ಧಾರವಾಡದಲ್ಲಿ ಜೋರು ಮಳೆ: ತುಪ್ಪರಿಹಳ್ಳದ ತಾತ್ಕಾಲಿಕ ಸೇತುವೆ ಮುಳುಗಡೆ, ಗ್ರಾಮಗಳಿಗೆ ಜಲಕಂಟಕ!
ಧಾರವಾಡದಲ್ಲಿ ನಿನ್ನೆ ರಾತ್ರಿ ಸುರಿದ ಜೋರು ಮಳೆಗೆ ತುಪ್ಪರಿಹಳ್ಳಕ್ಕೆ ನಿರ್ಮಿಸಿದ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ. ಹಾರೋಬೆಳವಡಿ ಗ್ರಾಮದ ಹೊರವಲಯದಲ್ಲಿರುವ ಸೇತುವೆ ತಾತ್ಕಾಲಿಕ ಮುಳುಗಡೆಗೊಂಡಿದೆ. ಧಾರವಾಡ, ವಿಜಯಪುರ, ಬಾಗಲಕೋಟೆ, ಯಲ್ಲಮ್ಮನಗುಡ್ಡ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕದ ರಸ್ತೆ ಇದಾಗಿತ್ತು. ರಾಜ್ಯ ಹೆದ್ದಾರಿಗೆ ನಿರ್ಮಿಸಿದ ಸೇತುವೆ ಕಳೆದ ಎರಡು ತಿಂಗಳ ಹಿಂದೆ ಸುರಿದ ಮಳೆಗೆ ಕುಸಿದಿತ್ತು. ಈ ಸೇತುವೆ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿತ್ತು. ಆದಕಾರಣ ಜಿಲ್ಲಾಡಳಿತದಿಂದ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಆದ್ರೆ ಕಳೆದ ರಾತ್ರಿ ಸುರಿದ ಮಳೆಗೆ ಈ ಸೇತುವೆಯೂ ಮುಳುಗಡೆಯಾಗಿದೆ. ಮಳೆ ಪ್ರಮಾಣ ಹೆಚ್ಚಾದರೆ ತುಪ್ಪರಿಹಳ್ಳದ ನೀರು ಹಲವು ಗ್ರಾಮಕ್ಕೆ ನುಗ್ಗುವ ಭೀತಿ ಎದುರಾಗಿದೆ.