ಚಾಮರಾಜನಗರ :ಕಿವಿ ಚುಚ್ಚಿಸಲು ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ 6 ತಿಂಗಳ ಮಗು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಹಂಗಳ ಗ್ರಾಮದ ಆನಂದ್ ಮತ್ತು ಶುಭಾ ದಂಪತಿಯ 6 ತಿಂಗಳ ಗಂಡು ಶಿಶು ಅಸುನೀಗಿದೆ. ಶುಭಾ ಬೊಮ್ಮಲಾಪುರ ಸಮೀಪದ ಶೆಟ್ಟಹಳ್ಳಿ ಗ್ರಾಮದರಾಗಿದ್ದು, ಬಾಣಂತನಕ್ಕೆ ತವರಿಗೆ ಬಂದಿದ್ದರು. ಮಗುವಿಗೆ 6 ತಿಂಗಳಾದ ಹಿನ್ನೆಲೆ ಕಿವಿ ಚುಚ್ಚಿಸಲು ಮುಂದಾಗಿದ್ದೆವು. ಈ ವೇಳೆ ಆಸ್ಪತ್ರೆಗೆ ಕರೆತಂದಿದ್ದ ವೇಳೆ ಮಗುವಿನ ಎರಡು ಕಿವಿಗಳಿಗೆ ಅನಸ್ತೇಶಿಯಾ ಕೊಟ್ಟಿದ್ದು, ಚುಚ್ಚುಮದ್ದು ನೀಡಿದ ಸ್ವಲ್ಪಹೊತ್ತಿಗೆ ಬಾಯಲ್ಲಿ ನೊರೆ ಬಂದು ಮಗು ಅಸುನೀಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.