇಶದ ಪ್ರಧಾನಮಂತ್ರಿ, ಗೃಹಮಂತ್ರಿ ಸುಳ್ಳು ಹೇಳುತ್ತಿದ್ದಾರೆ. ಗೃಹಮಂತ್ರಿ 6000 ಕೋಟಿ ತೆಗೆದುಕೊಂಡಿದ್ದೇವೆ, ಅದನ್ನು 330 ಸಂಸದರಿಗೆ ಹಂಚಿಕೊಂಡರೆ ಕಮ್ಮಿ ಆಗುತ್ತದೆ ಎಂದು ಹೇಳುತ್ತಾರೆ.

ಎಲ್ಲವೂ ರೇಡ್ ಆದ ಮೇಲೆಯೇ ಸಂಗ್ರಹ ಮಾಡಿದ್ದೀರಿ. ₹ 1000 ಕೋಟಿ ಲಂಚ ಕೊಡುವ ಲಾಟರಿ ಕಂಪನಿ ಇದೆ. ₹ 2000 ಕೋಟಿ ಕಾಂಟ್ರ್ಯಾಕ್ಟ್ ಗೆ 500 ಕೋಟಿ ಲಂಚ ಕೊಡುವುದೆಂದರೆ ಅದು ನಮ್ಮ ದುಡ್ಡನ್ನು ಕೊಟ್ಟದ್ದು. ಈ ದುಡ್ಡಿನಲ್ಲಿ ಶಾಸಕ, ಸಂಸದರನ್ನು ಖರೀದಿಸುತ್ತೀರಿ, ಕಾಸ್ಟ್ಯೂಮ್ ಖರೀದಿಸುತ್ತೀರಿ. ಇದರ ಬಗ್ಗೆ ಮನ್ ಕಿ ಬಾತ್​ನಲ್ಲಿ ಒಂದು ಉತ್ತರವನ್ನು ಕೊಡುವುದಿಲ್ಲ ಎಂದು ಪ್ರಕಾಶ್​ ರಾಜ್​ ಅವರು ಮೋದಿಗೆ ಟಾಂಗ್ ನೀಡಿದರು.

ಇದನ್ನು ಬಿಟ್ಟು ಬೇರೆ ಎಲ್ಲ ಮಾತನಾಡುತ್ತಿದ್ದಾರೆ. ಈ ತರಹದ ಸುಳ್ಳನ್ನು ಜನರಿಗೆ ಹೇಳ್ತಾರೆ. ಇದು ಪ್ರಪಂಚದಲ್ಲಿ ನಡೆದ ಅತಿ ದೊಡ್ಡ ಭ್ರಷ್ಟಾಚಾರದ ಹಗರಣ. ದೇಶದಲ್ಲಿ ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳಿದ್ದಾರೆ. ಇವರು ಕಾಂಟ್ರ್ಯಾಕ್ಟ್ ಕೊಟ್ಟ ಸಾವಿರ ಕಂಪನಿಗಳಿಂದ ಬಾಂಡ್ ಮೂಲಕ ದುಡ್ಡು ಬಂದಿದೆ. ದುಡ್ಡು ತಗೊಂಡು ಕಾಂಟ್ರ್ಯಾಕ್ಟ್ ಕೊಡುವುದು, ಈಡಿ ರೇಡ್ ಮಾಡಿದ ಮರುದಿನ ಬಾಂಡ್ ಪಡೆದುಕೊಂಡಿರುವುದು ಸರಿಯೇ? ಇದನ್ನು ಯಾಕೆ ಹೇಳುತ್ತಿಲ್ಲ. ಇದನ್ನು ಮನ್ ಕಿ ಬಾತ್ ನಲ್ಲಿ ಹೇಳಿ ಎಂದು ಒತ್ತಾಯಿಸಿದರು.

ಈ ಬಾರಿ ನಾವು 400 ದಾಟುತ್ತೇವೆ ಹೇಳ್ತಾರೆ. ಏನು ಇದು ಅಹಂಕಾರ ಅಲ್ವಾ? ನೀವ್ಯಾರ್ರೀ ಅದನ್ನು ಹೇಳೋಕೆ. ಯಾವುದಕ್ಕೆ ಪ್ರಜಾಪ್ರಭುತ್ವ ಇರೋದು? ಹೀಗೆ ಬಂಗಾಳ, ಕರ್ನಾಟಕದಲ್ಲಿ ಹೇಳಿದ್ರಿ ಆಯ್ತಾ? ಈಗ ತಮಿಳುನಾಡಿನಲ್ಲಿ ಹೇಳಿದ್ರಿ, ಅಲ್ಲಿ ಆಯ್ತಾ? ಆಗಿಲ್ಲ. ಸುಮ್ಮೆ ಬಾಯಿಗೆ ಬಂದಂಗೆ ಹೇಳ್ಕಂಡು ಬರ್ತೀರಿ, ಸಾವಿರಾರು ಕೋಟಿ ಹಣ ಇದೆ ಅಂತ ಧೈರ್ಯಾನಾ? ಹಣ ಬಲದಿಂದ ಗೆದ್ದೇ ಗೆಲ್ಲುತ್ತೇವೆ ಅಂತ ಧೈರ್ಯನಾ? ಧರ್ಮವನ್ಬು ದುರುಪಯೋಗ ಪಡಿಸಿ, ಮತಗಳನ್ನು ದುಡ್ಡು ಕೊಟ್ಟು ಖರೀದಿಸ್ತೀವಿ ಅಂತ ಧೈರ್ಯಾನಾ? ಸುಮ್ನೆ ಇಮೇಜ್ ಸೃಷ್ಟಿಸೋಕಷ್ಟೆ ಹೇಳಿಕೊಂಡು ತಿರುಗ್ತೀರಿ ಎಂದು ವಾಗ್ದಾಳಿ ನಡೆಸಿದರು.

ಇವರ ಪರಿವಾರ ಏನಂತ ಗೊತ್ತಾಯ್ತಲ್ಲ, ಲಾಟರಿ ಮಾರೋ ಮಾರ್ಟಿನ್ ಇವರ ಪರಿವಾರ. ನಿಮ್ಮದು ಫಾರ್ಮಾ ಕಂಪನಿ, ಅದಾನಿ ಪರಿವಾರ, ರೇಪ್ ಮಾಡಿರುವ ಬ್ರಿಜ್ ಭೂಷಣ್ ಪರಿವಾರ. ಮಣಿಪುರದ ಹೆಣ್ಮಕ್ಕಳ ಬಗ್ಗೆ ಮಾತಾಡಲ್ಲ, ಮಹಿಳಾ ದಿನದಂದು ಗ್ಯಾಸ್​ ಗೆ 100 ರೂ. ಕಡಿಮೆ ಮಾಡ್ತಾರೆ. ಎರಡು ರೂ. ಪೆಟ್ರೋಲ್ ಕಡಿಮೆ ಮಾಡಿದ್ರಲ್ಲಿ ಅರ್ಥ ಇದೆಯಾ ಎಂದು ಪ್ರಕಾಶ್​ ರಾಜ್​ ಟೀಕಿಸಿದರು.

ಎಲೆಕ್ಟ್ರಾಲ್ ಬಾಂಡ್ 12 ಸಾವಿರ ಕೋಟಿ:ಎಲೆಕ್ಟ್ರಾಲ್ ಬಾಂಡ್ ಮೂಲಕ 12 ಸಾವಿರ ಕೋಟಿಯಂತೆ, ನಮಗೆ ಸೊನ್ನೆ ಎಷ್ಟು ಅಂತ ಗೊತ್ತಾಗಲ್ಲ, ಚುನಾವಣೆ ಗೆಲ್ಲೋಕೆ ಬಾಂಡ್ ಮಾಡಿದೀರಿ. ದೇಶದ ಜನರಿಗೆ ಕೆಲಸ ಕೊಟ್ಟಿದ್ದೀರೋ ಇಲ್ವೋ ಗೊತ್ತಿಲ್ಲ. ಆದರೆ ನಿಮ್ಮ ಮನೆಯ ಟೈಲರ್​ಗಂತ ಕೆಲಸ ಕೊಟ್ಟಿದೀರಿ. ಮಹಾಪ್ರಭುಗಳೇ ಇಂಟರ್​​ನೆಟ್​ನ ಒಂದು ಜಿಬಿ ಹತ್ತು ರೂ. ಅದು ನೀವು ಮಾಡಿದ್ದಾ? ಅದು ಪ್ರಗತಿ, ವಿಜ್ಞಾನ ಬೆಳೆದಂತೆ ವಸ್ತುಗಳ, ಸವಲತ್ತುಗಳ ಬೆಲೆ ಬದಲಾಗುತ್ತದೆ. ಎಲ್ಲವನ್ನು ಸುಳ್ಳು ಹೇಳ್ಕೊಂಡು ತಿರುಗೋದು ತಪ್ಪು. ಜನರನ್ನು ಹೀಗೆಲ್ಲಾ ಮಂಗ ಮಾಡಬಾರದು ಎಂದರು.

ಚುನಾವಣೋತ್ತರ ಸಮೀಕ್ಷೆ ಎನ್ನುವುದು ವ್ಯಾಪಾರ:ಚುನಾವಣೋತ್ತರ ಸಮೀಕ್ಷೆ ಎನ್ನುವುದು ವ್ಯಾಪಾರ. ಹಣ ಕೊಟ್ಟು ಮಾಡಿಸುವಂಥ ಸಮೀಕ್ಷೆಗಳು ಇವು.‌ ಇವತ್ತು ಪತ್ರಿಕೆ ಓಪನ್ ಮಾಡಿದ್ರೆ ಯಾವ ಪಕ್ಷದ್ದು ಅಂತ ಗೊತ್ತಾಗುತ್ತದೆ. ಒಳ್ಳೆಯ ಅಭ್ಯರ್ಥಿಗಳು ಗೆದ್ರೆ ನೀವು ಗೆದ್ದಂತೆ, ಅದಕ್ಕಾಗಿ ಒಳ್ಳೆಯ ಅಭ್ಯರ್ಥಿ ಗೆಲ್ಲಿಸಿ. ನಾನು ಚುನಾವಣೆಗೆ ನಿಲ್ಲಲ್ಲ, ಯಾವ ಪಕ್ಷದ ಪರವು ಪ್ರಚಾರ ಮಾಡಲ್ಲ. ಜನರ ಪಕ್ಷ ನಾವು, ಎಲ್ಲಾ ಪಕ್ಷದವರು ಒಂದೇ. ಎಲ್ಲ ಪಕ್ಷದ ನಾಯಕರಲ್ಲೂ ಹೊಂದಾಣಿಕೆ ಇದೆ ಎಂದು ಪ್ರಕಾಶ್ ರಾಜ್​ ಆರೋಪಿಸಿದರು.

ಮೋದಿಯವರನ್ನು ಮಹಾಪ್ರಭುಗಳು ಅಂತ ಅವರ ಹೆಸರು ಕರೆದ್ರೆ ಬೇಜಾರಾಗುತ್ತೆ. ನಾ ಖಾವೂಂಗಾ ನಾ ಖಾನೆ ದೂಂಗಾ ಅಂತಾರೆ. ನಿಮ್ಮಲ್ಲಿ ಭ್ರಷ್ಟಾಚಾರ ನಡೀತಿದೆಯಲ್ಲಾ, ನೀವೂ ಸರಿಯಿಲ್ಲ ಅಂತಲ್ವಾ. ಯಾರೂ ದೇವರಲ್ಲ ಇಲ್ಲಿ, ಜನ ಅರ್ಥ ಮಾಡ್ಕೋಬೇಕಿದೆ ಎಂದು ತಿಳಿಸಿದರು.

ಇದನ್ನೂಓದಿ:ಶಿವಮೊಗ್ಗ: ಸುಳ್ಳುಗಳೇ ಕಾಂಗ್ರೆಸ್​ ಪಕ್ಷದ ಬಂಡವಾಳ; ಪ್ರಧಾನಿ ಮೋದಿ ಟೀಕಾಪ್ರಹಾರ, ಈಶ್ವರಪ್ಪ ಗೈರು

ABOUT THE AUTHOR

...view details