ಕರ್ನಾಟಕ

karnataka

ETV Bharat / entertainment

ಚಿತ್ರರಂಗದಲ್ಲಿ 'ನೆಪೋಟಿಸಂ': ಕಂಗನಾಗೆ ಸಿಕ್ತು ತೃಪ್ತಿಕರ ಉತ್ತರ; ಯಾರು, ಏನಂದ್ರು?

ನೆಪೋಟಿಸಂ ಬಗ್ಗೆ ನಟಿ ಕಂಗನಾ ರಣಾವತ್​ ಶೇರ್ ಮಾಡಿರುವ ಇನ್​​ಸ್ಟಾಗ್ರಾಮ್​ ಸ್ಟೋರಿ ನೆಟ್ಟಿಗರ ಗಮನ ಸೆಳೆದಿದೆ.

By ETV Bharat Karnataka Team

Published : Mar 1, 2024, 7:17 PM IST

Kangana Ranaut
ಕಂಗನಾ ರಣಾವತ್​​

ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಸ್ಟಾರ್ ಕಿಡ್ಸ್ ಬರೋದು ಹೊಸತೇನಲ್ಲ. ಜೊತೆಗೆ 'ನೆಪೋಟಿಸಂ' ಚರ್ಚೆ ಕೂಡ ನಿಲ್ಲಲ್ಲ. ಸ್ವಜನಪಕ್ಷಪಾತದ ಬಗ್ಗೆ ಹೆಚ್ಚು ದನಿ ಎತ್ತಿದವರು ಬಾಲಿವುಡ್​ ಅಭಿನೇತ್ರಿ ಕಂಗನಾ ರಣಾವತ್​​. ತಮ್ಮ ಬೋಲ್ಡ್​​ ಹೇಳಿಕೆಗಳಿಂದಲೇ ಜನಮನದಲ್ಲಿ ಉಳಿದುಕೊಂಡಿದ್ದಾರೆ. ನಟಿಯ ದಿಟ್ಟತನಕ್ಕೆ ಮೆಚ್ಚುಗೆಯೂ ವ್ಯಕ್ತವಾಗುತ್ತದೆ. ಇದೀಗ ಇದೇ 'ನೆಪೋಟಿಸಂ' ಬಗ್ಗೆ ಕಂಗನಾ ಇನ್​ಸ್ಟಾಗ್ರಾಮ್​ ಸ್ಟೋರಿ ಶೇರ್ ಮಾಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.

'ಸ್ವಜನಪಕ್ಷಪಾತ'ದ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಆರು ವರ್ಷಗಳ ನಂತರ "ತೃಪ್ತಿಕರ ಉತ್ತರ'' ಸಿಕ್ಕಿದೆ ಎಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಸ್ಟೋರಿನಲ್ಲಿ ನಟಿ ವಿವರಿಸಿದ್ದಾರೆ. 2017ರಲ್ಲಿ ಬಾಲಿವುಡ್​​ನ ಖ್ಯಾತ ನಿರ್ದೇಶಕ-ನಿರ್ಮಾಪಕ ಕರಣ್​​​ ಜೋಹರ್​ ನಡೆಸಿಕೊಡುವ 'ಕಾಫಿ ವಿಥ್ ಕರಣ್'ನ ಎಪಿಸೋಡ್​​ ಒಂದರ ನಂತರ ಈ ನೆಪೋಟಿಸಂ ಚರ್ಚೆ ಹುಟ್ಟಿಕೊಂಡಿತು. ಅತಿಥಿಯಾಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕಂಗನಾ, ಕರಣ್ ಜೋಹರ್ ಅವರು ಸಿನಿಮಾ ರಂಗದಲ್ಲಿ 'ನೆಪೋಟಿಸಂ' ಅನ್ನು ಪ್ರಮೋಟ್​​​ ಮಾಡುತ್ತಿದ್ದಾರೆಂದು ಆರೋಪಿಸಿದ್ದರು.

ಕರಣ್​​-ಕಂಗನಾ ಕೋಲ್ಡ್​​ ವಾರ್​​ ಮುಂದುವರಿದಿದೆ ಅನ್ನೋದು ನೆಟ್ಟಿಗರ ಅಭಿಪ್ರಾಯ. ಅಲ್ಲದೇ, 2020ರಲ್ಲಿ ಬಾಲಿವುಡ್​​ನಲ್ಲಿ ಬೆಳೆಯುತ್ತಿದ್ದ ನಟ ಸುಶಾಂತ್ ಸಿಂಗ್ ರಜ್​​ಪೂತ್ ಅವರ ದುರಂತ ಸಾವಿನ ನಂತರ ಈ 'ನೆಪೋಟಿಸಂ' ಚರ್ಚೆ ವೇಗ ಪಡೆದುಕೊಂಡಿತು. ಸಮಯ ಕಳೆದರೂ, ಸ್ಟಾರ್ ಕಿಡ್ಸ್​ಗೆ ಸುಲಭವಾಗಿ ಅವಕಾಶ ಸಿಕ್ಕಾಗ ಅಥವಾ ಈಗಾಗಲೇ ಗುರುತಿಸಿಕೊಂಡಿರುವ ಕಲಾವಿದರ ಸಿನಿಮಾಗಳು ಹಿನ್ನೆಡೆ ಕಂಡರೂ ಕೂಡ ಅವಕಾಶಗಳು ಸಿಕ್ಕಾಗ ಈ 'ನೆಪೋಟಿಸಂ' ಅನ್ನೋ ಚರ್ಚೆಯ ದನಿ ಏರುತ್ತದೆ.

ಕಂಗನಾ ರಣಾವತ್​​ ಇನ್​ಸ್ಟಾಗ್ರಾಮ್​ ಸ್ಟೋರಿ

ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನೆಪೋಟಿಸಂ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದಕ್ಕೆ, "ನಾನು ಸ್ವಜನಪಕ್ಷಪಾತ ಎಂಬ ದೊಡ್ಡ ಚರ್ಚೆ ಹುಟ್ಟುಹಾಕಿ 6 ವರ್ಷಗಳು ಕಳೆದಿವೆ. ಈ ಬಗ್ಗೆ ಹಲವರಲ್ಲಿ ಕೇಳಲಾಯಿತು. ಆದರೆ ಈ ಪ್ರಶ್ನೆಗೆ ಮೊದಲ ಬಾರಿ ತೃಪ್ತಿಕರ ಉತ್ತರವನ್ನು ಕಂಡುಕೊಂಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಗಡ್ಕರಿ ಮಾತಿನಿಂದ ಪ್ರಭಾವಿತರಾದ ಕಂಗನಾ, ಸ್ವಜನಪಕ್ಷಪಾತದ ಬಗೆಗಿನ ಅವರ ನಿಲುವನ್ನು ಶ್ಲಾಘಿಸಿದರು.

ಇದನ್ನೂ ಓದಿ:ಎಕಾನಮಿ ಕ್ಲಾಸ್‌ನಲ್ಲಿ ಸೂಪರ್​ ಸ್ಟಾರ್ ರಜನಿಕಾಂತ್​ ಪ್ರಯಾಣ: ವಿಡಿಯೋ ಹಂಚಿಕೊಂಡ ನಟ ಜೀವ

ಈ ವಿಡಿಯೋದಲ್ಲಿ, ಗಡ್ಕರಿ ತಮ್ಮ ಪ್ರಯಾಣವನ್ನು ವಿವರಿಸಿದ್ದಾರೆ. ಪಕ್ಷದ ಪೋಸ್ಟರ್‌ಗಳನ್ನು ಹಾಕುವ ಮೂಲಕ ತಳಮಟ್ಟದಿಂದ ಪ್ರಯಾಣ ಪ್ರಾರಂಭವಾಯಿತು. ಕಠಿಣ ಪರಿಶ್ರಮದಿಂದ ಇಲ್ಲಿವರೆಗೆ ಬಂದಿದ್ದೇನೆ ಎಂಬುದಾಗಿ ತಿಳಿಸಿದರು. ಅಲ್ಲದೇ ತಮ್ಮ ಕುಟುಂಬದಿಂದ ಯಾರಾದರೂ ರಾಜಕೀಯಕ್ಕೆ ಬರಲು ಬಯಸಿದರೆ, ಅವರು ನನ್ನ ಸ್ಥಾನವನ್ನು ಬಳಸಿಕೊಳ್ಳದೇ ಅಥವಾ ಉನ್ನತ ಹುದ್ದೆಗಳನ್ನು ಹುಡುಕದೇ ತಳಮಟ್ಟದಿಂದಲೇ ಪ್ರಾರಂಭಿಸಬೇಕಾಗುತ್ತದೆ ಎಂಬುದನ್ನೂ ಸ್ಪಷ್ಟಪಡಿಸಿದರು. ಅಲ್ಲದೇ, ನನ್ನ ಸಂಪತ್ತನ್ನಷ್ಟೇ ನನ್ನ ಕುಟುಂಬಸ್ಥರು ಪಡೆಯಬಹುದು. ಆದರೆ ರಾಜಕೀಯ ಪರಂಪರೆಯು ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ಸೇರಿದೆ ಎಂಬುದನ್ನು ಒತ್ತಿ ಹೇಳಿದರು.

ಇದನ್ನೂ ಓದಿ:ಪ್ರೆಗ್ನೆನ್ಸಿ ಅನೌನ್ಸ್​​ಮೆಂಟ್​​ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪ್​ವೀರ್​ - ವಿಡಿಯೋ

ABOUT THE AUTHOR

...view details