ದಾವಣಗೆರೆ/ಚಿತ್ರದುರ್ಗ : ಸಿಎಂ ಸಿದ್ದರಾಮಯ್ಯ ಅವರು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಶೋಷಿತರ ಸಮಾವೇಶಕ್ಕೆ ಆಗಮಿಸಿದ್ದಾರೆ. ಈ ಸಮಾವೇಶ ಮುಗಿದಾದ ಬಳಿಕ ಅವರು ಮಾಜಿ ಸಚಿವ ಹೆಚ್ ಆಂಜನೇಯ ಅವರ ನಿವಾಸಕ್ಕೆ ಭೋಜನಕ್ಕೆ ತೆರಳಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಊಟದ ಮೆನುವಿನಲ್ಲಿ ಮಾಂಸಹಾರದ ಖಾದ್ಯಗಳು ಸಿದ್ಧವಾಗಿವೆ. ನಾಟಿ ಕೋಳಿ ಸಾರು, ಮುದ್ದೆ, ಚಪಾತಿ, ಮಟನ್ ಚಾಪ್ಸ್, ಫಿಶ್, ಬೆಂಡಿ ಫ್ರೈ, ಚಪಾತಿ ಅವರೇಕಾಳು ಪಲ್ಯ, ಚಿತ್ರಾನ್ನ, ಅನ್ನ-ಸಾಂಬಾರ್ ಹಾಗೂ ಫ್ರೂಟ್ ಸಲಾಡ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಅವರ ಆಪ್ತರು ಮಾಹಿತಿ ನೀಡಿದ್ದಾರೆ. ಶೋಷಿತರ ಸಮಾವೇಶ ಮುಗಿದ ಬಳಿಕ ಆಂಜನೇಯ ನಿವಾಸಕ್ಕೆ ತೆರಳಿ ಸಿಎಂ ಭೂರಿ ಭೋಜನ ಸವಿಯಲಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಕುರಿ ಗಿಫ್ಟ್ :ಶೋಷಿತರ ಜಾಗೃತಿ ಸಮಾವೇಶಕ್ಕೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಕುರಿ ಮರಿ ಗಿಫ್ಟ್ ಕೊಡಲಾಗಿದೆ. ಮಾದಾರಯ್ಯ ಚನ್ನಯ್ಯ ಪೀಠಕ್ಕೆ ಸಿದ್ದರಾಮಯ್ಯ ಆಗಮಿಸಿದಾಗ ಬಸಣ್ಣ ಎಂಬುವರು ಕುರಿ ಕೊಟ್ಟು ಅಭಿಮಾನ ಮೆರೆದಿದ್ದಾರೆ. ಬಸಣ್ಣ ಚಿತ್ರದುರ್ಗದ ಗಾಂಧಿನಗರ ನಿವಾಸಿ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಜಾಮ್ :ಶೋಷಿತರ ಜಾಗೃತಿ ಸಮಾವೇಶದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪರಿಣಾಮ ಪರೀಕ್ಷೆಗೆ ಆಗಮಿಸಿದ ಮಕ್ಕಳು ಟ್ರಾಫಿಕ್ನಲ್ಲಿ ಸಿಲುಕಿ ತೊಂದರೆ ಅನುಭವಿಸಿದ ಘಟನೆ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಎಸ್ಜೆಎಂ ರೆಸಿಡೆನ್ಶಿಯಲ್ ಶಾಲೆ ಬಳಿ ನಡೆದಿದೆ.