ಕರ್ನಾಟಕ

karnataka

ETV Bharat / bharat

ಆರ್​ಎಸ್​ಎಸ್​ ಮೌನ ಪ್ರಚಾರದಿಂದ ಗೆದ್ದಿತಾ ಬಿಜೆಪಿ? ದೆಹಲಿಯಲ್ಲಿ ಸಂಘ-ಕಾರ್ಯಕರ್ತರು ನಡೆಸಿದ ಸಭೆಗಳೆಷ್ಟು? - DELHI ELECTIONS 2025

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆರ್​ಎಸ್​ಎಸ್​ ಸಕ್ರಿಯವಾಗಿ ಕೆಲಸ ಮಾಡಿದೆ ಎಂದು ಮೂಲಗಳು ಹೇಳಿವೆ.

ದೆಹಲಿ ಗೆಲುವಿನ ನಂತರ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ದೆಹಲಿ ಗೆಲುವಿನ ನಂತರ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ (IANS)

By PTI

Published : Feb 9, 2025, 2:18 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಣಾಮಕಾರಿ ಮತ್ತು ಜವಾಬ್ದಾರಿಯುತ ಸರ್ಕಾರವನ್ನು ಆಯ್ಕೆ ಮಾಡುವಂತೆ ಮತದಾರರ ಮನವೊಲಿಸಲು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್ಎಸ್)ವು ತನ್ನಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿತ್ತು ಹಾಗೂ ಪ್ರಯತ್ನಗಳು ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಜಯಕ್ಕೆ ಬಹುದೊಡ್ಡ ಕೊಡುಗೆ ನೀಡಿವೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ಪಕ್ಷಗಳ ತೀವ್ರ ಪೈಪೋಟಿಯ ಚುನಾವಣಾ ಪ್ರಚಾರದ ಮಧ್ಯೆ, ಆರ್​ಎಸ್ಎಸ್ ಸ್ವಯಂಸೇವಕರು ಮೌನವಾಗಿಯೇ ಮತದಾರರ ಜಾಗೃತಿ ಅಭಿಯಾನವನ್ನು ನಡೆಸಿದರು. ದೆಹಲಿಯಲ್ಲಿ ಸ್ವಚ್ಛತೆಯ ಕೊರತೆ, ಕುಡಿಯುವ ನೀರು ಸರಬರಾಜು, ಆರೋಗ್ಯ ಸೇವೆಗಳು, ವಾಯುಮಾಲಿನ್ಯ ಸಮಸ್ಯೆಗಳು ಮತ್ತು ಯಮುನಾ ನದಿಯನ್ನು ಶುಚಿಗೊಳಿಸುವಿಕೆಯಂತಹ ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಆರ್​ಎಸ್​ಎಸ್​ ದೆಹಲಿಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಡ್ರಾಯಿಂಗ್ ರೂಮ್ ಸಭೆಗಳನ್ನು (ಸಣ್ಣ ಗುಂಪು ಸಭೆಗಳು) ನಡೆಸಿತ್ತು ಎಂದು ಹೇಳಲಾಗಿದೆ.

ಈ ಸಭೆಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ತನ್ನ 10 ವರ್ಷಗಳ ಆಡಳಿತದಲ್ಲಿ ಮಾಡಿದ ಭ್ರಷ್ಟಾಚಾರ ಮತ್ತು ಹಲವಾರು ಭರವಸೆಗಳನ್ನು ಈಡೇರಿಸದಿರುವ ವಿಷಯವನ್ನು ಎತ್ತಿ ತೋರಿಸುವ ಮೂಲಕ ಆಮ್ ಆದ್ಮಿ ಪಕ್ಷದ (ಎಎಪಿ) ದೆಹಲಿ ಮಾಡೆಲ್ ಆಡಳಿತದ ಬಗೆಗಿನ ಭ್ರಮೆಯನ್ನು ಕಳಚಲು ಪ್ರಯತ್ನಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಸಭೆಗಳಲ್ಲಿ ದೆಹಲಿಯಲ್ಲಿನ ಅಕ್ರಮ ವಲಸಿಗರ ವಿಷಯದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

"ದ್ವಾರಕಾ ಒಂದರಲ್ಲೇ ಕನಿಷ್ಠ 500 ಡ್ರಾಯಿಂಗ್ ರೂಮ್ (ಸಣ್ಣ ಗುಂಪು) ಸಭೆಗಳು ನಡೆದಿವೆ" ಎಂದು ಆರ್​ಎಸ್ಎಸ್ ಮೂಲಗಳು ಪಿಟಿಐಗೆ ತಿಳಿಸಿವೆ.

"ಇಂತಹ ಸಭೆಗಳಲ್ಲಿ ಆರ್​ಎಸ್ಎಸ್ ಸ್ವಯಂಸೇವಕರು ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಮಾತ್ರ ಎತ್ತಿ ತೋರಿಸಿ, ಅವುಗಳ ಬಗ್ಗೆ ಮಾತ್ರ ಚರ್ಚಿಸಿದ್ದರು. ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸಿ ಮತ ಚಲಾಯಿಸುವಂತೆ ಅವರು ನೇರವಾಗಿ ಮತದಾರರಿಗೆ ಹೇಳಲಿಲ್ಲ. ಜನರಿಗೆ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲಾಯಿತು ಮತ್ತು ಪರಿಣಾಮಕಾರಿ ಹಾಗೂ ಜವಾಬ್ದಾರಿಯುತ ಸರ್ಕಾರವನ್ನು ಆಯ್ಕೆ ಮಾಡಲು ತಮ್ಮ ಮತಗಳನ್ನು ಚಲಾಯಿಸುವಂತೆ ಪ್ರೇರೇಪಿಸಲಾಯಿತು" ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಆರ್​ಎಸ್ಎಸ್ ಸ್ವಯಂಸೇವಕರು ಚುನಾವಣೆಗೆ ಒಂದು ತಿಂಗಳು ಮುಂಚಿತವಾಗಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದರು.

ಎಎಪಿಗೆ ಸಾಕಷ್ಟು ಬೆಂಬಲವಿರುವ ಕೊಳೆಗೇರಿಗಳು ಮತ್ತು ಅನಧಿಕೃತ ಕಾಲೊನಿಗಳಲ್ಲಿ ಸಹ ಸಣ್ಣ ಗುಂಪು ಸಭೆಗಳನ್ನು ನಡೆಸಲಾಯಿತು ಎಂದು ತಿಳಿದು ಬಂದಿದೆ. ಜಾಗೃತಿ ಮೂಡಿಸಲು ಆರ್​ಎಸ್ಎಸ್ ಕಾರ್ಯಕರ್ತರು ಈ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾನ ಮನಸ್ಕ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯ ಸೈದ್ಧಾಂತಿಕ ಅಡಿಪಾಯದ ಸಂಘಟನೆಯಾಗಿರುವ ಆರ್​ಎಸ್ಎಸ್ ಮತದಾರರನ್ನು ತಲುಪುವ ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ. ಆದಾಗ್ಯೂ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಪ್ರದರ್ಶನದ ನಂತರ, ಇತ್ತೀಚಿನ ತಿಂಗಳುಗಳಲ್ಲಿ ಬಿಜೆಪಿ ಭರ್ಜರಿ ವಿಜಯದೊಂದಿಗೆ ಅಧಿಕಾರವನ್ನು ಉಳಿಸಿಕೊಂಡ ಎರಡು ರಾಜ್ಯಗಳಾದ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಆರ್‌ಎಸ್ಎಸ್ ಹೊಸ ಉತ್ಸಾಹದಿಂದ ಇಂತಹ ಅಭಿಯಾನಗಳನ್ನು ಪ್ರಾರಂಭಿಸಿದೆ.

ಅದರಂತೆ ದೆಹಲಿಯಲ್ಲಿಯೂ ಬಿಜೆಪಿ ಆರ್​ಎಸ್ಎಸ್ ಸಹಯೋಗದೊಂದಿಗೆ ಬೃಹತ್ ಅಭಿಯಾನವನ್ನು ನಡೆಸಿತು. ಆರ್‌ಎಸ್ಎಸ್ ಹೆಸರಿಗಾಗಿ ಅಥವಾ ಪ್ರತಿಷ್ಠೆಗಾಗಿ ಕೆಲಸ ಮಾಡುವುದಿಲ್ಲ. ಇದು ಪರದೆಯ ಹಿಂದೆ ಇದ್ದು ಕೆಲಸ ಮಾಡುವುದರಲ್ಲಿ ನಂಬಿಕೆ ಇಟ್ಟಿದೆ ಎಂದು ಮೂಲಗಳು ಒತ್ತಿಹೇಳಿವೆ. ಬಿಜೆಪಿ ಶನಿವಾರ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಿ 26 ವರ್ಷಗಳ ನಂತರ ನಗರದಲ್ಲಿ ಅಧಿಕಾರಕ್ಕೆ ಮರಳಿದೆ. ಚುನಾವಣಾ ಆಯೋಗದ ವೆಬ್ ಸೈಟ್ ಪ್ರಕಾರ, 70 ಸ್ಥಾನಗಳಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಿದೆ. ಎಎಪಿ 22 ಸ್ಥಾನಗಳನ್ನು ಗೆಲ್ಲಲಷ್ಟೇ ಸಾಧ್ಯವಾಗಿದೆ.

ಇದನ್ನೂ ಓದಿ: ಆಪ್​ ಕೆಡವಿ ದೆಹಲಿ ಗದ್ದುಗೆ ಏರಿದ ಬಿಜೆಪಿ : ಬಲ ಕಳೆದುಕೊಂಡ ವಿಪಕ್ಷಗಳ INDIA ಮೈತ್ರಿಕೂಟ

ABOUT THE AUTHOR

...view details