ಸುಳ್ಯದಲ್ಲಿ ಕಾಡಾನೆ ಸಂಚಾರ: ಎಚ್ಚರ ವಹಿಸುವಂತೆ ಅರಣ್ಯ ಇಲಾಖೆ ಮನವಿ
ಸುಳ್ಯ: ತಾಲೂಕಿನ ಪೆರಾಜೆ, ಬಿಳಿಯಾರು ಪ್ರದೇಶದಲ್ಲಿ ಕಾಡಾನೆಯೊಂದು ಕಂಡುಬಂದಿದ್ದು, ಜನರಲ್ಲಿ ಆತಂಕ ಎದುರಾಗಿದೆ. ರಾತ್ರಿ ಸಂಚರಿಸುವ ಜನರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆನೆಯು ಪ್ರತಿ ವರ್ಷವೂ ಕಡಬದ ಸುಬ್ರಹ್ಮಣ್ಯ ವಲಯದಿಂದ ಸುಳ್ಯದ ಪಂಜ ಮೂಲಕ ಮಡಿಕೇರಿಯ ಭಾಗಮಂಡಲವರೆಗೂ ಇದೇ ದಾರಿಯಲ್ಲಿ ಸಂಚರಿಸುತ್ತದೆ ಎನ್ನಲಾಗಿದೆ. ಈ ಬಗ್ಗೆ 'ಈಟಿವಿ ಭಾರತ' ಜೊತೆಗೆ ಮಾತನಾಡಿದ ಆರ್ಎಫ್ಒ ಗಿರೀಶ್, ಆನೆ ಅದರ ಪಾಡಿಗೆ ಅದು ತನ್ನ ದಾರಿಯಲ್ಲೇ ಸಂಚರಿಸುತ್ತಿದೆ. ಯಾರಿಗೂ ತೊಂದರೆ ನೀಡಿದ ಮಾಹಿತಿ ಇಲ್ಲ. ಆದರೂ ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವ ಜನರು, ಕೃಷಿ ತೋಟಗಳಿಗೆ ಹೋಗುವ ಕೃಷಿಕರು ಎಚ್ಚರಿಕೆ ವಹಿಸಬೇಕು. ತೊಂದರೆಯಾದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.