ವಿಜಯಪುರ: ಕರೊನಾ ಭೀತಿ ಹಿನ್ನೆಲೆ ರಾಜ್ಯದಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ಸಂಪೂರ್ಣ ನೆಲಕಚ್ಚಿದೆ. ಬೆಳೆದ ಬೆಳೆ ರಫ್ತು ಮಾಡಲಾಗದೆ ಲಾಭ ಕೈಕೊಟ್ಟಿದೆ. ಇದರ ಜೊತೆಗೆ ದ್ರಾಕ್ಷಿ ಬೆಳೆಗೆ ತಗುಲಿರುವ ವಿವಿಧ ರೋಗಗಳಿಂದ ದ್ರಾಕ್ಷಿ ಬೆಳೆಗಾರ ಕಂಗಾಲಾಗಿದ್ದಾನೆ.
ನೆಲಕಚ್ಚಿದೆ ದ್ರಾಕ್ಷಿ ಬೆಳೆ: ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಆಗ್ರಹ
ರಾಜ್ಯದಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ಸಂಪೂರ್ಣ ನೆಲಕಚ್ಚಿದೆ. ಲಾಕ್ಡೌನ್ ಹಿನ್ನೆಲೆ ಬೆಳೆದ ಬೆಳೆ ರಫ್ತು ಮಾಡಲಾಗದೆ ಲಾಭ ಕೈಕೊಟ್ಟಿದೆ. ಇದರ ಜೊತೆಗೆ ದ್ರಾಕ್ಷಿ ಬೆಳೆಗೆ ತಗುಲಿರುವ ವಿವಿಧ ರೋಗಗಳಿಂದ ದ್ರಾಕ್ಷಿ ಬೆಳೆಗಾರ ಕಂಗಾಲಾಗಿದ್ದಾನೆ.
ವಿಜಯಪುರ ಜಿಲ್ಲೆಯಲ್ಲಿ ಪ್ರತಿ ವರ್ಷ 14,800 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಶೇ. 90ರಷ್ಟು ಒಣದ್ರಾಕ್ಷಿ ಹಾಗೂ ಶೇ. 10ರಷ್ಟು ಹಸಿ ದ್ರಾಕ್ಷಿ ಮಾರಾಟಗೊಳ್ಳುತ್ತಿದೆ. ಪ್ರತಿ ಹೆಕ್ಟೇರ್ಗೆ ಅಂದಾಜು 10 ಟನ್ ಒಣ ದ್ರಾಕ್ಷಿ ಬರುತ್ತದೆ. ಸುಮಾರು 1,48,000 ಟನ್ ಒಣದ್ರಾಕ್ಷಿ ಉತ್ಪಾದನೆಯಾಗುತ್ತದೆ. ಆದರೆ ಕಳೆದ ವರ್ಷದ ಅಂತ್ಯದಲ್ಲಿ ದ್ರಾಕ್ಷಿಗೆ ಡೌನಿ ರೋಗ ಆವರಿಸಿದ್ದರಿಂದ ಉತ್ಪಾದನೆ ಕುಂಠಿತಗೊಂಡಿದೆ. ಜಿಲ್ಲೆಯಲ್ಲಿ 7,093 ರೈತರು ಪ್ರತಿ ಎಕರೆಗೆ 14 ಸಾವಿರದಂತೆ ಒಟ್ಟು 9,43 ಕೋಟಿ ರೂ. ಹಣವನ್ನು ತುಂಬಿ ವಿಮೆ ನೋಂದಣಿ ಮಾಡಿಕೊಂಡಿದ್ದಾರೆ. ಹವಾಮಾನ ವರದಿ ಆಧರಿಸಿ ವಿಮೆ ಕಂಪನಿಗಳು ವಿಮೆ ಮೊತ್ತ ನೀಡಬೇಕಾಗಿತ್ತು. ಆದರೆ ಈವರೆಗೆ ವಿಮೆ ಹಣ ಸಹ ಬಂದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಪ್ರಸ್ತುತ ಬೆಲೆ ಕುಸಿತದಿಂದ ಒಣ ದ್ರಾಕ್ಷಿ ವಹಿವಾಟು ಕಡಿಮೆ ಆಗಿದೆ. ಆನ್ಲೈನ್ ಟ್ರೇಡಿಂಗ್ ಮೂಲಕ ಮೇ ಕೊನೆಯ ವಾರ 2 ಕೋಟಿ ರೂಪಾಯಿ ವ್ಯವಹಾರ ನಡೆದರೆ, ಜೂನ್ ಮೊದಲ ವಾರ 6 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ರೈತರು ಸಂಕಷ್ಟದಿಂದ ತಪ್ಪಿಸಿಕೊಳ್ಳಲು ನಿಂಬೆ ಅಭಿವೃದ್ಧಿ ಮಂಡಳಿ ಮಾದರಿಯಲ್ಲಿ ದ್ರಾಕ್ಷಿ ಬೆಳೆಗಾರರ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಹಲವು ವರ್ಷಗಳಿಂದ ಬೇಡಿಕೊಳ್ಳಲಾಗುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ನೆರವಾಗಬೇಕಿದೆ.