ಕರ್ನಾಟಕ

karnataka

ETV Bharat / state

ಕಾನ್​ಸ್ಟೇಬಲ್​ ಮೇಲೆ ಹಲ್ಲೆ ಆರೋಪ; ಎಂಟು ಜನರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಪ್ರಕರಣ - Devadurga

ಪೊಲೀಸ್ ಕಾನ್​ಸ್ಟೇಬಲ್​ ಒಬ್ಬರು ತನ್ನ ಮೇಲೆ ಹಲ್ಲೆ ನಡೆದಿದೆ ಆರೋಪಿಸಿ ಎಂಟು ಜನರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೇವದುರ್ಗ ಪೊಲೀಸ್ ಠಾಣೆ
ದೇವದುರ್ಗ ಪೊಲೀಸ್ ಠಾಣೆ

By ETV Bharat Karnataka Team

Published : Feb 12, 2024, 12:59 PM IST

ರಾಯಚೂರು:ಪೊಲೀಸ್ ಪೇದೆಯ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಎಂಟು ಜನರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತೋಷ, ತಿಮ್ಮಾರೆಡ್ಡಿ, ಮಲ್ಲಪ್ಪ, ರಫಿಕ್, ಇಲಿಯಾಸ್, ದಾವೂದ್ ಆವಂಟಿ, ಭೀಮಣ್ಣ ತಳವಾರದೊಡ್ಡಿ, ರಮೇಶ ನಾಯಕ ಕರ್ಕಿಹಳ್ಳಿ ಹಲ್ಲೆ ಮಾಡಿದ ಆರೋಪಿಗಳು. ಸಂತೋಷ ಎ1 ಆರೋಪಿಯಾಗಿದ್ದು ಪೊಲೀಸ್ ಕಾನ್​ಸ್ಟೇಬಲ್​ ಹನುಮಂತರಾಯ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳು ರಾಜಕೀಯ ಹಿನ್ನೆಲೆ ಉಳ್ಳವರಾಗಿದ್ದಾರೆ.

''2024 ಫೆ.11ರಂದು ದೊಂಡಂಬಳಿಯ ಬಳಿ ಕೃಷ್ಣಾ ನದಿಯಿಂದ ಅಕ್ರಮವಾಗಿ ಟ್ರ್ಯಾಕ್ಟರ್​ ಮೂಲಕ ಮರಳು ಸಾಗಾಟ ಮಾಡುತ್ತಿದೆ ಎಂಬ ಖಚಿತ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ದೇವದುರ್ಗ ಠಾಣಾಧಿಕಾರಿ ಜೊತೆಯಲ್ಲಿ ಪೊಲೀಸ್ ಸಿಬ್ಬಂದಿ ತಂಡ ರಚಿಸಿಕೊಂಡು ಘಟನಾ ಸ್ಥಳಕ್ಕೆ ತೆರಳಲಾಗಿತ್ತು. ಈ ವೇಳೆ ಎರಡು ಟ್ರ್ಯಾಕ್ಟರ್​​ಗಳು ಮರಳು ತುಂಬಿಕೊಂಡು ಹೋಗುತ್ತಿದ್ದವು. ನಮ್ಮನ್ನು ನೋಡಿದಾಗ, ಚಾಲಕರು ಟ್ರ್ಯಾಕ್ಟರ್ ಬಿಟ್ಟು ಓಡಿ ಹೋದರು. ಬಳಿಕ ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಯಿತು. ತಕ್ಷಣ ರಾಜಕೀಯ ಮುಖಂಡರೊಬ್ಬರು ಠಾಣೆಗೆ ಕರೆ ಮಾಡಿ ಪ್ರಕರಣ ಸಂಬಂಧ ಇನ್ನಷ್ಟು ಮಾತನಾಡುವುದಿದೆ, ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರ(ಐಬಿ)ಗೆ ಬರುವಂತೆ ಹೇಳಿದ್ದರು. ಅವರ ಮಾತಿನಂತೆ ನಾನು ಐಬಿಗೆ ತೆರಳಿದೆ. ಇವರೆಲ್ಲರೂ ಅಲ್ಲಿ ಹಾಜರಿದ್ದರು. ಈ ವೇಳೆ ನಮ್ಮ ಟ್ರ್ಯಾಕ್ಟರ್​​ಗಳನ್ನು ಹೇಗೆ ವಶಕ್ಕೆ ಪಡೆದೆ ಎಂದು ಇಲ್ಲ-ಸಲ್ಲದ ಮಾತುಗಳನ್ನು ಆಡುತ್ತಾ ಅಶ್ಲೀಲ ಪದಗಳನ್ನು ಬಳಸಿದರು. ಸಾಲದೆಂಬಂತೆ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದರು. ಈ ವೇಳೆ ನಾನು ಅಲ್ಲಿಂದ ತಪ್ಪಿಸಿಕೊಳ್ಳುವ ಹರಸಾಹಸ ಮಾಡಿದೆ. ಆದರೆ, ರೂಮಿನಲ್ಲಿ ಕೂಡಿ ಹಾಕಿ ನನ್ನ ಮೇಲೆ ಹೊಡಿಬಡಿ ಮಾಡಿದರು. ಮುಂದೆ ಯಾವತ್ತಾದರೂ ನಮ್ಮ ಟ್ರ್ಯಾಕ್ಟರ್​​ಗಳನ್ನು ವಶಕ್ಕೆ ಪಡೆದದ್ದು ಆದಲ್ಲಿ ನಿನ್ನ ಜೀವಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿ ಕಳಿಸಿದ್ದಾರೆ'' ಎಂದು ಕಾನ್​ಸ್ಟೇಬಲ್ ಹನುಮಂತರಾಯ ದೂರು ನೀಡಿದ್ದಾರೆ.

ಇವರು ನೀಡಿದ ದೂರಿನ ಆಧಾರದ ಮೇಲೆ ದೇವದುರ್ಗ ಠಾಣೆಯಲ್ಲಿ ಎಂಟು ಜನರ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ಜಾತಿನಿಂದನೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ಪ್ರಕರಣ ದಾಖಲಾದ ಬಳಿಕ ಕೆಲವರು ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತನಿಖೆ ನಡೆಸಿ ಜಾತಿನಿಂದನೆ ದೂರು ಹೇಗೆ ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪಿಐ ವರ್ಗಾವಣೆ ಮಾಡಬೇಕು, ಪೊಲೀಸ್ ಕಾನ್​ಸ್ಟೇಬಲ್ ವಿರುದ್ಧ ದೂರು ದಾಖಲಿಸಿ, ಅಮಾನತು ಮಾಡಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ:ಚಿಕ್ಕಮಗಳೂರು: ಸಂಬಳದ ಹಣ ಕೇಳಿದ್ದಕ್ಕೆ ಮರಕ್ಕೆ ಕಟ್ಟಿ ಹೋಟೆಲ್​​ ಕಾರ್ಮಿಕನ ಮೇಲೆ ಹಲ್ಲೆ ಆರೋಪ

ABOUT THE AUTHOR

...view details