ಕರ್ನಾಟಕ

karnataka

By ETV Bharat Karnataka Team

Published : Mar 25, 2024, 4:31 PM IST

ETV Bharat / state

ಅಸಮಾಧಾನಿತರ ಸಭೆಗೆ ರೇಣುಕಾಚಾರ್ಯ, ರವೀಂದ್ರನಾಥ್ ಗೈರು: ನಾಳೆ ದಾವಣಗೆರೆಗೆ ತೆರಳಿ ಸಂಧಾನ ಸಭೆ ನಡೆಸಲು ಬಿಎಸ್​ವೈ ನಿರ್ಧಾರ - BS Yeddyurappa meeting

ದಾವಣಗೆರೆ ಬಂಡಾಯ ನಾಯಕರ ಜತೆ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲೇ ಮನವೊಲಿಕೆ ಕಸರತ್ತು ನಡೆಸಿದ ಬಿಎಸ್​ವೈ, ಮನಸ್ತಾಪ ಮರೆತು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ನಾಯಕರಿಗೆ ತಿಳಿಸಿದರು.

ಮನವೊಲಿಕೆ ಕಸರತ್ತು ನಡೆಸಿದ ಬಿಎಸ್​ವೈ
ಮನವೊಲಿಕೆ ಕಸರತ್ತು ನಡೆಸಿದ ಬಿಎಸ್​ವೈ

ಬೆಂಗಳೂರು: ದಾವಣಗೆರೆ ಅಭ್ಯರ್ಥಿ ವಿರುದ್ಧ ವ್ಯಕ್ತವಾಗುತ್ತಿರುವ ಅಸಮಾಧಾನ ಶಮನಕ್ಕೆ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮಧ್ಯಪ್ರವೇಶ ಮಾಡಿದ್ದು, ಜಿಲ್ಲಾ ನಾಯಕರ ಮನವೊಲಿಕೆ ಕಾರ್ಯ ಆರಂಭಿಸಿದ್ದಾರೆ. ರೆಬೆಲ್ ನಾಯಕರು ಇಂದಿನ ಸಭೆಗೆ ಗೈರಾದ ಹಿನ್ನೆಲೆಯಲ್ಲಿ ನಾಳೆ ದಾವಣಗೆರೆಗೆ ತೆರಳಿ ಸಮಸ್ಯೆ ಪರಿಹರಿಸಲು ಬಿಎಸ್​ವೈ ಮುಂದಾಗಿದ್ದಾರೆ.

ದಾವಣಗೆರೆ ಬಂಡಾಯ ನಾಯಕರ ಜತೆ ಯಡಿಯೂರಪ್ಪ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲೇ ಇಂದು ಮನವೊಲಿಕೆ ಕಸರತ್ತು ನಡೆಸಿದರು. ಸಂಸದ ಜಿ ಎಂ ಸಿದ್ದೇಶ್ವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ದಾವಣಗೆರೆ ಮುಖಂಡರು ಭಾಗಿಯಾಗಿದ್ದರು. ಈ ಸಭೆಗೆ ಬಿಎಸ್​​​​ವೈ ಮಾನಸಪುತ್ರ ಎಂದೇ ಕರೆಸಿಕೊಳ್ಳುವ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹಾಗೂ ಎಸ್ ಎ ರವೀಂದ್ರನಾಥ್ ಗೈರಾದರೆ, ಮಾಜಿ ಶಾಸಕರಾದ ಜಗಳೂರು ರಾಮಚಂದ್ರಪ್ಪ, ಪ್ರೊ.ಲಿಂಗಣ್ಣ ಭಾಗಿಯಾಗಿದ್ದರು. ಮನಸ್ತಾಪ ಮರೆತು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ನಾಯಕರಿಗೆ ಯಡಿಯೂರಪ್ಪ ತಿಳಿಸಿದರು. ಬಳಿಕ ಪ್ರಮುಖ ಇಬ್ಬರು ನಾಯಕರ ಮನವೊಲಿಕೆ ಮಾಡಲು ದಾವಣಗೆರೆಗೆ ತೆರಳುವುದಾಗಿ ಹೇಳಿದರು.

ಸಭೆ ನಂತರ ಮಾತನಾಡಿದ ಯಡಿಯೂರಪ್ಪ, ಇವತ್ತು ದಾವಣಗೆರೆ ನಾಯಕರು ಬಂದಿದ್ದರು, ಅವರ ಜೊತೆ ಮಾತುಕತೆ ನಡೆಸಿದ್ದೇವೆ, ದಾವಣಗೆರೆಗೆ ನಾಳೆ ನಾನು ಹೋಗ್ತಿದ್ದೇನೆ, ಎಲ್ಲವೂ ಸರಿಹೋಗಲಿದೆ, ಹೋಗಿ ಮಾತಾಡಿಕೊಂಡು ಬರುತ್ತೇನೆ, ಎಲ್ಲೂ ಸಮಸ್ಯೆ ಇಲ್ಲ, ಎಲ್ಲವೂ ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇವತ್ತು ಚಿತ್ರದುರ್ಗ ಟಿಕೆಟ್​ ಘೋಷಣೆ ಆಗುತ್ತೆ:ಚಿತ್ರದುರ್ಗ ಟಿಕೆಟ್ ಘೋಷಣೆ ಇವತ್ತು ಆಗಲಿದೆ, ಎಲ್ಲ 28 ಕ್ಷೇತ್ರ ಗೆಲ್ಲಲು ಶಕ್ತಿ ಮೀರಿ ಪ್ರಯತ್ನ ಮಾಡ್ತೇವೆ, ಅದರಲ್ಲಿ ಯಶಸ್ವಿ ಆಗುತ್ತೇವೆ ಎನ್ನುವ ವಿಶ್ವಾಸ ಇದೆ. ಜನಾರ್ದನ ರೆಡ್ಡಿಯವರು ಪಕ್ಷಕ್ಕೆ ಬಂದಿದ್ದು ಶಕ್ತಿ ಬಂದಂತಾಗಿದೆ, ಆ ಭಾಗದಲ್ಲಿ ರೆಡ್ಡಿಯವರು ಜನಪ್ರಿಯ ನಾಯಕರು, ದೆಹಲಿಯಲ್ಲಿ ಅವರನ್ನು ಕರೆದು ಮಾತನಾಡಲಾಗಿದೆ, ಅವರು ಪಕ್ಷಕ್ಕೆ ಬಂದಿದ್ದಾರೆ, ನಮಗೆ ದೊಡ್ಡ ಶಕ್ತಿ ಬಂದಿದೆ. ಶ್ರೀರಾಮುಲು, ಜನಾರ್ದನ ರೆಡ್ಡಿ ಒಟ್ಟಾಗಿ ಹೋಗ್ತಾರೆ, ಈಗಾಗಲೇ ಇಬ್ಬರ ಜೊತೆಗೂ ಮಾತನಾಡಿದ್ದೇವೆ, ನಾವೆಲ್ಲರೂ ಒಟ್ಟಾಗಿ ಹೋಗುತ್ತೇವೆ, ಒಟ್ಟಿಗೆ ಪ್ರವಾಸ ಮಾಡುತ್ತೇವೆ ಎಂದರು.

ಯಡಿಯೂರಪ್ಪ ಸಭೆ ಬಳಿಕ ಮಾತನಾಡಿದ ಸಂಸದ ಸಿದ್ದೇಶ್ವರ, ನಮ್ಮಲ್ಲಿ ಯಾವುದೇ ಬಂಡಾಯ ಇಲ್ಲ, ಯಾರೂ ಅಸಮಾಧಾನಗೊಂಡಿಲ್ಲ, ಎಲ್ಲರೂ ಒಟ್ಟಾಗಿದ್ದೇವೆ, ಬೇಸರದಲ್ಲಿರುವವರಿಗೆ ಕೈಮುಗಿದು ಸಹಕಾರ ಕೊಡಿ ಅಂತ ಕೇಳಿಕೊಳ್ಳುತ್ತೇವೆ, ಎಲ್ಲವೂ ಸರಿ ಹೋಗಲಿದೆ ಎಂದರು.

ದಾವಣಗೆರೆ ಟಿಕೆಟ್ ವಿಚಾರದಲ್ಲಿ ರೇಣುಕಾಚಾರ್ಯ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಅಸಮಾಧಾನ ಸರಿಯಾಗಿದೆ, ಮೋದಿ ಅವರನ್ನ ಪ್ರಧಾನಿ ಮಾಡಬೇಕು ಎನ್ನುವುದೇ ನಮ್ಮ ಗುರಿ, ಹಾಗಾಗಿ ರೇಣುಕಾಚಾರ್ಯರ ಜೊತೆ ಮಾತನಾಡಿದ್ದೇನೆ, ಈಗ ಯಾವುದೇ ಅಸಮಾಧಾನ‌ ಇಲ್ಲ, ಎಲ್ಲವೂ ಸರಿ ಹೋಗಿದೆ ಎಂದರು.

ಕೊಪ್ಪಳ ನಾಯಕರೊಂದಿಗೆ ಸಭೆ

ಬಿಎಸ್​ವೈ ಅಖಾಡಕ್ಕೆ ಇಳಿದ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಹೈಕಮಾಂಡ್ ಕಳುಹಿಸಿಕೊಟ್ಟಿದೆ. ಅಸಮಾಧಾನಿತರ ಮನವೊಲಿಕೆ ಕಾರ್ಯಕ್ಕೆ ಸೂಚಿಸಿದೆ. ಹೈಕಮಾಂಡ್ ನಿರ್ದೇಶನದಂತೆ ಬಿಜೆಪಿ ಕಚೇರಿಗೆ ಆಗಮಿಸಿದ ಜೋಶಿ, ಕೊಪ್ಪಳ ನಾಯಕರ ಸಭೆಯಲ್ಲಿ ಪಾಲ್ಗೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟಿಕೆಟ್ ವಂಚಿತ ಸಂಸದ ಕರಡಿ ಸಂಗಣ್ಣ ಸೇರಿದಂತೆ ಜಿಲ್ಲಾ ನಾಯಕರು ಉಪಸ್ಥಿತರಿದ್ದರು. ಕೊಪ್ಪಳ ಟಿಕೆಟ್ ಕೈ ತಪ್ಪಿದ್ದಕ್ಕೆ ಆಕ್ರೋಶಗೊಂಡ ಸಂಗಣ್ಣ ಯಾವ ಕಾರಣಕ್ಕೆ ತನಗೆ ಟಿಕೆಟ್ ತಪ್ಪಿದೆ ಅಂತ ಪ್ರಶ್ನಿಸಿದರು. ರಾಜ್ಯಾಧ್ಯಕ್ಷ ವಿಜಯೇಂದ್ರ, ಜನಾರ್ದನ ರೆಡ್ಡಿ, ಅರವಿಂದ್ ಬೆಲ್ಲದ್ ಎಲ್ಲರೂ ಸೇರಿ ಅವರನ್ನು ಸಮಾಧಾನಪಡಿಸಿದರು.

ಕೊಪ್ಪಳ ನಾಯಕರ ಸಭೆ

ಬಿಜೆಪಿ ಕಚೇರಿಗೆ ಆಗಮಿಸುವ ಮೊದಲೇ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಟಿಕೆಟ್ ವಂಚಿತ ಕರಡಿ ಸಂಗಣ್ಣ ಮಾತುಕತೆ ನಡೆಸಿದ್ದರು. ಆರ್ ಟಿ‌ ನಗರದ ನಿವಾಸದಲ್ಲಿ ತಮ್ಮ ಬೆಂಬಲಿಗರ ಜೊತೆಗೂಡಿ ಬೊಮ್ಮಾಯಿ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಅದಕ್ಕೂ ಮೊದಲು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿದ್ದರು.

ಇದನ್ನೂ ಓದಿ:'13 ವರ್ಷಗಳ ಬಳಿಕ ಬಿಜೆಪಿ ಕಚೇರಿಗೆ ಬಂದಿದ್ದೇನೆ': 'ಗಣಿಧಣಿ' ಜನಾರ್ದನ ರೆಡ್ಡಿ ಘರ್ ವಾಪ್ಸಿ - Janardhan Reddy Joins BJP

ABOUT THE AUTHOR

...view details